×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಜುಲೈ 06 : ಬೆಳಪು ಗ್ರಾಪಂ 16ನೇ ವರ್ಷದ ಸಸಿ ವಿತರಣಾ ಕಾರ್ಯಕ್ರಮ

ಬೆಳಪು : ಜುಲೈ 06ರ ಭಾನುವಾರ ಬೆಳಪು ಗ್ರಾಮ ಪಂಚಾಯತ್‌ ಮತ್ತು ಮೇಬೈಲು ಸದಾಶಿವ ಶೆಟ್ಟಿ ಸಹಯೋಗದಲ್ಲಿ 16ನೇ ವರ್ಷದ ಸಸಿ ವಿತರಣಾ ಕಾರ್ಯಕ್ರಮ ಬೆಳಪು ಪಂಚಾಯತ್‌ ಸಭಾಭವನದಲ್ಲಿ ನೆರವೇರಲಿದೆ ಎಂದು ಬೆಳಪು ಗ್ರಾಪಂ ಅಧ್ಯಕ್ಷ ಡಾ. ದೇವೀಪ್ರಸಾದ್‌ ಶೆಟ್ಟಿ ತಿಳಿಸಿದ್ದಾರೆ. ಅವರು ಬುಧವಾರ ಬೆಳಪು ಪಂಚಾಯತ್‌ ಸಭಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕಾಪು ತಹಶೀಲ್ದಾರ್‌ ಡಾ. ಪ್ರತಿಭಾ ಆರ್‌, ಪಿ ಶ್ರೀದರ್‌, ಕಾಪು ತಾಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜೇಮ್ಸ್‌ ಡಿ ಸಿಲ್ವಾ, ಅರಣ್ಯಾಧಿಕಾರಿ ವಾರಿಜಾಕ್ಷಿ, ಕಾಪು ಪತ್ರಕರ್ತರ ಸಂಘದ ಅಧ್ಯಕ್ಷ ಹರೀಶ್‌ ಹೆಜಮಾಡಿ, ಬಾಲಕೃಷ್ಣ ಆಚಾರ್ಯ, ಶಹನವಾಜ್‌ ಉಪಸ್ತಿತರಿರುವರು ಎಂದು ದೇವೀಪ್ರಸಾದ್‌ ಶೆಟ್ಟಿ ತಿಳಿಸಿದ್ದಾರೆ. ಬೆಳಪುವನ್ನು ಹಸಿರು ಗ್ರಾಮವನ್ನಾಗಿಸುವದೇ ನಮ್ಮ ಗುರಿ : ಬೆಳಪು ದೇವಿಪ್ರಸಾದ್‌ ಶೆಟ್ಟಿ  ಬೆಳಪುವಿನಲ್ಲಿ ಕಳೆದ 16 ವರ್ಷಗಳಿಂದ ನಿರಂತರ ಬೃಹತ್ ವನಮಹೋತ್ಸವ ಕಾರ್ಯಕ್ರಮವನ್ನು ಬೆಳವು ಗ್ರಾಮ ಪಂಚಾಯತ್ ವತಿಯಿಂದ ನಡೆಸುತ್ತಾ ಬಂದಿದ್ದು, ರೈತರ ಹೊಲದಲ್ಲಿ ವನ, ಪ್ರತಿ ಮನೆಗೆ ಗಿಡ ನೀಡುವ ಮೂಲಕ ವಿವಿಧ ಸಂಘ ಸಂಸ್ಥೆಗಳ, ಶಾಲೆಗಳ ಸಹಕಾರದಿಂದ ಹಸಿರು ಗ್ರಾಮವನ್ನಾಗಿಸುವ ಪಣ ತೊಟ್ಟಿದ್ದೇವೆ. ಈಗಾಗಲೇ ಗ್ರಾಮದಲ್ಲಿ ಒಂದು ಲಕ್ಷ ಸಸಿ ನೆಟ್ಟು ಬೆಳೆಸಲಾಗಿದೆ. ಜುಲೈ 6 ರಂದು ಬೆಳಿಗ್ಗೆ 10 ಗಂಟೆಗೆ ಬೆಳಪು ಗ್ರಾಮ ಪಂಚಾಯತ್ ವಠಾರದಲ್ಲಿ ಬೃಹತ್ ಸಸಿ ವಿತರಣೆ, ಸಾವಯವ ಕೃಷಿಕರಿಗೆ ಸನ್ಮಾನ, ಮಾಜಿ ಸೈನಿಕರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.  ಬೆಳಪುವಿನ ಸಮಗ್ರ ಅಭಿವೃದ್ಧಿ :  ಬೆಳಪು ಕಾಡು ಇದೀಗ ಸುಸಜ್ಜಿತ ಯೋಜನೆಗಳೊಂದಿಗೆ ಸಮಗ್ರ ಅಭಿವೃದ್ಧಿಯಾಗಿದೆ. ಬೆಳಪುವಿನಲ್ಲಿ ವಿವಿಧ ಧರ್ಮ-ಜಾತಿಯವರು ವಾಸಿಸುತ್ತಿದ್ದು, ಕಳೆದ 30 ವರ್ಷಗಳಲ್ಲಿ ಯಾವುದೇ ಸಣ್ಣದೊಂದು ಅಹಿತಕರ ಘಟನೆಯೂ ನಡೆಯದೆ ಸಮಬಾಳ್ವೆಯಿಂದ ಇರುವ ಏಕೈಕ ಗ್ರಾಮ ಬೆಳಪು. ಬೆಳಪು ರಾಷ್ಟ್ರದಾದ್ಯಂತ ಗುರುತಿಸಲ್ಪಡುವ ಗ್ರಾಮವಾಗಿದೆ. ಕೈಗಾರಿಕೆ-ಪ್ರವಾಸೋದ್ಯಮ-ಶಿಕ್ಷಣ-ಉದ್ಯೋಗಕ್ಕೆ ಪ್ರಥಮ ಆದ್ಯತೆ ನೀಡಿ ಯೋಜನೆ ರೂಪಿಸಲಾಗಿದೆ. ರಸ್ತೆಗಳ ಅಭಿವೃದ್ಧಿ, ಕುಡಿಯುವ ನೀರಿಗೆ ಆದ್ಯತೆ, ಗ್ರಾಮಸ್ಥರಿಗೆ ಉಚಿತ ಶುದ್ದೀಕರಣ ಘಟಕದಿಂದ ಕುಡಿಯುವ ನೀರು ಒದಗಿಸಲಾಗುತ್ತಿದೆ. 3.00 ಎಕ್ರೆ ಜಾಗದಲ್ಲಿ ಅತ್ಯಾಧುನಿಕ ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪಿಸುವ ಯೋಜನೆ ರೂಪಿಸಿದೆ. 100 ಮೆ.ವ್ಯಾ. ವಿದ್ಯುತ್ ಸಬ್ ಸ್ಟೇಷನ್, ನೂರಾರು ನಿವೇಶನ ರಹಿತ ಬಡವರಿಗೆ ನಿವೇಶನ ಸಹಿತ ವಸತಿ, ಇದು ನಮ್ಮ ಗ್ರಾಮದ ಯೋಜನೆ, ಭ್ರಷ್ಟಾಚಾರ ರಹಿತ ಪಾರದರ್ಶಕ ಆಡಳಿತ. ಎಲ್ಲಾ ಸಮಾಜದ ಸಮುದಾಯದ ಭವನಗಳಿಗೆ ವಿಶೇಷ ಅನುದಾನ ಒದಗಿಸಲಾಗಿದೆ. ಸರಕಾರದ ಪಠ್ಯಪುಸ್ತಕದಲ್ಲಿ ಬೆಳಪು ಗ್ರಾಮದ ಪಾಠವಿರುವುದು ಹೆಮ್ಮೆ ಎಂದರು.  ಪ್ರವಾಸೋದ್ಯಮ ಅಭಿವೃದ್ಧಿ :  ಬೆಳಪು ಜಾರಂದಾಯ ಕೆರೆ ಇತಿಹಾಸ ಪ್ರಸಿದ್ಧವಾದ ಕೆರೆ. ಈಗಾಗಲೇ 1 ಕೋಟಿ ಹೆಚ್ಚದಲ್ಲಿ ಅಭಿವೃದ್ಧಿಪಡಿಸಿ ಬೋಟಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ. ಮಾನ್ಯ ಪ್ರವಾಸೋದ್ಯಮ ಸಚಿವರಿಗೆ ಮನವಿ ಮಾಡಿ, ಇದೀಗ ಪ್ರವಾಸೋದ್ಯಮ ಇಲಾಖೆಯ ಅನುದಾನದಡಿ ರಾಜ್ಯದ ಅತ್ಯುತ್ತಮ ಪ್ರವಾಸಿ ತಾಣವಾಗಿ ಗುರುತಿಸಲಾಗಿದ್ದು, ಅಭಿವೃದ್ಧಿಗಾಗಿ ಸರಕಾರದಿಂದ ನೀಲಿ ನಕಾಶೆ ಸಿದ್ಧವಾಗಿದೆ. ಅತೀ ಶೀಘ್ರ ಕಾಮಗಾರಿ ಪ್ರಾರಂಭವಾಗಲಿದೆ.ಬೆಳಪುವಿನಲ್ಲಿ ಸ್ಥಾಪಿಸಲ್ಪಡುವ ವಿಜ್ಞಾನ ಸಂಶೋಧನಾ ಕೇಂದ್ರ :ಬೆಳಪುವಿನಲ್ಲಿ ಮಹತ್ವಾಕಾಂಕ್ಷಿ ಯೋಜನೆ 2014ರಲ್ಲಿ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯವರಿಂದ ಚಾಲನೆಗೊಂಡಿತ್ತು. ಇದೀಗ ವಿಜ್ಞಾನ ಸಂಶೋಧನಾ ಕೇಂದ್ರ ಹಾಗೂ ಪಿ.ಜಿ. ಸೆಂಟರ್ ಕಾಮಗಾರಿ ಮಂದಗತಿಯಲ್ಲಿ ನಡೆಯುತ್ತಿದೆ. 9 ಕಟ್ಟಡ ನಿರ್ಮಾಣಗೊಂಡಿದೆ. ಆದರೆ ಯಾವುದೇ ತರಗತಿ ಪ್ರಾರಂಭಗೊಂಡಿಲ್ಲ. ಕೋಟ್ಯಾಂತರ ಹಣ ಸರಕಾರದಿಂದ ಮಂಜೂರುಗೊಂಡರೂ, ಮಂಗಳೂರು ವಿಶ್ವವಿದ್ಯಾಲಯದವರು ದುರುಪಯೋಗಪಡಿಸಿಕೊಂಡಿದ್ದಾರೆ. ಕೆಲವೊಂದು ಭ್ರಷ್ಟಾಚಾರಗಳು ನಡೆದಿದೆ. ಯಾರು ಯಾರಿಗೆ ಎಷ್ಟೆಷ್ಟು ಪಾಲು ಎಂದು ಮುಂದಿನ ದಿನಗಳಲ್ಲಿ ಬಹಿರಂಗಪಡಿಸುತ್ತೇನೆ.  ಎಲ್ಲಾ ದಾಖಲೆಗಳನ್ನು ಮಾಹಿತಿ ಹಕ್ಕಿನಿಂದ ಪಡೆದುಕೊಂಡಿರುತ್ತೇವೆ. ಬಡ ವಿದ್ಯಾರ್ಥಿಗಳ ಆಶಾ ಕಿರಣವಾಗಬೇಕೆಂದು 10 ವರ್ಷಗಳ ನಿರಂತರ ಹೋರಾಟದಿಂದ ಕಾಲೇಜು ಸ್ಥಾಪನೆಯ ಕನಸು ನನಸಾದರೂ ಅದು ವಿದ್ಯಾರ್ಥಿಗಳಿಗೆ ಪ್ರಯೋಜನವಾಗಿಲ್ಲ. ಸರಕಾರದ ಹಣ ದುರುಪಯೋಗವಾಗಿದೆ. ಉನ್ನತ ಮಟ್ಟದ ತನಿಖೆ ಮಾಡುವಂತೆ ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದೇನೆ. ಕಾಮಗಾರಿ ಪ್ರಾರಂಭಿಸದಿದ್ದಲ್ಲಿ ಬೃಹತ್ ಹೋರಾಟ ನಡೆಸುವುದು ಅನಿವಾರ್ಯವಾಗಬಹುದೆಂದು ಶೆಟ್ಟಿ ತಿಳಿಸಿದ್ದಾರೆ.  ಬಡವರಿಗೆ ಹಕ್ಕು ಪತ್ರ ನೀಡಲು ಅಧಿಕಾರಿಗಳಿಂದ ಕಾನೂನಿನ ಸಬೂಬು :ಹಕ್ಕು ಪತ್ರ ರಹಿತರಿಗೆ ಹಕ್ಕುಪತ್ರ ನೀಡದಲ್ಲಿ ಹೋರಾಟ ನಾನು ಕಳೆದ 15 ವರ್ಷಗಳಿಂದ ವಿವಿಧ ಅಧಿಕಾರಿಗಳಿಗೆ, ಜನ ಪ್ರತಿನಿಧಿಗಳಿಗೆ, ಮಂತ್ರಿಗಳಿಗೆ ಮನವಿ ಮಾಡಿಕೊಂಡು ಅವರ ಕಚೇರಿಗಳಿಗೆ ಅಲೆದಾಡಿ ಬೆಳಪುವಿನಲ್ಲಿ ಸರಕಾರಿ ಜಾಗದಲ್ಲಿ ವಾಸಿಸುವ ನೂರಾರು ಬಡವರಿಗೆ ಹಕ್ಕುಪತ್ರ ನೀಡಿ ಅವರ ಬದುಕಿಗೆ ಭದ್ರತೆ ಕೊಡಿ ಎಂದು ಮನವಿ ಮಾಡಿದರೂ ಯಾರಿಗೂ ಈ ಬಗ್ಗೆ ಗಂಭೀರತೆ ಇಲ್ಲ. ಇದು ಕೇವಲ ಭಾಷಣಗಳಿಗೆ ಮೀಸಲಾಗಿದೆ. ಕಂದಾಯ ಸಚಿವರಾದ ಕಾಗೋಡು ತಿಮ್ಮಪ್ಪರವರ ಅದೇಶದಂತೆ ಕಂದಾಯ ಮತ್ತು ಅರಣ್ಯ ಇಲಾಖೆ ಜಂಟಿ ಸರ್ವೆ ನಡೆಸಿ ಇಲ್ಲಿ ಸಣ್ಣ ಗಿಡಮರಗಳು ಇಲ್ಲ, ಅರಣ್ಯವೇ ಇಲ್ಲ, ಗ್ರಾಮಸ್ಥರು 30-40 ವರ್ಷಗಳಿಂದ ವಾಸವಿರುವ ಕುರುಹು ಇದೆ. ಅಡಿಕೆ-ತೆಂಗು ಮರಗಳಿವೆ. ಇದು ಸಂಪೂರ್ಣ ಬಯಲು ಪ್ರದೇಶವೆಂದು ವರದಿ ನೀಡಿದ್ದಾರೆ. ಆದರೂ ಹಕ್ಕುಪತ್ರ ನೀಡಿಲ್ಲ ಕೊನೆಗೆ ಪಹಣಿ ಪತ್ರದಲ್ಲಿ ಪಂಚಾಯತ್ ಅರಣ್ಯ ಇದೆ ಎಂದು ಹೇಳುತ್ತಾರೆ. ಬೇರೆ ಎಲ್ಲಾ ಉದ್ದೇಶಗಳಿಗೆ ಇದೇ ಜಾಗವನ್ನು ಹಂಚಿ ನೀಡಿದ್ದಾರೆ. ಇನ್ನೂ ಕೆಲವರಿಗೆ ಬೋಗಸ್ ಹಕ್ಕುಪತ್ರ ನೀಡಿದ್ದಾರೆ. ಇಲ್ಲಿ ಭ್ರಷ್ಟಾಚಾರ ನಡೆದಿದೆ. ಸರಕಾರ ಬಡವರಿಗೆ ಹಕ್ಕುಪತ್ರ ನೀಡುವಂತೆ ಆದೇಶ ನೀಡಿದರೂ ಅಧಿಕಾರಿಗಳಿಗೆ ಆಸಕ್ತಿ ಇಲ್ಲ. ಒಂದು ತಿಂಗಳೊಳಗೆ ಹಕ್ಕುಪತ್ರ ಬಡ ಗ್ರಾಮಸ್ಥರಿಗೆ ನೀಡದಿದ್ದರೆ ಜಿಲ್ಲಾಧಿಕಾರಿ ಕಚೇರಿ ಎದುರು ಗ್ರಾಮಸ್ಥರೊಂದಿಗೆ ಉಪವಾಸ ಸತ್ಯಾಗ್ರಹ ಕೈಗೊಳ್ಳುತ್ತೇನೆ. ಉಚ್ಚ ನ್ಯಾಯಾಲಯದಲ್ಲಿ ದಾವೆ ಹೂಡುತ್ತೇನೆಂದು ಶೆಟ್ಟಿ ತಿಳಿಸಿದ್ದಾರೆ.  ಬೆಳಪುವಿನಲ್ಲಿ ಶಿಕ್ಷಣ ಕ್ರಾಂತಿ : ಬೆಳಪುವನ್ನು ಇನ್ನಷ್ಟು ಅಭಿವೃದ್ಧಿಪಡಿಸಿ ಒಂದು ಗ್ರಾಮ ಹಲವು ಯೋಜನೆ ಎಂಬ ರೀತಿಯಲ್ಲಿ ಅಭಿವೃದ್ಧಿಯಾಗಬೇಕು. ಶಿಕ್ಷಣಕ್ಕೆ ಒತ್ತು ನೀಡಿ ಎಲ್. ಕೆ.ಜಿ ಯಿಂದ ಪಿ.ಜಿ ವರೆಗೆ ವಿದ್ಯಾಸಂಸ್ಥೆಗಳು ಬರುವಂತೆ ಸರಕಾರಿ ಶಾಲೆ ಮುಚ್ಚಬಾರದೆಂಬ ಭಾವನೆಯಿಂದ ಊರ ದಾನಿಗಳ ಸಹಕಾರದಿಂದ ಎಲ್.ಕೆ.ಜಿ ಉಚಿತವಾಗಿ ಪ್ರಾರಂಭವಾಗಿದೆ. 4 ಅಂಗನವಾಡಿಗಳಿವೆ. ಪ್ರೌಢಶಾಲೆ ಇದೆ. ಸರಕಾರಿ ಪಾಲಿಟೆಕ್ನಿಕ್ ಕಾಲೇಜು ಪ್ರಾರಂಭವಾಗಿದೆ. ಮೌಲಾನಾ ಅಜಾದ್ ಮಾದರಿ ಶಾಲೆ ಮಂಜೂರುಗೊಂಡಿದೆ. ಸರಕಾರ ಸ್ಪಂದಿಸಿದಲ್ಲಿ ಅತ್ಯಾಧುನಿಕ ವಿಜ್ಞಾನ ಸಂಶೋಧನಾ ಕೇಂದ್ರ ಪಿ.ಜಿ. ಸೆಂಟರ್ ನಿರ್ಮಾಣವಾಗುತ್ತದೆ 17 ಎಕ್ರೆ ಸರಕಾರಿ ಜಾಗದಲ್ಲಿ ಐ.ಪಿ.ಎಲ್ ಮಾದರಿಯ ಕ್ರೀಡಾಂಗಣ ನಿರ್ಮಾಣಕ್ಕೆ ಮೀಸಲಿರಿಸಿದೆ ಎಂದು ದೇವಿಪ್ರಸಾದ್ ಶೆಟ್ಟಿ ಬೆಳಪು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಾಜಿ ತಾಪಂ ಉಪಾಧ್ಯಕ್ಷ ಯುಸಿ ಸೇಕಬ್ಬ, ಅಭಿವೃದ್ಧಿ ಅಧಿಕಾರಿ ಪ್ರವೀಣ್‌ ಡಿಸೋಜಾ, ಗ್ರಾ.ಪಂ ಉಪಾಧ್ಯಕ್ಷೆ ಶೋಭಾ ಬಿ. ಭಟ್, ಸದಸ್ಯರಾದ ಶರತ್ ಕುಮಾರ್, ಸುಲೇಮಾನ್, ಪ್ರಕಾಶ್ ರಾವ್, ಫಹೀಮ್, ಅನಿತಾ ಆನಂದ, ಸೌಮ್ಯ ಪೂಜಾರಿ, ರೂಪಾ ಆಚಾರ್ಯ, ಸುಶಾಂತ್‌, ಉಷಾ ವಾಸು, ನಫೀಸಾ ಬಾನು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *