×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಕಾರ್ಕಳ : ಅತ್ತೂರು ಸಂತ ಲಾರೆನ್ಸ್ ಬಸಿಲಿಕಾ : ಜ. 26-30 ವಾರ್ಷಿಕ ಮಹೋತ್ಸವ

ಕಾರ್ಕಳ: ಸಂತ ಲೋರೆನ್ಸ್ ಬಸಿಲಿಕದ ವಾರ್ಷಿಕ ಮಹೋತ್ಸವ 2025 ಜನವರಿ 26, 27, 28, 29 ಹಾಗೂ 30ರಂದು 5 ದಿನಗಳ ಕಾಲ ಜರಗಲಿದೆ. ಈ ಬಗ್ಗೆ ಎಲ್ಲಾ ಪೂರ್ವಭಾವಿ ಸಿದ್ಧತೆಗಳು ನಡೆದಿದ್ದು, ಬಸಿಲಿಕದ ವತಿಯಿಂದ ವಾರ್ಷಿಕ ಮಹೋತ್ಸವದ ಆಚರಣೆಗೆ ಸನ್ನದ್ದರಾಗಿದ್ದೇವೆ ಎಂದು ಬಸಿಲಿಕಾದ ರೆ. ಫಾ. ವಂದನೀಯ  ಆಲ್ಬನ್ ಡಿಸೋಜಾ ಹೇಳಿದರು. ಅವರು ಅತ್ತೂರು ಸಂತ ಲಾರೆನ್ಸ್ ಚರ್ಚ್‌ ಹಾಲ್‌ನಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಜನವರಿ 26 ರಂದು ಆದಿತ್ಯವಾರ ಮಕ್ಕಳಿಗಾಗಿ ಪೂಜೆ ಹಾಗೂ ವಿಶೇಷ ಪ್ರಾರ್ಥನೆ ಇರಲಿದೆ. ಜನವರಿ 27 ರಂದು ಸೋಮವಾರ ಅಸ್ವಸ್ಥರಿಗಾಗಿ ಮೂರು ವಿಶೇಷ ಪೂಜೆ ಇರುವುದು.  ವಾರ್ಷಿಕ ಮಹೋತ್ಸವದ ದಿನಗಳಲ್ಲಿ ಕೊಂಕಣಿ ಭಾಷೆಯಲ್ಲಿ 31 ಹಾಗೂ ಕನ್ನಡ ಭಾಷೆಯಲ್ಲಿ 7 ಹೀಗೆ ಒಟ್ಟು 38 ದಿವ್ಯ ಪೂಜೆಗಳನ್ನು ಅರ್ಪಿಸಲಾಗುವುದು. ವಾರ್ಷಿಕ ಮಹೋತ್ಸವದ ದಿನಗಳಲ್ಲಿ, ಬೆಳ್ತಂಗಡಿ, ಬಾರಯಿಪುರ್, ಮಂಗಳೂರು ಮತ್ತು ಉಡುಪಿ ಧರ್ಮಕ್ಷೇತ್ರದ ಧರ್ಮಾಧ್ಯಕ್ಷರು ಹಾಗೂ ಶ್ರೇಷ್ಠ ಗುರುಗಳು ಇಲ್ಲಿಗೆ ಆಗಮಿಸಿ ದಿವ್ಯ ಪೂಜೆಯನ್ನು ಅರ್ಪಿಸುವರು ಎಂದರು.  ಸುರಕ್ಷತೆಗಾಗಿ ಬಸಿಲಿಕಾದ ಒಳಗಡೆ ಹಾಗೂ ಬಸಿಲಿಕದ ವಠಾರದಲ್ಲಿ 72 ಸಿ.ಸಿ ಕ್ಯಾಮರಗಳನ್ನು ಅಳವಡಿಸಲಾಗಿದ್ದು, ಬಸಿಲಿಕಾದ ಬಲ ಬದಿಯಲ್ಲಿ ಅಂದರೆ ‘ಪವಾಡ ಮೂರ್ತಿ’ ಪ್ರತಿಷ್ಠಾಪಿಸಿದ ಪಕ್ಕದಲ್ಲಿ ಕಥೋಲಿಕ್ ಕ್ರೈಸ್ತರಿಗೆ ಪಾಪ ನಿವೇದನೆಗೆ ವ್ಯವಸ್ಥೆ ಮಾಡಲಾಗಿದೆ. ದೇವಾಲಯದ ಒಳಗೆ ಪ್ರಾರ್ಥನೆಗಾಗಿ ಮಾತ್ರ ಅವಕಾಶ ನೀಡಲಾಗಿದೆ. ಭಕ್ತರು ಶ್ರೀಕ್ಷೇತ್ರಕ್ಕೆ ಹೇಳಿಕೊಂಡ ಹಣದ ರೂಪದ ಹರಕೆ, ವಸ್ತು ರೂಪದ ಹರಕೆ, ಮೊಂಬತ್ತಿಗಳ ಹರಕೆಗಳನ್ನು ದೇವಾಲಯದ ಎಡಬದಿಯಲ್ಲಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಭಕ್ತಾಧಿಗಳಿಗೆ ಕುಡಿಯಲು ಶುದ್ಧ ಹಾಗೂ ತಂಪು ನೀರಿನ ವ್ಯವಸ್ಥೆಯನ್ನು ಬಸಿಲಿಕದ ವಠಾರದಲ್ಲಿ 5 ಸ್ಥಳದಲ್ಲಿ ಮಾಡಲಾಗುವುದು ಎಂದರು.  ಶಾರೀರಿಕ ಅಗತ್ಯತೆ ಪೂರೈಸಲು ಬಸಿಲಿಕದ ವಠಾರದಲ್ಲಿ ಪೋಲಿಸ್ ಸೇವಾ ಕೇಂದ್ರದ ಪಕ್ಕದಲ್ಲಿ ಸುಮಾರು 40 ಆಧುನಿಕ ಸವಲತ್ತುಗಳುಳ್ಳ ಶೌಚಾಲಯಗಳು, ಗುರುನಿವಾಸದ ಎಡ ಬದಿಯಲ್ಲಿ 20 ಶೌಚಾಲಯಗಳು ಇವೆ. ಅಂಗವಿಕಲರಿಗಾಗಿ ಪ್ರತ್ಯೇಕ ಹಾಗೂ ಹಿರಿಯ ನಾಗರಿಕರಿಗಾಗಿ ಕೊಮೊಡ್ ಮಾದರಿಯ ಶೌಚಾಲಯಗಳಿವೆ. ಕಾನೂನು ಮತ್ತು ಶಿಸ್ತು ಪಾಲನೆಗಾಗಿ ಗರಿಷ್ಟ ಸಂಖ್ಯೆಯ ಪೋಲಿಸ್ ಅಧಿಕಾರಿ ಹಾಗೂ ಪೋಲಿಸ್ ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸಲಿದ್ದಾರೆ. ಯಾತ್ರಾರ್ಥಿಗಳ ಸುರಕ್ಷತೆಗೆ ಸಹಕರಿಸುತ್ತಾರೆ. ಯಾತ್ರಾರ್ಥಿಗಳ ವಾಹನಗಳ ನಿಲುಗಡೆಯ ವ್ಯವಸ್ಥೆಯ ಮೇಲ್ವಿಚಾರಣೆಯನ್ನು ನುರಿತ ಗೃಹರಕ್ಷದಳ ಹಾಗೂ ಇತರ ಸಿಬ್ಬಂದಿಗಳು ನಿರ್ವಹಿಸಲಿರುವರು ಎಂದರು.  ಕಾಬೆಟ್ಟು ದ್ವಾರದ ಮೂಲಕ ಬರುವ ವಾಹನಗಳ ದಟ್ಟಣೆಯಿಂದ ಭಕ್ತಾಧಿಗಳಿಗೆ ಆಗುವ ಅಡಚಣೆಯನ್ನು ನಿವಾರಿಸಲು, ಪುಕ್ಕೇರಿಯಿಂದ ದೂಪದಕಟ್ಟೆ ಮೂಲಕ ವಾಹನಗಳನ್ನು ಕಳುಹಿಸಿ, ದೂಪದಕಟ್ಟೆ ದ್ವಾರ ಪ್ರವೇಶಿಸುವಾಗ ಎಡಬದಿಗೆ ವಿಸ್ತಾರವಾದ ವಾಹನ ನಿಲುಗಡೆ ಸ್ಥಳ, ಗಾರ್ಡನ್ ಹೌಸ್ ಹತ್ತಿರ ತಿರುವಿನಲ್ಲಿ ಎಡಬದಿಯಲ್ಲಿ ಹಾಗೂ ಗಾರ್ಡನ್ ಹೌಸ್ ದಾಟಿದ ನಂತರ ಎಡಬದಿಯಲ್ಲಿ ವಾಹನ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ. ಅಲ್ಲಿಂದ ಮುಂದೆ ಬ್ಯಾರಿಕೇಡ್ ಹಾಕಿರುವ ತನಕ ಮಾತ್ರ ರಿಕ್ಷಾ ಸಂಚಾರಕ್ಕೆ ಅವಕಾಶವಿದೆ. ಅಲ್ಲಿಂದ ಮುಂದಕ್ಕೆ ವಾಹನಗಳಿಗೆ ಪ್ರವೇಶವಿಲ್ಲ.  ಕಾಬೆಟ್ಟು ಕಡೆಯಿಂದ ಬರುವ ವಾಹನಗಳಿಗೆ ಪ್ರಸಾದ್ ಟೈಲರ್ ಜಂಕ್ಷನ್ ದಾಟಿ ಮುಂದೆ ಬರುವಾಗ ಬಲಬದಿಯಲ್ಲಿ ಸಂತ ಲೋರೆನ್ಸ್ ಧರ್ಮಕೇಂದ್ರದ ಆಡಳಿತಕ್ಕೊಳಪಟ್ಟ ಸಂತ ಲೋರೆನ್ಸ್ ಹೈಸ್ಕೂಲ್ ಶಾಲಾ ಆಟದ ವಿಶಾಲವಾದ ಮೈದಾನವನ್ನು ಸಂಪೂರ್ಣವಾಗಿ ವಾಹನ ನಿಲುಗಡೆಗಾಗಿಯೇ ಕಾದಿರಿಸಲಾಗಿದೆ. ವೆಹಿಕಲ್ ಪಾಸ್ ಹೊಂದಿದ ವಾಹನ ಚಾಲಕರು ತಮ್ಮ ವಾಹನಗಳನ್ನು ಕಾಬೆಟ್ಟು ಅತ್ತೂರು ಕಾನ್ವೆಂಟ್ ಮಾರ್ಗವಾಗಿ ತಂದು ಎಡಬದಿಯ ಪಂಜಾಯತ್ ಶೌಚಾಲಯದ ಬಳಿ ಎಡಕ್ಕೆ ತಿರುಗಿ ಮುಂದೆ ಸಾಗಿ ಬಲಬದಿಯ BSNL MOBILE TOWER ಬಳಿ ಮುಂದೆ ಸಾಗಿ ಎಡಕ್ಕೆ ತಿರುಗಿ V.I.P ಹಾಗೂ ಇತರ PASS HOLDER ಗಳಿಗಾಗಿ ನಿರ್ಮಿಸಿದ ವಿಶಾಲವಾದ ಪಾರ್ಕಿಂಗ್ ವಠಾರದಲ್ಲಿ ವಾಹನಗಳನ್ನು ನಿಲ್ಲಿಸುವುದು.  ವೆಹಿಕಲ್ ಪಾಸ್ ಹೊಂದಿದ ವಾಹನಗಳು, ನಿಲುಗಡೆ ಮಾಡಿದ ವಾಹನಗಳಿಗೆ ನಿಲುಗಡೆ ಸ್ಥಳದಿಂದ ಮುಂದೆ ಸಾಗಿ ಏಕಮುಖ ಕಾಂಕ್ರಿಟ್ ರಸ್ತೆಯ ಮೂಲಕ ಕಾರ್ಕಳ-ಪಡುಬಿದ್ರಿ ರಸ್ತೆಗೆ ಸಂಪರ್ಕ ಕಲ್ಪಿಸಲಾಗಿದೆ. ಪೋಲಿಸ್ ಸಿಬ್ಬಂದಿ ವಾಹನಗಳಿಗೆ ಹಾಗೂ ತುರ್ತು ಚಿಕಿತ್ಸಾ ವಾಹನಗಳಿಗೆ ಬಿಟ್ಟರೆ ಬೇರೆ ಯಾವುದೇ ವಾಹನಗಳಿಗೆ ಬಸಿಲಿಕಾದ ವಠಾರಕ್ಕೆ ಪ್ರವೇಶವಿಲ್ಲ ಎಂದರು.  ಬಸಿಲಿಕದ ವಠಾರದಲ್ಲಿ ಬಸಿಲಿಕದ ಅಧಿಕೃತ ಸ್ಟಾಲ್‌ನಲ್ಲಿ ಮಾತ್ರ ಮೊಂಬತ್ತಿ ಮಾರಾಟ ಮಾಡಲು ಅವಕಾಶ ಮಾಡಲಾಗಿದೆ. ಇತರರಿಗೆ ಬಸಿಲಿಕಾ ವಠಾರದಲ್ಲಿ ಮೊಂಬತ್ತಿ ಮಾರಾಟ ಮಾಡಲು ಸಂಪೂರ್ಣವಾಗಿ ನಿಷೇಧಿಸಲಾಗಿದೆ.  ಸಾರ್ವಜನಿಕರ ಹಾಗೂ ಭಕ್ತಾಧಿಗಳ ಸುಗಮ ಸಂಚಾರಕ್ಕಾಗಿ ದೂಪದ ಕಟ್ಟೆಯಿಂದ ಪ್ರಸಾದ್ ಟೈಲರ್ ಜಂಕ್ಷನ್‌ವರೆಗೆ ರಸ್ತೆಯ ಎರಡೂ ಕಡೆಯ ಅಂಚಿನಿಂದ ಸ್ವಲ್ಪ ಜಾಗ ಬಿಟ್ಟು ಅಂಗಡಿಮುಂಗಟ್ಟು ನಿರ್ಮಿಸುವಂತೆ ಸ್ಥಳೀಯ ನಿಟ್ಟೆ ಗ್ರಾಮ ಪಂಚಾಯತ್ ಆಡಳಿತ ಮಂಡಳಿಗೆ ತಿಳಿಸಲಾಗಿದೆ. ಇದು ಸುರಕ್ಷೆಯ ದೃಷ್ಠಿಯಿಂದ ಹಾಗೂ ರಸ್ತೆಯಲ್ಲಿ ಹಾದುಹೋಗುವ ಯಾವುದೇ ವ್ಯಕ್ತಿಗೆ ದೈಹಿಕ ಕಿರುಕುಳ ಆಗದಂತೆ ತಡೆಯಲು ಅತೀ ಆವಶ್ಯಕವಾಗಿದೆ.  ಏಕಶಿಲಾ ಕಲ್ಲಿನಿಂದ ಕೆತ್ತಿದ ಸಂತ ಲೋರೆನ್ಸರ ಅತಿ ದೊಡ್ಡ ಮೂರ್ತಿಯನ್ನು ಬಸಿಲಿಕದ ಬಲಬದಿಯಲ್ಲಿ ಪ್ರತಿಷ್ಠಾಪಿಸಲಾಗಿದೆ. ಶಿಲಾ ಕಲ್ಲಿನಿಂದ ಕೆತ್ತಿದ ಸಂತ ಲೋರೆನ್ನರ ಪ್ರತಿಮೆ ಇಟಲಿ ದೇಶದ ರೋಮ್ ಪ್ರಾಂತ್ಯದಲ್ಲಿ ಹಾಗೂ ಅತ್ತೂರು ಸಂತ ಲೋರೆನ್ಸ್ ಬಾಸಿಲಿಕಾದಲ್ಲಿ ಬಿಟ್ಟರೆ ಬೇರೆಲ್ಲೂ ಕಾಣಸಿಗುವುಸಿಲ್ಲ. ಏಕಶಿಲಾ ಕಲ್ಲಿನಿಂದ ಕೆತ್ತಿದ ಸಂತ ಲೋರೆನ್ಸರ ಹೊಸ ಮೂರ್ತಿಯನ್ನು ಸಂತ ಲೋರೆನ್ಸರ ಪುಷ್ಕರಣಿಯಲ್ಲಿ ಪ್ರತಿಷ್ಠಾಪಿಸಲಾಗಿದೆ. ಬಸಿಲಿಕದಲ್ಲಿ ಪುಷ್ಕರಣೆ ಹಾಗೂ ಪುಷ್ಕರಣಿಯಲ್ಲಿ ಸಂತ ಲೋರೆನ್ನರ ಏಕಶಿಲಾ ಪ್ರತಿಮೆ   ಅತ್ತೂರು ಸಂತ ಲಾರೆನ್ಸ್ ಬಿಸಿಲಿಕದಲ್ಲಿ ಬಿಟ್ಟರೆ ಪ್ರಪಂಚದಲ್ಲಿ ಬೇರೆಲ್ಲೂ ಕಾಣಸಿಗುವುದಿಲ್ಲ. ಬಸಿಲಿಕಾ ವಠಾರದಲ್ಲಿ ಹಾಸುಕಲ್ಲು ಮತ್ತು ಇಂಟರ್‌ಲಾಕನ್ನು ಅಳವಡಿಸಿ ಪರಿಸರವನ್ನು ಧೂಳಿನಿಂದ ಮುಕ್ತಗೊಳಿಸಿದ್ದೇವೆ.  ಜನವರಿ  27 ಸೋಮವಾರ ಸಂಜೆ 8.00 ರಿಂದ ಬಸಿಲಿಕಾ ವಠಾರದಲ್ಲಿ ಅತಿಥಿ ಕಲಾವಿದರ ಕೂಡುವಿಕೆಯೊಂದಿಗೆ ಜಿ. ಕೆ. ಶ್ರೀನಿವಾಸ್ ಸಾಲ್ಯಾನ್ ವಿರಚಿತ ಸಂತ ಲೋರೆನ್ಸರ ಮಹಾತ್ಮ ಎಂಬ ಕನ್ನಡ ಯಕ್ಷಗಾನ ಪ್ರಸಂಗ ನಡೆಯಲಿರುವುದು ಎಂದೂ ವಂದನೀಯ  ಆಲ್ಬನ್ ಡಿಸೋಜಾ ಹೇಳಿದರು.   ಸುದ್ದಿಗೋಷ್ಠಿಯಲ್ಲಿ ಬಸಿಲಿಕಾದ ಸಹಾಯಕ ಧರ್ಮಗುರು ವಂ. ಲ್ಯಾರಿ ಪಿಂಟೊ, ಆಧ್ಯಾತ್ಮಿಕ ನಿರ್ದೇಶಕರಾದ ವಂ. ರೋಮನ್ ಮಸ್ಕರೇನ್ಹಸ್, ಉಪಾಧ್ಯಕ್ಷರಾದ ಸಂತೋಷ್ ಡಿಸಿಲ್ವಾ, ಕಾರ್ಯದರ್ಶಿ ರೊನಾಲ್ಡ್ ನೊರೋನ್ಹಾ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *