×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಯಕ್ಷಗಾನ ಹಾಸ್ಯಗಾರ ರವಿಶಂಕರ ವಳಕ್ಕುಂಜ ಅವರ 2 ಕೃತಿಗಳು ಲೋಕಾರ್ಪಣೆ ಯಕ್ಷಗಾನ ಕ್ಷೇತ್ರ ಕಲಾವಿದರು ಹಾಗೂ ವಿದ್ವಾಂಸರ ಸಂಗಮ : ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು

ಉಡುಪಿ : ಯಕ್ಷಗಾನ ಹಾಸ್ಯಗಾರ ರವಿಶಂಕರ ವಳಕ್ಕುಂಜ ಅವರು ಯಕ್ಷಗಾನದ ಬಗ್ಗೆ 7 ಕೃತಿಗಳನ್ನು ಬರೆದು ಬಿಡುಗಡೆ ಮಾಡಿರುವುದು ಓರ್ವ ಕಲಾವಿದನಾಗಿ ಯಕ್ಷಲೋಕಕ್ಕೆ ಬಹುದೊಡ್ಡ ಕೊಡುಗೆ ನೀಡಿದ್ದಾರೆ ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಹೇಳಿದರು.

ಅವರು ಭಾನುವಾರ ಕಟೀಲು ಕ್ಷೇತ್ರದ ರಥಬೀದಿಯಲ್ಲಿ ಕಟೀಲು ಶ್ರೀ ದುರ್ಗಾ ಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯ ಏಳನೇ ಮೇಳದ ಉದ್ಘಾಟನೆ ಮತ್ತು ಈ ವರ್ಷದ ತಿರುಗಾಟದ ಆರಂಭೋತ್ಸವಕ್ಕೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಯಕ್ಷಗಾನದ ಹಾಸ್ಯಗಾರ ರವಿಶಂಕರ ವಳಕ್ಕುಂಜ ಅವರು ಬರೆದ ‘ಪ್ರಸಂಗ ವಾಚಿಕ ‘ ಹಾಗೂ ‘ರಂಗನಡೆಗೊoದು ಕೈಪಿಡಿ ‘ ಕೃತಿಯನ್ನು ಬಿಡುಗಡೆಗೊಳಿಸಿ ಮಾತನಾಡಿದರು.

ಯಕ್ಷಗಾನ ಕ್ಷೇತ್ರ ಕೇವಲ ಕಲಾವಿದರಲ್ಲ, ಅದೊಂದು ಪ್ರತಿಭೆಗಳ ಸಂಗಮ ಎಂಬುದಕ್ಕೆ ಹಾಸ್ಯಗಾರ ರವಿಶಂಕರ ವಳಕ್ಕುಂಜ ಅವರೇ ಸಾಕ್ಷಿ. ಯಕ್ಷಗಾನ ಕ್ಷೇತ್ರದಲ್ಲಿ ಎಂತೆಂತಹ ಸಾಹಿತಿಗಳು, ವಿದ್ವಾಂಸರು ಇರುವುದನ್ನು ನಾವು ಕಾಣುತ್ತಿದ್ದೇವೆ. ಓರ್ವ ಹಾಸ್ಯ ಕಲಾವಿದರೊಬ್ಬರು 7 ಕೃತಿಗಳನ್ನು ರಚಿಸಿ ಬಿಡುಗಡೆಗೊಳಿಸಿರುವುದು ಸಂತೋಷದ ವಿಚಾರ. ಇದು ಈ ರಂಗದ ಶಕ್ತಿ. ಕಲಾರಾಧನೆ ಎಂದರೆ ಅದು ದೇವರ ಸೇವೆ ಎಂದ ಅವರು ಕಟೀಲು ದೇವಿಯ ಸನ್ನಿಧಾನದಲ್ಲಿ ಇದೀಗ 7ನೇ ಮೇಳದ ಉದ್ಘಾಟನೆ ನಡೆದಿರುವುದು ಯಕ್ಷಗಾನ ಕ್ಷೇತ್ರಕ್ಕೆ ಭವ್ಯ ಭವಿಷ್ಯವಿದೆ ಎಂಬುದನ್ನು ಸಾರುತ್ತದೆ ಎಂದರು.

ಪಡುವಲಪಾಯ ಯಕ್ಷಗಾನ ಈ ಮಣ್ಣಿನ ಕಲೆ. ಈ ಕಲೆ ಇಂದು ದೇವಳಗಳ ಅಶ್ರಯದಲ್ಲಿ ಬೆಳೆಯುತ್ತಿರುವುದನ್ನು ಕಂಡಾಗ ಸಂತೋಷವಾಗುತ್ತದೆ. ಈ ಮೂಲಕ ಉತ್ತಮ ಕಲಾವಿದರು ಇಲ್ಲಿ ಸೇವೆ ಮಾಡುವಂತಾಗಬೇಕು. ಕಲಾವಿದರಿಂದ ಹೆಚ್ಚೆಚ್ಚು ಮೌಲಿಕ ಕೃತಿಗಳು ಹೊರ ಬರುವಂತಾಗಲಿ ಎಂದು ಅವರು ಹಾರೈಸಿದರು.

ಈ ಸಂದರ್ಭದಲ್ಲಿ ಉಡುಪಿಯ ಯಕ್ಷಗಾನ ಕಲಾರಂಗಕ್ಕೆ ದುರ್ಗಾನುಗ್ರಹ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಅಧ್ಯಕ್ಷ ಗಂಗಾಧರ ರಾವ್ ಮತ್ತು ಕಾರ್ಯದರ್ಶಿ ಮುರಳಿ ಕಡೆಕಾರು ಅವರು ಪ್ರಶಸ್ತಿ ಸ್ವೀಕರಿಸಿದರು.

ಕಾರ್ಯಕ್ರಮದಲ್ಲಿ ಪಲಿಮಾರು ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿ, ಮಾಣಿಲ ಶ್ರೀ ಮೋಹನದಾಸ ಸ್ವಾಮೀಜಿ, ಮಾಜಿ ಮುಖ್ಯಮಂತ್ರಿ ಡಾ.ಎಂ.ವೀರಪ್ಪ ಮೊಯಿಲಿ, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ, ಮಾಜಿ ಸಚಿವ ರಮಾನಾಥ ರೈ, ಹೈಕೋರ್ಟ್ ಹಿರಿಯ ವಕೀಲ ಪಿ.ಎಸ್. ರಾಜಗೋಪಾಲ್, ಮಾಜಿ ಆಯುಕ್ತ ಬಸವರಾಜ್, ಕ್ಷೇತ್ರದ ವೇದವ್ಯಾಸ ತಂತ್ರಿ, ಎಂಜಿನಿಯರ್ ನಾಗೇಂದ್ರ ಪಿ., ಮಿಥುನ್ ರೈ, ಕ್ಷೇತ್ರದ ಆನುವಂಶಿಕ ಮೊತ್ತೇಸರ ಅರ್ಚಕ ವೇ.ಮೂ.ವಾಸುದೇವ ಆಸ್ರಣ್ಣ, ಅರ್ಚಕ ಲಕ್ಷ್ಮಿನಾರಾಯಣ ಆಸ್ರಣ್ಣ, ವೆಂಕಟರಮಣ ಆಸ್ರಣ್ಣ, ಕಟೀಲು ಮೇಳಗಳ ಸಂಚಾಲಕ ಕಲ್ಲಾಡಿ
ದೇವಿಪ್ರಸಾದ್ ಶೆಟ್ಟಿ ಉಪಸ್ಥಿತರಿದ್ದರು.

ಆನುವಂಶಿಕ ಆರ್ಚಕ ಶ್ರೀಹರಿ ನಾರಾಯಣದಾಸ ಆಸ್ರಣ್ಣ ಸ್ವಾಗತಿಸಿ, ವಾದಿರಾಜ ಕಲ್ಲೂರಾಯ, ಪದ್ಮನಾಭ ಮರಾಶೆ ನಿರೂಪಿಸಿದರು.

Leave a Reply

Your email address will not be published. Required fields are marked *