ಕಾಪು ದಂಡತೀರ್ಥ ವಿದ್ಯಾಸಂಸ್ಥೆಯಲ್ಲಿ ದಿನಾಂಕ 17.01.2025 ರಂದು ಅಂಗನವಾಡಿ ಶಿಕ್ಷಕಿಯರಿಗೆ ಮಾಹಿತಿ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಆಡಳಿತಮಂಡಳಿಯ ಸದಸ್ಯೆ ಹಾಗೂ ಕಾಪು ಪ್ರಶಾಂತ್ ಆಸ್ಪತ್ರೆಯ ವೈದ್ಯೆ ಡಾll ಪನ್ನಾ ಪಿ. ಶೆಟ್ಟಿ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು. ಸಂಪನ್ಮೂಲ ವ್ಯಕ್ತಿಯಾದ ಉಡುಪಿಯ ಪ್ರಸಿದ್ಧ ಮನೋವೈದ್ಯರಾದ ಡಾll ವಾಸುದೇವ್ ಎಸ್. ಇವರು ಮನೆಯ ವಾತಾವರಣದಿಂದ ಶಾಲೆಯ ಜೀವನಕ್ಕೆ ಪ್ರವೇಶಿಸುವ ಮುದ್ದು ಮಕ್ಕಳ ಆರೋಗ್ಯದ ಬಗ್ಗೆ ಅಂಗನವಾಡಿ ಶಿಕ್ಷಕಿಯರು ಅತೀವವಾದ ಕಾಳಜಿಯನ್ನು ವಹಿಸಬೇಕಾದರೆ ಅವರಿಗೆ ಇಂತಹ ಮಾರ್ಗದರ್ಶನ ಕಾರ್ಯಕ್ರಮಗಳು ಅತ್ಯಗತ್ಯ. ಶಿಕ್ಷಕಿಯರು ಶಾರೀರಿಕ ಹಾಗೂ ಮಾನಸಿಕವಾಗಿ ಸಮರ್ಪಕವಾದ ಮಾಹಿತಿಯನ್ನು ಪಡೆದುಕೊಂಡು ಮಕ್ಕಳ ಮನೋಭಾವನೆಗೆ ತಕ್ಕಂತಹ ಶಿಕ್ಷಣ ನೀಡಬಹುದು, ಹಾಗೂ ಅವರ ಸರ್ವಾಂಗೀಣ ಉನ್ನತಿ ಸಾಧ್ಯ ಎಂಬ ಮಾಹಿತಿಯನ್ನು ನೀಡಿದರು. ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಉಡುಪಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಛೇರಿಯ ಮೇಲ್ವಿಚಾರಕಿಯಾದ ಪೂರ್ಣಿಮಾ ಇವರು ಅಂಗನವಾಡಿಯ ಶಿಕ್ಷಕಿ ಹಾಗೂ ಕಾರ್ಯಕರ್ತೆಯರು ಮಕ್ಕಳ ಶ್ರೇಯೋಭಿವೃದ್ಧಿಯಲ್ಲಿ ಜವಾಬ್ದಾರಿಯುತ ಕಾರ್ಯಗಳನ್ನು ನಿರ್ವಹಿಸುತ್ತಾರೆ. ಇವರಿಗೆ ನೀಡುವ ಮಾಹಿತಿ ಗೌರವಯುತ ಹಾಗೂ ಶ್ಲಾಘನೀಯ ಎಂಬ ಸಂದೇಶವನ್ನು ನೀಡಿದರು. ಸಮಾರಂಭದ ಅಧ್ಯಕ್ಷತೆಯನ್ನು ಸಂಚಾಲಕರಾದ ಡಾll ಪ್ರಶಾಂತ್ ಶೆಟ್ಟಿ ವಹಿಸಿದ್ದರು.
ಪೂರ್ವ ಪ್ರಾಥಮಿಕ ವಿಭಾಗದ ಮುಖ್ಯಸ್ಥೆ ರಾಜಲಕ್ಶ್ಮೀ ರಾವ್ ಉಪಸ್ಥಿತರಿದ್ದರು. ಮುಖ್ಯೋಪಾಧ್ಯಾಯ ಗೇಬ್ರಿಯಲ್ ಮಸ್ಕರೇನ್ಹಸ್ ಪ್ರಸ್ತಾವನೆಗೈದರು. ಪ್ರಾಂಶುಪಾಲ ನೀಲಾನಂದ್ ನಾಯ್ಕ್ ಸ್ವಾಗತಿಸಿ, ಶಿಕ್ಷಣ ಸಂಯೋಜಕ ಶಿವಣ್ಣ ಬಾಯರ್ ವಂದಿಸಿದ ಈ ಕಾರ್ಯಕ್ರಮವನ್ನು ಶಿಕ್ಷಕಿ ಸುನೀತಾ ನಿರೂಪಿಸಿದರು.

