
ಬೆಂಗಳೂರು, ಅಕ್ಟೋಬರ್ 12; ವಿಜಯನಗರ ಜಿಲ್ಲೆಯ ಕೂಡ್ಲಗಿ ಕ್ಷೇತ್ರದ ಮಾಜಿ ಶಾಸಕ ಎನ್. ಟಿ. ಬೊಮ್ಮಣ್ಣ ವಿಧಿವಶರಾದರು. ಎರಡು ಬಾರಿ ಶಾಸಕರಾಗಿ ಅವರು ಆಯ್ಕೆಯಾಗಿದ್ದರು. 79 ವರ್ಷದ ಎನ್. ಟಿ. ಬೊಮ್ಮಣ್ಣ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ತುಮಕೂರಿನ ಖಾಸಗಿ ಆಸ್ಪತ್ರೆಯಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದರು. ಮಂಗಳವಾರ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಕಾಂಗ್ರೆಸ್ ಪಕ್ಷದಿಂದ ಎನ್. ಟಿ. ಬೊಮ್ಮಣ್ಣ ಎರಡು ಬಾರಿ ಕೂಡ್ಲಗಿ ಕ್ಷೇತ್ರದಿಂದ ಕಣಕ್ಕಿಳಿದು, ಗೆಲುವು ಸಾಧಿಸಿದ್ದರು. 2018ರ ಚುನಾವಣೆಯಲ್ಲಿ ಅವರು ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿದು, 39,272 ಮತಗಳನ್ನು ಪಡೆದು ಸೋಲು ಕಂಡಿದ್ದರು. ಎನ್. ಟಿ. ಬೊಮ್ಮಣ್ಣ ಅನುಭವಿ ರಾಜಕಾರಣಿ. ಕೂಡ್ಲಿಗಿ ಕ್ಷೇತ್ರದ ‘ಹಳೆಯ ಹುಲಿ’ ಎಂದೇ ಖ್ಯಾತರಾಗಿದ್ದರು. ಜನಸೇವೆ, ಶಿಕ್ಷಣ ಸಂಸ್ಥೆಗಳು, ಜನಪರ ಹೋರಾಟಗಳ ಮೂಲಕ ಚಿರಪರಿಚಿತರಾಗಿದ್ದ ಎನ್. ಟಿ. ಬೊಮ್ಮಣ್ಣ, ರಾಜಕೀಯದಲ್ಲಿ ಹಲವು ಏಳುಬೀಳುಗಳನ್ನು ಕಂಡವರು.1985ರ ಚುನಾವಣೆಯಲ್ಲಿ ಎನ್. ಟಿ. ಬೊಮ್ಮಣ್ಣ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದು ಜಯಗಳಿಸಿದ್ದರು. 2018ರ ಚುನಾವಣೆಯಲ್ಲಿ ಕಾಂಗ್ರೆಸ್ನಿಂದ ಮತ್ತೆ ಎನ್. ಟಿ. ಬೊಮ್ಮಣ್ಣ ಹೆಸರು ಕೇಳಿ ಬಂದಿತ್ತು. ಆದರೆ ಟಿಕೆಟ್ ಸಿಕ್ಕಿರಲಿಲ್ಲ.ಆಗ ಎನ್. ಟಿ. ಬೊಮ್ಮಣ್ಣ ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಸಮ್ಮುಖದಲ್ಲಿ ಜೆಡಿಎಸ್ ಸೇರಿದ್ದರು. ಆದರೆ ಚುನಾವಣೆಯಲ್ಲಿ ಸೋಲು ಕಂಡಿದ್ದರು.

