×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಕಿಂಡಿ ಅಣೆಕಟ್ಟಿಗೆ ತಹಶೀಲ್ದಾರ್ ಭೇಟಿ ತ್ಯಾಜ್ಯ ಸ್ವಚ್ಛಗೊಳಿಸಲು ನಿರ್ದೇಶನ

ಪ್ರತಿವರ್ಷ ಮುಂಗಾರು ಮಳೆಯ ಸಂದರ್ಭದಲ್ಲಿ ಉಡುಪಿ ಜಿಲ್ಲೆ ಕಾಪು ತಾಲೂಕು ಫಲಿಮಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ನಂದಿಕೂರು ಗ್ರಾಮದ ಪುಂಜಮಾರು ಹಾಗೂ ಪಲಿಮಾರು ಗ್ರಾಮದ ಕಿಂಡಿ ಅಣೆಕಟ್ಟು ಪ್ರದೇಶಕ್ಕೆ ಇಂದು ತಹಶೀಲ್ದಾರ್ ಪ್ರತಿಭಾ ಆರ್ ಭೇಟಿ ನೀಡಿ ಪರಿಶೀಲಿಸಿದರು. ಪ್ಲಾಸ್ಟಿಕ್, ಮರದ ಕೊಬೆ ಮುಂತಾದ ಘನ ತ್ಯಾಜ್ಯಗಳು ಕಿಂಡಿ ಅಣೆಕಟ್ಟು ನೀರು ಹರಿವಿನ ಜಾಗದಲ್ಲಿ ಜಮಾವಣೆಗೊಂಡಿದ್ದು ನೀರಿನ ರಭಸಕ್ಕೆ ತಡೆಯೊಡ್ಡುತ್ತಿವೆ. ಕೂಡಲೇ ಈ ತ್ಯಾಜ್ಯವನ್ನು ಸ್ವಚ್ಚಗೊಳಿಸಿ ನೀರಿನ ಹರಿವಿಗೆ ಅನುವು ಮಾಡಿಕೊಡಲು ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ಫಲಿಮಾರು ಪಂಚಾಯತ್ ವ್ಯಾಪ್ತಿಯ ಮೂಡುಪಲಿಮಾರು ಹಾಗೂ ಇನ್ನಿತರ ಪ್ರದೇಶಗಳಲ್ಲಿ ಪ್ರತಿವರ್ಷ ನೆರೆ ಭೀತಿ ಇದ್ದೇ ಇರುತ್ತದೆ. ಅದಕ್ಕೆ ಮುಂಜಾಗ್ರತಾ ಕ್ರಮವಾಗಿ ಈಗಾಗಲೇ ಕಿಂಡಿ ಅಣೆಕಟ್ಟಿನ ಹಲಗೆಗಳನ್ನು ಈಗಾಗಲೇ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳು ತೆರವುಗೊಳಿಸಿರುತ್ತಾರೆ. ಪ್ರವಾಹ ಭೀತಿ ಇದರಿಂದ ಕೊಂಚ ತಗ್ಗಿದೆ. ತಹಶೀಲ್ದಾರ್ ಪ್ರತಿಭಾ ಆರ್ ರವರು ಸಣ್ಣ ನೀರಾವರಿ ಇಲಾಖೆಯ ಕಾರ್ಯ ನಿರ್ವಾಹಕ ಇಂಜಿನಿಯರ್ ರವರಿಗೆ ಫಲಿಮಾರು ಕಿಂಡಿ ಅಣೆಕಟ್ಟಿನ ಪ್ರದೇಶದಲ್ಲಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲು ಸೂಚನೆ ನೀಡಿರುತ್ತಾರೆ. ಫಲಿಮಾರು ಗ್ರಾಮ ಪಂಚಾಯತಿ ಅಧಿಕಾರಿಗಳಿಗೆ ಆಸಿಪಾಸಿನ ತೋಡುಗಳನ್ನು ಸ್ವಚ್ಛಗೊಳಿಸಿ ನೀರು ಸರಾಗವಾಗಿ ಹರಿದುಹೋಗುವಂತೆ ಮಾಡಲು ಸಲಹೆ ನೀಡಿರುತ್ತಾರೆ. ಅಲ್ಲಿನ ಆಸುಪಾಸಿನ ಮನೆಗಳಿಗೆ ಭೇಟಿ ನೀಡಿ ಮಾನ್ಯ ತಹಶಿಲ್ದಾರ್ ಪ್ರತಿಭಾ ಪರಿಶೀಲನೆ ನಡೆಸಿ ಅಲ್ಲಿನ ಮನೆಗಳವರಿಗೆ ನೆರೆ ಕುರಿತು ಮುಂಜಾಗ್ರತಾ ಕ್ರಮಗಳ ಬಗ್ಗೆ ಅರಿವು ಮೂಡಿಸಲು ಪ್ರಯತ್ನಿಸಿದ್ದಾರೆ. “ನಾವಿದ್ದೇವೆ ನಿಮ್ಮ ಜೊತೆಗೆ” ಎಂಬ ಭರವಸೆ ನೀಡಿದ್ದಾರೆ. ತಹಶಿಲ್ದಾರ್ ಪ್ರತಿಭಾ ಆರ್ ರವರು ಕಾಪು ತಾಲ್ಲೂಕನ್ನು ಮುಂಗಾರು ಸುರಕ್ಷತಾ ತಾಲ್ಲೂಕಾಗಿ ಮಾಡಲು ಪಣ ತೊಟ್ಟಿದ್ದಾರೆ. ತಾಲ್ಲೂಕಿನಾದ್ಯಂತ ಸಂಚರಿಸಿ ನೆರೆ ಹಾವಳಿ ಉಂಟಾಗಬಹುದಾದ ಪ್ರದೇಶಗಳಲ್ಲಿ ಸುರಕ್ಷತಾ ಕ್ರಮ ಕೈಗೊಳ್ಳುತ್ತಿದ್ದಾರೆ. ಕಡಲ್ಕೊರೆತ, ತೋಡುಗಳ ಸ್ವಚ್ಚತೆ, ಚರಂಡಿಗಳ ಸ್ವಚ್ಚತೆ, ಸೇತುವೆಗಳ ಸುರಕ್ಷತೆ ಇತ್ಯಾದಿಗಳ ಬಗ್ಗೆ ಗಮನಿಸುತ್ತಿದ್ದಾರೆ. ತಾಲ್ಲೂಕಿನ ಜನತೆಗೆ “ನಾವಿದ್ದೇವೆ ನಿಮ್ಮೊಂದಿಗೆ… ನಿರಾತಂಕವಾಗಿರಿ” ಎಂಬ ಸಂದೇಶ ನೀಡುತ್ತಿದ್ದಾರೆ. ತಹಶೀಲ್ದಾರ್ ಪ್ರತಿಭಾ ಆರ್ ಹೇಳಿಕೆ: “ಫಲಿಮಾರು ವ್ಯಾಪ್ತಿಯ ಕಿಂಡಿ ಅಣೆಕಟ್ಟಿನ ನೀರು ಹರಿಯುವ ಸ್ಥಳಗಳಲ್ಲಿ ಕಸ ಕಡ್ಡಿ ಜಮಾವಣೆಗೊಂಡಿದೆ. ಇದರಿಂದ ನೀರಿನ ಹರಿವಿಗೆ ತಡೆಯೊಡ್ಡಿದಂತಾಗಿದೆ. ಇದರಿಂದ ಪ್ರವಾಹ ಭೀತಿ ಎದುರಾಗಬಹುದು. ಆದರಿಂದ ಸಣ್ಣ ನೀರಾವರಿ ಇಲಾಖೆಯ ಇಂಜಿನಿಯರ್ ಮತ್ತು ಅಧಿಕಾರಿಗಳಿಗೆ ಕೂಡಲೇ ಸ್ವಚ್ಛಗೊಳಿಸುವಂತೆ ಸೂಚನೆ ನೀಡಲಾಗಿದೆ. ತಾಲೂಕಿನಾದ್ಯಂತ ನೆರೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ತಾಲ್ಲೂಕು ಆಡಳಿತ ಜನರ ಸುರಕ್ಷತೆಗಾಗಿ‌ ಸದಾ ಸಿದ್ಧವಿದೆ. ತುರ್ತು ಸಂದರ್ಭಗಳಲ್ಲಿ ಜನರು ಕಂಟ್ರೋಲ್ ರೂಂ ಗೆ ಕರೆ ಮಾಡಿ ಸಹಾಯ ಪಡೆಯಬಹುದು” ತಾಲ್ಲೂಕು ಆಡಳಿತ ನೆರೆ ಪರಿಸ್ಥಿತಿ ಎದುರಿಸಲು ಸರ್ವ ಸನ್ನದ್ಧವಾಗಿದೆ. ಬೋಟುಗಳನ್ನು ರೆಡಿ ಇಟ್ಟುಕೊಳ್ಳಲಾಗಿದೆ. ನುರಿತ ಈಜುಗಾರರ ತಂಡ ಸದಾ ಸೇವೆಗೆ ಲಭ್ಯವಿದೆ. ತಹಶಿಲ್ದಾರ್ ಕಚೇರಿ ಕಂಟ್ರೋಲ್ ರೂಮ್ 24 ಗಂಟೆಯೂ ಕಾರ್ಯ ನಿರ್ವಹಿಸುತ್ತಿದೆ (0820-2551444). ಸಾರ್ವಜನಿಕರು ಯಾವುದೇ ಸಂದರ್ಭದಲ್ಲಿ ಕರೆ ಮಾಡಿ ಸಹಾಯ ಪಡೆಯಬಹುದು. ಈ ಸಂದರ್ಭದಲ್ಲಿ ರೆವಿನ್ಯೂ ಇನ್ಸ್‌ಪೆಕ್ಟರ್ ಇಜ್ಜಾರ್ ಸಾಬಿರ್, ಗ್ರಾಮಾಡಳಿತಾಧಿಕಾರಿ ಸುನಿಲ್, ಸ್ಥಳೀಯರಾದ ಇಸ್ಮಾಯಿಲ್ ಹಾಜರಿದ್ದರು.

Leave a Reply

Your email address will not be published. Required fields are marked *