ತುಳುನಾಡಿನ ಆರಾಧನೆಯಲ್ಲಿ ಮುಸ್ಲಿಂ ಬಾಂಧವರು ದೈವಗಳಿಗೆ ವಾದ್ಯ ನುಡಿಸುವುದು ಸೌಹಾರ್ದತೆಗೆ ಸಾಕ್ಷಿ. ಶಹನಾಯ್ ದೈವರಾಧನೆಯಲ್ಲಿ ಮುಖ್ಯ ವಾದ್ಯವಾಗಿದೆ ಎಂದು ಜಾನಪದ ವಿದ್ವಾಂಸ ವೈ.ಎನ್.ಶೆಟ್ಟಿ ಹೇಳಿದರು. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ವತಿಯಿಂದ ಶನಿವಾರ ಇಲ್ಲಿನ ಕನ್ನಂಗಾರ್ ಬ್ರಹ್ಮಬೈದರ್ಕಳ ಗರಡಿಯಲ್ಲಿ ನಡೆದ ನಾಗಸ್ವರ ವಾದಕ ಸೈಯ್ಯದ್ ನಾಸಿರ್ ಎರ್ಮಾಳ್ ಅವರಿಗೆ ‘ಚಾವಡಿ ತಮ್ಮನ’ ಗೌರವ ಸಮರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ತುಳು ಅಕಾಡೆಮಿ ಅಧ್ಯಕ್ಷ ತಾರಾನಾಥ್ ಗಟ್ಟಿ ಕಾಪಿಕಾಡ್ ಮಾತನಾಡಿ, ಅಕಾಡೆಮಿಯು ಜನಗಳ ಮಧ್ಯೆ ಸಾಧನೆಗೈದವರನ್ನು ಗುರುತಿಸುವ ಕಾರ್ಯ ನಡೆಸುತ್ತಿದೆ. ತುಳುನಾಡಿನ ಸೌಹಾರ್ದತೆ ಸಾಮರಸ್ಯ, ಹಿಂದಿನಿಂದಲೂ ಬಂದಿದೆ. ತುಳುನಾಡಿನ ಭಾಗವಾದ ವಾದ್ಯಗಳನ್ನು ನುಡಿಸುವವರನ್ನು ಪ್ರೋತ್ಸಾಹಿಸಬೇಕು ಹೇಳಿದರು. ಎಂದು ಸನ್ಮಾನ ಸ್ವೀಕರಿಸಿದ ಸೈಯ್ಯದ್ ನಾಸೀರ್ ಮಾತನಾಡಿ, ಪರಂಪರಾಗತವಾಗಿ ಈ ಸೇವೆಯನ್ನು ನಡೆಸುತ್ತಾ ತೃಪ್ತಿಯಿದೆ. ಈ ಕಲೆ ನಶಿಸಬಾರದು. ಮುಂದುವರಿಸಿಕೊಂಡು ಹೋಗಲು ಮಕ್ಕಳಿಗೆ ತರಬೇತಿ ನೀಡುವುದ ಅಗತ್ಯ ಎಂದರು. ಕನ್ನಂಗಾರ್ ಬ್ರಹ್ಮಬೈದರ್ಕಳ ಗರಡಿ ಅಧ್ಯಕ್ಷ ಶೀನ ಪೂಜಾರಿ, ಪಡುಬಿದ್ರಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಶಿಕಲಾ ವೈ, ಸದಸ್ಯರಾದ ರಮೀಝ್ ಹುಸೇನ್, ಅಕಾಡೆಮಿ ರಿಜಿಸ್ಟ್ರಾರ್ ಪೂರ್ಣಿಮಾ, ಸದಸ್ಯ ಸಂಚಾಲಕ ಉದ್ಯಾವರ ನಾಗೇಶ್ ಕುಮಾರ್ ಭಾಗವಹಿಸಿದ್ದರು. ತುಳು ಸಂಸ್ಕೃತಿ ಸಂಶೋಧಕ ನಿತೇಶ್ ಅಂಚನ್ ನಿರ್ವಹಿಸಿದರು.

