ಪಡುಬಿದ್ರಿ : ನಮ್ಮ ಹಿರಿಯರು ಹಾಕಿ ಕೊಟ್ಟ ಆಹಾರ ಪದ್ಧತಿಯನ್ನು ಅನುಸರಿಸಿ ನಾವೂ ಆರೋಗ್ಯವಂತರಾಗಿರಲು ಆಟಿಡೊಂಜಿ ದಿನ ಕಾರ್ಯಕ್ರಮವು ಪರಿಣಾಮಕಾರಿಯಾಗಿದ್ದು, ಔಷಧೀಯ ಗುಣವುಳ್ಳ ಆಹಾರ ಖಾದ್ಯಗಳ ಸೇವನೆಯ ಅಗತ್ಯವನ್ನು ತಿಳಿಯುವಲ್ಲಿ ಆಟಿಡೊಂಜಿ ದಿನ ಕಾರ್ಯಕ್ರಮವು ಇಂದಿನ ಸಮಾಜದ ಅಗತ್ಯತೆಯಾಗಿದೆ ಎಂದು ಉಡುಪಿ ತಾಲೂಕು ಮಹಿಳಾ ಮಂಡಲಗಳ ಒಕ್ಕೂಟದ ಗೌರವಾಧ್ಯಕ್ಷೆ ಎರ್ಮಾಳು ಶೀಲಾ ಕೆ. ಶೆಟ್ಟಿ ಹೇಳಿದರು. ಅವರು ಶನಿವಾರ ಎರ್ಮಾಳು ಶ್ರೀನಿಧಿ ಮಹಿಳಾ ಮಂಡಲ ರಿ. ವತಿಯಿಂದ ನಡೆದ ಆಟಿಡೊಂಜಿ ದಿನ ಸಮಾರಂಭವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು. ಪಾರಂಪರಿಕ ಚೆನ್ನೆಮಣೆ ಆಟದ ಮೂಲಕ ಆಟಿಡೊಂಜಿ ದಿನ ಕಾರ್ಯಕ್ರಮವನ್ನು ಉದ್ಘಾಟಿಸಿದ ಇನ್ನಂಜೆ ಗ್ರಾ.ಪಂ. ಅಧ್ಯಕ್ಷೆ ಮಾಲಿನಿ ಶೆಟ್ಟಿ ಇನ್ನಂಜೆ ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾಪು ತಾಲೂಕು ಯೋಜನಾಧೀಕಾರಿ ಮಮತಾ ಶೆಟ್ಟಿ, ಅವರು ಮಾತನಾಡಿ, ಔಷಧೀಯ ಗುಣಗಳುಳ್ಳ ಆಟಿ ತಿನಿಸುಗಳು ನಮ್ಮ ಹಿರಿಯರ ಆರೋಗ್ಯದ ಗುಟ್ಟು. ಆರೋಗ್ಯ ವರ್ಧಕವಾಗಿ ನಮ್ಮ ಪೂರ್ವಜರು ಹೊಂದಿದ್ದ ಆಹಾರದ ಜ್ಞಾನವನ್ನು ನಮ್ಮ ಮುಂದಿನ ಯುವ ಪೀಳಿಗೆಗೆ ತಲುಪಿಸುವಲ್ಲಿ ಆಟಿಡೊಂಜಿ ದಿನ ಕಾರ್ಯಕ್ರಮವು ಮಹತ್ವಪೂರ್ಣವಾಗಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.
ಅಧ್ಯಕ್ಷತೆ ವಹಿಸಿದ್ದ ಎರ್ಮಾಳು ಶ್ರೀ ನಿಧಿ ಮಹಿಳಾ ಮಂಡಲದ ಅಧ್ಯಕ್ಷೆ ರೇಖಾ ಶೆಟ್ಟಿ ಸ್ವಾಗತಿಸಿದರು. ಕೋಶಾಧಿಕಾರಿ ವಿಮಲಾ ಕೆ. ಸಾಲಿಯಾನ್ ವೇದಿಕೆಯಲ್ಲಿದ್ದರು. ಎರ್ಮಾಳು ಶ್ರೀ ನಿಧಿ ಮಹಿಳಾ ಮಂಡಲದ ಕಾರ್ಯದರ್ಶಿ ಅಮಣಿ ಕುಂದರ್ ವಂದಿಸಿದರು. ಮಾಜಿ ಅಧ್ಯಕ್ಷೆ ಜ್ಯೋತಿ ಎಸ್. ಶೆಟ್ಟಿ ನಿರೂಪಿಸಿದರು. ಸುಮಾರು 35 ವಿವಿಧ ಬಗೆ ಆಟಿ ಆಹಾರ ಖಾದ್ಯ ಗಳನ್ನು ಉಣಬಡಿಸಲಾಯಿತು.

