
ಸಮಾಜದಲ್ಲಿ ಅಶಾಂತಿ ಸೃಷ್ಟಿಸಲು ಪ್ರಯತ್ನಿಸಿದ ಶಾಸಕ ಹರೀಶ್ ಪೂಂಜಾ ಅವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಬೆಳ್ತಂಗಡಿ ಯುವ ಕಾಂಗ್ರೆಸ್ ಅಧ್ಯಕ್ಷ ಅನಿಲ್ ಪೈ ಬೆಳ್ತಂಗಡಿ ಸರ್ಕಲ್ ಇನ್ಸ್ಪೆಕ್ಟರ್ ಅವರಿಗೆ ದೂರು ನೀಡಲಾಯಿತು. ಅಕ್ಟೋಬರ್ 13 ರಂದು ರಾತ್ರಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರನ್ನು ತಲವಾರು ಧಾಳಿ ನಡೆಸಿ ಕೊಲೆಗೆ ಪ್ರಯತ್ನಿಸಲಾಗಿದೆ. ಜಿಹಾದಿಗಳು ಕೊಲೆ ಮಾಡುವ ಉದ್ದೇಶದಿಂದ ಈ ಧಾಳಿ ನಡೆಸಲಾಗಿದೆ ಎಂದು ಪೋಲಿಸ್ ದೂರು ನೀಡಲಾಗಿತ್ತು. ದೂರಿನ ಆಧಾರದಲ್ಲಿ ತನಿಖೆ ನಡೆಸಿದಾಗ ಇಡೀ ಘಟನೆ ಸುಳ್ಳು ಎಂದು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಹೇಳಿದ್ದಾರೆ. ಆದರೆ ಶಾಸಕ ಹರೀಶ್ ಪೂಂಜಾ ವಾಹನ ಓವರ್ ಟೇಕ್ ಮಾಡಿರುವುದನ್ನು ತಿರುಚಿ ಇದೊಂದು ಜಿಹಾದ್ ಕೃತ್ಯ , ನಾನು ಹಿಂದುತ್ವಕ್ಕಾಗಿ ದುಡಿಯುತ್ತಿರುವ ಕಾರಣ ನನ್ನ ಕೊಲೆ ಪ್ರಯತ್ನ ಮಾಡಲಾಗಿದೆ ಎಂದು ಸುಳ್ಳು ಕಥೆ ಸೃಷ್ಟಿಸಿ ಸಮಾಜದಲ್ಲಿ ಗೊಂದಲ , ಅಶಾಂತಿ ಹಬ್ಬಿಸಿರುವ ಶಾಸಕ ಹರೀಶ್ ಪೂಂಜಾ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅನಿಲ್ ಪೈ ಒತ್ತಾಯಿಸಿದ್ದಾರೆ. ಈ ಸಂದರ್ಭದಲ್ಲಿ ಯುವ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಅಭಿನಂದನ್ ಹರೀಶ್ ಕುಮಾರ್ , ಅಶ್ವಥ್ ರಾಜ್ ಕಲ್ಲಾಜೆ , ಅಭಿದೇವ್ ಅರಿಗ ಧರ್ಮಸ್ಥಳ , ಯುವ ಇಂಟೆಕ್ ಅಧ್ಯಕ್ಷ ನವೀನ್ ಗೌಡ ಸವಣಾಲು , ಯುವ ಮುಖಂಡರಾದ ಸುಧೀರ್ ದೇವಾಡಿಗ ಬೆಳ್ತಂಗಡಿ , ಗಣೇಶ್ ಕಣಿಯೂರು ಉಪಸ್ಥಿತರಿದ್ದರು.

