ಕಾಪು ದಂಡತೀರ್ಥ ವಿದ್ಯಾಸಂಸ್ಥೆಯಲ್ಲಿ ಎಲ್.ಕೆ.ಜಿ. ತರಗತಿಯಿಂದ ಪಿ.ಯು.ಸಿ. ವರೆಗಿನ ವಿದ್ಯಾರ್ಥಿಗಳ ಹೆತ್ತವರಿಗೆ ಶೈಕ್ಷಣಿಕ ಮಾಹಿತಿಯನ್ನು ದಿನಾಂಕ 12-06-2025 ರಂದು ಪದವಿಪೂರ್ವ ಕಾಲೇಜಿನ ಸಭಾಂಗಣದಲ್ಲಿ ನೀಡಲಾಯಿತು. ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ವಿದ್ಯಾಸಂಸ್ಥೆಯ ಆಡಳಿತಾಧಿಕಾರಿ ಆಲ್ಬನ್ ರೊಡ್ರಿಗಸ್ ಇವರು ವಿದ್ಯಾರ್ಥಿಗಳ ಶಾರೀರಿಕ, ಮಾನಸಿಕ ಮತ್ತು ಶೈಕ್ಷಣಿಕ ಪ್ರಗತಿಯಲ್ಲಿ ಹೆತ್ತವರ ಪಾತ್ರ ಅಮೂಲ್ಯವಾದುದು. ಹೆತ್ತವರು ತಮ್ಮ ಮನೆಗಳಲ್ಲಿ ಮಕ್ಕಳಿಗೆ ಶಿಸ್ತು, ಸಂಸ್ಕಾರವನ್ನು ಕಲಿಸಿದರೆ ಅದನ್ನು ಶಾಲಾ ಕಾಲೇಜುಗಳಲ್ಲಿಯೂ ಮುಂದುವರಿಸಿಕೊಂಡು ಹೋಗುತ್ತಾರೆ. ಅಂತಹ ವಿದ್ಯಾರ್ಥಿಗಳು ಕೇವಲ ಶೈಕ್ಷಣಿಕವಾಗಿ ಪ್ರಗತಿಯನ್ನು ಸಾಧಿಸುವುದಲ್ಲದೆ ಸಮಾಜದಲ್ಲಿ ಉತ್ತಮ ಪ್ರಜೆಗಳಾಗಿ ಮೂಡಿ ಬರುತ್ತಾರೆ. ಆದುದರಿಂದ ಹೆತ್ತವರು ಮಕ್ಕಳಿಗೆ ಪ್ರೀತಿಯಿಂದ ಕಲಿಯಲು ಉತ್ತೇಜನ ನೀಡಬೇಕೆಂಬ ಸಂದೇಶವನ್ನು ನೀಡಿದರು. ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ಸಂಚಾಲಕರಾದ ಡಾ|| ಕೆ. ಪ್ರಶಾಂತ್ ಶೆಟ್ಟಿಯವರು ವಿದ್ಯಾರ್ಥಿಗಳ ಕಲಿಕೆಗೆ ಬೇಕಾದ ಎಲ್ಲಾ ರೀತಿಯ ವ್ಯವಸ್ಥೆಗಳನ್ನು ಆಡಳಿತಮಂಡಳಿಯ ವತಿಯಿಂದ ಕಲ್ಪಿಸಿ, ವಿಶೇಷವಾಗಿ ಬಡ ವಿದ್ಯಾರ್ಥಿಗಳಿಗೆ ಮತ್ತು ಕಾಲೇಜು ವಿಭಾಗದ ಪ್ರತಿಭಾನ್ವಿತರಿಗೆ ಪ್ರತಿವರ್ಷ 8 ಲಕ್ಷದಷ್ಟು ವಿದ್ಯಾರ್ಥಿ ವೇತನವನ್ನು ದಾನಿಗಳ ಸಹಕಾರದೊಂದಿಗೆ ನೀಡಲಾಗುತ್ತಿದೆ. ಆದುದರಿಂದ ವಿದ್ಯಾರ್ಥಿಗಳ ಹಾಗೂ ಸಂಸ್ಥೆಯ ಪ್ರಗತಿಗೆ ಹೆತ್ತವರು ಬದಲಾದ ಪರಿಸ್ಥಿತಿಗೆ ಹೊಂದಿಕೊಂಡು ಸಹಕಾರ ನೀಡಬೇಕೆಂದು ವಿನಂತಿಸಿದರು. ಪ್ರಾಂಶುಪಾಲ ನೀಲಾನಂದ ನಾಯ್ಕ್ ಇವರು ಪ್ರೌಢ ಮತ್ತು ಕಾಲೇಜು ವಿಭಾಗದ ಈ ವರ್ಷದ ವಾರ್ಷಿಕ ಚಟುವಟಿಕೆಗಳ ಕುರಿತಾದ ಮಾಹಿತಿಗಳನ್ನು ನೀಡಿದರು. ಕಾರ್ಯಕ್ರಮದ ಯಶಸ್ಸಿಗೆ ಶಿಕ್ಷಕ ವೃಂದದ ಕವಿತಾ, ಉದಯ ಕುಮಾರ್, ಶೋಭಾ, ಯಶಸ್ವಿನಿ ಶೆಟ್ಟಿ, ಸುಷ್ಮಾ ವೇಣುಗೋಪಾಲ್, ಸುರಥ್ ಕುಮಾರ್ ಮೊದಲಾದವರು ಸಹಕರಿಸಿದರು.

