×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಹರ್ಷ, ಪ್ರವೀಣ್ ನೆಟ್ಟಾರ್ ಹತ್ಯೆಗೆ ಸಂಘಪರಿವಾರ ತೋರಿಸಿದ ಕಾಳಜಿ ಬಾಳಿಗಾ ಕೊಲೆಗೆ ಯಾಕಿಲ್ಲ?- ಪ್ರೋ ನರೇಂದ್ರ ನಾಯಕ್

ಆರ್.ಟಿ.ಐ ಕಾರ್ಯಕರ್ತ ವಿನಾಯಕಾ ಬಾಳಿಗಾ ಹತ್ಯೆ ನಡೆದು 7 ವರುಷ ಸಂದಿದೆ. ಆದರೆ ಬಿಜೆಪಿ ಸರಕಾರದ ಒಬ್ಬನೇ ಒಬ್ಬ ಜನಪ್ರತಿನಿಧಿ ಈವರೆಗೂ ಬಾಳಿಗಾ ಮನೆಗೆ ಭೇಟಿ ನೀಡಲಿಲ್ಲ, ಬಾಳಿಗಾ ಸಹೋದರಿಯರಿಗೆ ಧೈರ್ಯ ತುಂಬಲಿಲ್ಲ, ಸರಕಾರದಿಂದ ಕನಿಷ್ಟ ಪರಿಹಾರವನ್ನೂ ಒದಗಿಸಿಕೊಡಲಿಲ್ಲ. ಇತ್ತೀಚೆಗೆ ಹರ್ಷ ಮತ್ತು ಪ್ರವೀಣ್ ನೆಟ್ಟಾರ್ ಸಾವಿಗೆ ಸ್ಪಂದಿಸಿದ ಸಂಘಪರಿವಾರ, ಬಿಜೆಪಿ ಸರಕಾರ ತಮ್ಮದೇ ಸಂಘಟನೆಯ ಕಾರ್ಯಕರ್ತ ವಿನಾಯಕ ಬಾಳಿಗಾ ಸಾವಿಗೆ ಯಾಕಾಗಿ ಸ್ಪಂದಿಸಿಲ್ಲ ಎಂದು ಪ್ರೋ ನರೇಂದ್ರನಾಯಕ್ ಆರ್.ಟಿ.ಐ ಕಾರ್ಯಕರ್ತ ವಿನಾಯಕ ಬಾಳಿಗಾ ಕೊಲೆಗೆ ಏಳು ವರುಷ ಸಂದ ಈ ದಿನದಂದು (21-3-2023) ವೆಂಕಟರಮಣ ದೇವಸ್ಥಾನದಿಂದ ಬಾಳಿಗಾ ಮನೆಯವರೆಗೆ ನಡೆದ ಮೆರವಣೆಗೆ, ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ಹಿಂದುತ್ವದ ಹೆಸರಲ್ಲಿ ಅಧಿಕಾರಕ್ಕೇರಿದ ಬಿಜೆಪಿ ಸರಕಾರ ಹಿಂದುಗಳಿಗೆ ಏನೇ ಅನ್ಯಾಯವಾದರೂ ಸಹಿಸೋದಿಲ್ಲ ಎಂದು ರೋಷ ವ್ಯಕ್ತಪಡಿಸುವ ಆ ಹೆಸರಲ್ಲಿ ಅರಾಜಕತೆ ಸೃಷ್ಟಿಸುವ ಸಂಘಪರಿವಾರ ಮತ್ತದರ ಬಿಜೆಪಿಯ ನಾಯಕರಿಗೆ ಬಾಳಿಗಾ ಸಾವಿಗೆ ನ್ಯಾಯ ಒದಗಿಸುವ ರೋಷ ಯಾಕೆ ಹುಟ್ಟಲೇ ಇಲ್ಲ?. ಅದೇ ಸಮುದಾಯದ ಸ್ಥಳೀಯ ಶಾಸಕ ವೇದವ್ಯಾಸ‌ ಕಾಮತ್ ಬಾಳಿಗಾ ಮನೆಗೆ ಈವರೆಗೂ ಭೇಟಿ ನೀಡದೆ, ಬಾಳಿಗಾ ಸಹೋದರಿಯನ್ನು ಸಂತೈಸುವುದಾಗಲಿ, ಪರಿಹಾರ ಕ್ರಮಕ್ಕೆ ಒತ್ತಾಯಿಸುವಂತಹ ಯಾವುದೇ ಕಾರ್ಯವನ್ನು ಮಾಡದೇ ಪರೋಕ್ಷವಾಗಿ ಕೊಲೆಗಟುಕರ ಪರವಾಗಿ ನಿಂತಿರುವಂತಹ ಅನುಮಾನಗಳು ಸಾರ್ವಜನಿಕರಲ್ಲಿ ಬಲವಾಗಿ ಮೂಡುತ್ತಿದೆ ಎಂದರು.

ಸಭೆಯನ್ನು ಉದ್ದೇಶಿಸಿ ಖ್ಯಾತ ಮನೋವೈದ್ಯರಾದ ಪಿ.ವಿ ಭಂಡಾರಿ, ನಾಗರಿಕ ಸೇವಾಟ್ರಸ್ಟ್ ನ ಸೋಮನಾಥ ನಾಯಕ್ , ಡಿಎಸ್ಎಸ್ ನ ಹಿರಿಯ ಮುಖಂಡರಾದ ಎಂ.ದೇವದಾಸ್ ಮಾತನಾಡಿದರು.

ಈ ವೇಳೆ ವಿನಾಯಕ ಬಾಳಿಗಾರ ಸಹೋದರಿಯರಾದ ಅನುರಾಧ ಬಾಳಿಗ, ಹರ್ಷ ಬಾಳಿಗ , ಮಾಜಿ ಉಪಮೇಯರ್ ಮಹಮ್ಮದ್ ಕುಂಜತ್ತಬೈಲ್ , ಮಾಜಿ ಕಾರ್ಪೊರೇಟರ್ ಗಳಾದ ಪ್ರಕಾಶ್ ಸಾಲ್ಯಾನ್, ಪದ್ಮನಾಭ ಅಮೀನ್, ಸಾಮರಸ್ಯ ಬಳಗದ ಮಂಜುಳಾ ನಾಯಕ್, ಡಿವೈಎಫ್ಐ ಜಿಲ್ಲಾಧ್ಯಕ್ಷರಾದ ಬಿ.ಕೆ ಇಮ್ತಿಯಾಜ್, ಕಾರ್ಮಿಕ ನಾಯಕ ಸುನೀಲ್‌ಕುಮಾರ್ ಬಜಾಲ್, ಡಿಎಸ್ಎಸ್ ಮುಖಂಡರಾದ ರಘು ಎಕ್ಕಾರ್, ಸರೋಜಿನಿ, ಡಿವೈಎಫ್ಐನ ನವೀನ್ ಕೊಂಚಾಡಿ, ಜಗದೀಶ್ ಬಜಾಲ್, ಪ್ರಮೀಳಾ ಶಕ್ತಿನಗರ, ಆಶಾ ಬೋಳೂರು, ಮಹಿಳಾ ಮುಖಂಡರಾದ ಅಸುಂತ ಡಿಸೋಜ, ಪ್ರಮೀಳಾ ದೇವಾಡಿಗ, ಭಾರತ ವಿದ್ಯಾರ್ಥಿ ಫೆಡರೇಶನ್ ನ ರೇವಂತ್ ಕದ್ರಿ, ವಿನೀತ್ ದೇವಾಡಿಗ , ಸಾಮಾಜಿಕ ಕಾರ್ಯಕರ್ತರಾದ ಸಂಜನಾ ಛಲವಾದಿ, ಜೆರಾಲ್ಡ್ ಟವರ್, ನೀರಜ್ ಪಾಲ್, ಟಿ. ಸಿ ಗಣೇಶ್ ,ಯುವ ವಕೀಲರಾದ ನಿತಿನ್ ಕುತ್ತಾರ್, ಸಮುದಾಯ ಸಂಘಟನೆಯ ವಾಸುದೇವ ಉಚ್ಚಿಲ್ ಮುಂತಾದವರು ಉಪಸ್ಥಿತರಿದ್ದರು.

ಸಭೆಯ ನೇತೃತ್ವವನ್ನು ವಹಿಸಿದ ಡಿವೈಎಫ್ಐ ಜಿಲ್ಲಾ ಕಾರ್ಯದರ್ಶಿ ಸಂತೋಷ ಬಜಾಲ್ ಪ್ರಸ್ತಾವಿಕ ಮಾತನಾಡಿ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *