ಸ್ವಾತಂತ್ರ್ಯ ದಿನಾಚರಣೆಯ ದಿನವಾದ ಇಂದು ಉಡುಪಿಯ ಅಜ್ಜರಕಾಡುವಿನಲ್ಲಿರುವ ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಧ್ವಜಾರೋಹಣ ನೆರವೇರಿಸಿ,. ಬಳಿಕ ಪಥ ಸಂಚಲನ ನಡೆಸಿದ ಶಾಲಾ ಮಕ್ಕಳಿಂದ ಗೌರವ ರಕ್ಷೆ ಸ್ವೀಕರಿಸಿ, ಸ್ವಾತಂತ್ರ್ಯ ದಿನಾಚರಣೆಯನ್ನು ಉದ್ದೇಶಿಸಿ ಜಿಲ್ಲಾ ಉಸ್ತುವಾರಿ ಸಚಿವೆ ಶ್ರೀಮತಿ ಲಕ್ಷೀ ಹೆಬ್ಬಾಳ್ಕರ್ ಮಾತು ಇಂದು ಸುದಿನ.. ನಮೆಲ್ಲರ ಪಾಲಿಗೆ ಸಂತಸದ ದಿನ.. ನಮಗೆ ಸ್ವಾತಂತ್ರ್ಯ ತಂದುಕೊಟ್ಟ ಮಹಾತ್ಮರನ್ನು ಸ್ಮರಿಸುವ ದಿನ. ನಾವು ನಡೆದು ಬಂದ ಹಾದಿಯನ್ನು ಇಂದು ನಾವು ಮೆಲುಕು ಹಾಕಿಕೊಂಡು, ಮುಂದೆ ಸಾಗಬೇಕಾದ ದಿನ. ದೇಶಾದ್ಯಂತ ಇಂದು ಆಚರಿಸುತ್ತಿರುವ 77 ನೇ ಸ್ವಾತಂತ್ರ್ಯ ಹಬ್ಬದ ಈ ಶುಭ ಸಂದರ್ಭದಲ್ಲಿ, ಅತ್ಯಮೂಲ್ಯವಾದ ಈ ನಮ್ಮ ಸ್ವಾತಂತ್ರ್ಯವನ್ನು ಕಾಪಾಡಿಕೊಳ್ಳುವ ದೀಕ್ಷೆ ತೊಡುವ ದಿನ ಕೂಡ ಇದಾಗಿದೆ. ಭಾರತ ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸದಲ್ಲಿ, ನಮ್ಮ ದೇಶದ ಸ್ವಾತಂತ್ರ್ಯ ಎಂದರೆ ತ್ಯಾಗ, ಬಲಿದಾನಗಳ ಫಲ. ಇಡೀ ಭಾರತವೇ ಬ್ರಿಟಿಷರ ವಿರುದ್ಧ ಹೋರಾಡಿ ದಾಸ್ಯದಿಂದ ಮುಕ್ತವಾಗಿ ಸ್ವಾತಂತ್ರ್ಯ ಪಡೆದುಕೊಂಡಿದ್ದೇವೆ. ನಾವೆಲ್ಲ ಇಂದು ದೇಶದ ಉಜ್ವಲ ಭವಿಷ್ಯಕ್ಕಾಗಿ ಕನಸು ಕಟ್ಟಿಕೊಳ್ಳಲು ಇಲ್ಲಿ ಸೇರಿದ್ದೇವೆ. ನಮ್ಮ ಕನಸುಗಳ ಜೊತೆ ಜೊತೆಗೆ ನಮ್ಮ ಮಹಾತ್ಮರ ಕನಸುಗಳು, ಆಶಯಗಳನ್ನ ನನಸಾಗಿಸಲು ನಾವೆಲ್ಲ ಇಂದು ಸಂಕಲ್ಪ ಮಾಡೋಣ.

