
ಟೋಲ್ಗೇಟ್ – ಸಂತ್ರಸ್ತರಿಗೆ ಹೆಜಮಾಡಿ ಗ್ರಾಮ ಪಂಚಾಯತ್ ಸನಿಹದಲ್ಲೇ ನಿರ್ಮಿತಿ ಕೇಂದ್ರದ ಮೂಲಕ ನಿರ್ಮಿಸಲುದ್ದೇಶಿಸಿರುವ 14 ಮನೆಗಳ ಅಪೂರ್ಣ ಕಾಮಗಾರಿ ಮುಗಿಸಲಿಕ್ಕಾಗಿ ಕಾಪು ತಹಶೀಲ್ದಾರ್ ಶ್ರೀನಿವಾಸ ಮೂರ್ತಿ ಕುಲಕರ್ಣಿ ಅವರು ಸೂಚಿಸಿ ಇಂದು ಕರೆಯಲಾದ ಸಭೆಯಲ್ಲಿ ಯಾವುದೇ ತೀರ್ಮಾನಗಳಿಲ್ಲದೇ ಗದ್ದಲದಲ್ಲೇ ಮುಕ್ತಾಯಗೊಂಡಿದೆ. ಕಟ್ಟಡ ನಿರ್ಮಾಣದ ಗುತ್ತಿಗೆದಾರ ಸುಧಾಕರ್ ಕರ್ಕೇರ ಅವರು ತಾವು ತಮ್ಮ ಕೈಲಾದಷ್ಟು ಕಾಮಗಾರಿಯನ್ನು ನಿರ್ವಹಿಸಿದ್ದಾರೆ. ಆದರೆ ಸಂತ್ರಸ್ತರಿಂದ ನಿರ್ಮಿತಿ ಕೇಂದ್ರಕ್ಕೆ ಇನ್ನೂ ಹಲವು ಲಕ್ಷ ರೂ.ಗಳು ಪಾವತಿಗೆ ಬಾಕಿ ಇದೆ. ಈ ನಡುವೆ ಕಾರ್ಮಿಕ ಇಲಾಖೆಯ ಸವಲತ್ತು ಬಳಸಿಕೊಂಡು ಸಂತ್ರಸ್ತರೇ ಸ್ವತಃ ಕಾಮಗಾರಿ ನಿರ್ವಹಿಸುವ ನಿಟ್ಟಿನಲ್ಲಿ ತರಬೇತಿ ಏರ್ಪಡಿಸುತ್ತೇವೆ ಎಂದು ನಿರ್ಮಿತಿ ಕೇಂದ್ರದ ಸಚಿನ್ ಅವರು ಸೂಚಿಸಿದರು.ಅದಕ್ಕೂ ಕೆಲವರು ಹಿಂದೇಟು ಹಾಕುತ್ತಿರುವುದು ಸಭೆಯಲ್ಲಿದ್ದ ಕಾಪು ತಾ. ಪಂ.ಕಾರ್ಯನಿರ್ವಹಣಾಧಿಕಾರಿ ನವೀನ್ ಕುಮಾರ್ ಗಮನಕ್ಕೆ ಬಂತು. ಈವರೆಗೆ ಆದ ಕಾಮಗಾರಿಯ ದರಪಟ್ಟಿಯೊಂದಿಗೆ ಪರಸ್ಪರ ಒಪ್ಪಿಗೆಯಿಂದಲೇ ಸರಕಾರಿ ದರ ನಿರ್ಣಯಕಾರರು ಸೂಚಿಸುವ ಬೆಲೆ ನಿಗದಿಗೊಳಿಸಿ ಮಿಕ್ಕ ಹಣ ಪಾವತಿಗಾಗಿ ಪ್ರಸ್ತಾವನೆ ಇರಿಸಿದಾಗಲೂ ಯಾವುದೇ ನಿರ್ಣಯಕ್ಕೆ ಬರಲಾಗಲಿಲ್ಲ. ಈ ಸಂದರ್ಭ ಸಂತ್ರಸ್ತರು ಹಕ್ಕುಪತ್ರಕ್ಕಾಗಿ ಒತ್ತಾಯಿಸಿದರು. ಪರಸ್ಪರ ದೋಷಾರೋಪದ ಹಿನ್ನೆಲೆ ಎಲ್ಲ ಸಂತ್ರಸ್ತರೂ ನಿರ್ಗಮಿಸಿದರು. ಹೆಜಮಾಡಿ ಗ್ರಾ.ಪಂ.ಅಧ್ಯಕ್ಷ ಪಾಂಡುರಂಗ ಕರ್ಕೇರ, ಉಪಾಧ್ಯಕ್ಷೆ ಪವಿತ್ರಾ ಗಿರೀಶ್ ಸಭೆಯಲ್ಲಿದ್ದರು.

