
ಮೂಳೂರು ಭಾರತ ಪೆಟ್ರೋಲಿಯಂ ಪಂಪ್ನಲ್ಲಿ ತನ್ನ ಕಾರಿಗೆ ಡೀಸೆಲ್ ಹಾಕಿಸಲು ಬಂದ ಚಾಲಕ ಧಾಂದಲೆ ಮಾಡಿ ಸಿಬ್ಬಂದಿಗೆ ಹಲ್ಲೆ ನಡೆಸಿರುವ ಘಟನೆ ನಡೆದಿದೆ. ಘಟನೆಗೆ ಸಂಬಂಧಿಸಿ ಅಪರಿಚಿತ ಚಾಲಕನ ವಿರುದ್ಧ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ರಾಷ್ಟ್ರೀಯ ಹೆದ್ದಾರಿ 66ರ ಮೂಳೂರು ಭಾರತ್ ಪೆಟ್ರೋಲಿಯಂ ಪಂಪ್ ಗೆ ಬಂದ ಕಾರು ಚಾಲಕ, ತನ್ನ ಕಾರಿಗೆ ಎರಡು ಸಾವಿರ ರೂಪಾಯಿ ಮೊತ್ತದ ಡೀಸೆಲ್ ಹಾಕುವಂತೆ ಹೇಳಿದ್ದನು.ಈ ವೇಳೆ ಪಂಪ್ ಸಿಬ್ಬಂದಿ ಅಂಕಿತ್ ಎಂಬಾತ ಡೀಸೆಲ್ ಹಾಕುವ ಬದಲು ಪೆಟ್ರೋಲ್ ಗನ್ ಎತ್ತಿದ್ದು ಇದರಿಂದ ಆಕ್ರೋಶಿತನಾದ ಚಾಲಕ ಪೆಟ್ರೋಲ್ ಮತ್ತು ಡೀಸೆಲ್ ಯುನಿಟ್ಗಳಿಗೆ ಕಾಲಿನಿಂದ ತುಳಿದು ಸೈಪಿಂಗ್ ಮೆಷೀನ್ ಅನ್ನು ಕಿತ್ತುಕೊಂಡು ಒಡೆದು ಹಾಕಿ, ಧಾಂದಲೆ ನಡೆಸಿದ್ದನು.ಈ ವೇಳೆ ಘಟನೆಯನ್ನು ವಿಚಾರಿಸಲು ಬಂದ ಪಂಪ್ನ ಸೂಪರ್ವೈಸರ್ ಪುಷ್ಪರಾಜ್ ಎಂಬವರು, ನಿಮ್ಮಹಣ ಹಿಂದೆ ಹಾಕಿದ್ದೇವೆ ಎಂದರೂ ಕೇಳದೆ ಅವರ ಮೇಲೆ ಹಲ್ಲೆನಡೆಸಿರುವುದಾಗಿ ಆರೋಪಿಸಲಾಗಿದೆ. ಹಲ್ಲೆಗೊಳಗಾದ ಸೂಪರ್ವೈಸರ್ ಪುಷ್ಪರಾಜ್ ಉಡುಪಿಯ ಅಜ್ಜರಕಾಡು ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ ಎಂದು ತಿಳಿದು ಬಂದಿದೆ.

