ನಂದಿಕೂರು ಅದಾನಿ ಉಷ್ಣ ವಿದ್ಯುತ್ ಸ್ಥಾವರದಿಂದ ಪಕ್ಕದ ಕೇರಳ ರಾಜ್ಯಕ್ಕೆ ವಿದ್ಯುತ್ ಸರಬರಾಜಿಗಾಗಿ ಕಾರ್ಕಳ ತಾಲೂಕಿನ ಇನ್ನಾ ಗ್ರಾಮದ ಕೃಷಿ ಭೂಮಿ ಹಾಗೂ ಜನವಸತಿ ಪ್ರದೇಶದಲ್ಲಿ ಹೈ ಟೆನ್ಷನ್ ವಿದ್ಯುತ್ ತಂತಿಗಳನ್ನು ಅವೈಜ್ಞಾನಿಕವಾಗಿ ಅಳವಡಿಸುವ ಕಾಮಗಾರಿಯನ್ನು ಇಂದು ಮತ್ತೆ ಆರಂಭಿಸಲು ಕಂಪನಿ ಅಧಿಕಾರಿಗಳು ಮುಂದಾಗುತ್ತಿದ್ದಂತೆ ವಿಷಯ ತಿಳಿದ ಕಾರ್ಕಳ ಕಾಂಗ್ರೆಸ್ ನಾಯಕರಾದ ಉದಯ ಶೆಟ್ಟಿ ಮುನಿಯಾಲು ಹಾಗೂ ಸ್ಥಳೀಯ ಕಾಂಗ್ರೆಸ್ ನಾಯಕರು ಸ್ಥಳಕ್ಕೆ ದಾವಿಸಿ ತೀವ್ರ ವಿರೋದವನ್ನೊಡ್ಡಿ ಕಾಮಗಾರಿ ಸ್ಥಗಿತಗೊಳಿಸುವಲ್ಲಿ ಯಶಸ್ವಿಯಾದರು. ಕೇಂದ್ರ ಬಿಜೆಪಿ ಸರ್ಕಾರದ ಯೋಜನೆ ಇದಾಗಿದ್ದು ರಾಜ್ಯ ಬಿಜೆಪಿ ಸರ್ಕಾರದ ಅವಧಿಯಲ್ಲಿ ಇಂಧನ ಸಚಿವರಾಗಿದ್ದ ಸುನೀಲ್ ಕುಮಾರ್ ಅನುಮತಿಯಿಂದ ಯೋಜನೆಯು ಅನುಮೋದನೆಗೊಂಡಿದ್ದು ಅದಾನಿ ಉಷ್ಣ ವಿದ್ಯುತ್ ಸ್ಥಾವರದಿಂದ ಕೇರಳ ರಾಜ್ಯಕ್ಕೆ ವಿದ್ಯುತ್ ಸರಬರಾಜಿಗಾಗಿ ಹೈ ಟೆನ್ಷನ್ ವಿದ್ಯುತ್ ತಂತಿಗಳು ಇನ್ನಾ ಗ್ರಾಮದ ಫಲವತ್ತಾದ ಕೃಷಿ ಭೂಮಿ ಹಾಗೂ ಜನವಸತಿ ಪ್ರದೇಶದ ನಡುವೆ ಹಾದು ಹೋಗುವುದರಿಂದ ಇನ್ನಾ ಗ್ರಾಮದ ನೂರಾರು ಕೃಷಿಕರು ಸಂತ್ರಸ್ತರಾಗುವ ಅಪಾಯವಿದೆ. ಹಲವು ಅವಧಿಗೆ ಶಾಸಕನಾಗಿ ತನ್ನನ್ನು ಗೆಲ್ಲಿಸಿದ ಕಾರ್ಕಳ ಕ್ಷೇತ್ರದ ಜನರ ಬದುಕಿಗೆ ಕೊಳ್ಳಿ ಇಡುವ ಯೋಜನೆಯನ್ನು ಸುನೀಲ್ ಕುಮಾರ್ ಉಡುಗೊರೆಯಾಗಿ ಕೊಟ್ಟ ಪರಿಣಾಮ ಇಂದು ಇನ್ನಾ ಗ್ರಾಮದ ಜನತೆ ತಮ್ಮ ಕೃಷಿ ಭೂಮಿ ಮನೆಮಠಗಳನ್ನು ಕಳೆದುಕೊಳ್ಳುವ ಪರಿಸ್ಥಿತಿ ಎದುರಾಗಿದ್ದು ಈ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರಾದ ಉದಯ ಶೆಟ್ಟಿ ಮುನಿಯಾಲು ಹಾಗೂ ಸ್ಥಳಿಯ ಕಾಂಗ್ರೆಸ್ ಮುಖಂಡರು ಸ್ಥಳಕ್ಕೆ ಧಾವಿಸಿ ಉಡುಪಿ ಜಿಲ್ಲಾಧಿಕಾರಿಯವರೊಂದಿಗೆ ಮಾತುಕತೆ ನಡೆಸಿ ಕಾಮಗಾರಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದಾರೆ. ಇನ್ನಾ ಗ್ರಾಮದ ಜನರ ಬದುಕಿಗೆ ಕೊಳ್ಳಿ ಇಡುವ ಯೋಜನೆಯನ್ನು ಅನುಮೋದನೆಗೊಳಿಸಿದ ಶಾಸಕ ಸುನೀಲ್ ಕುಮಾರ್ ಇನ್ನಾ ಗ್ರಾಮದ ಕಡೆಗೆ ತಲೆಯನ್ನೂ ಹಾಕದೆ ತನ್ನ ಹಿಂಬಾಲಕರ ಪಟಲಾಮನ್ನು ಸ್ಥಳಕ್ಕೆ ಕಳುಹಿಸಿ ಸಂತ್ರಸ್ತರ ಮುಂದೆ ವಿರೋಧದ ನಾಟಕವನ್ನಾಡುತ್ತಿರುವುದು ಖಂಡನೀಯವಾಗಿದೆ. ಕೃಷಿ ಭೂಮಿಯನ್ನು, ಜನರ ಬದುಕನ್ನು ನುಂಗಿ ನೀರು ಕುಡಿಯುವ ಪ್ರಸ್ತುತ ಯೋಜನೆಯನ್ನು ಶಾಶ್ವತವಾಗಿ ಸ್ಥಗಿತಗೊಳಿಸಲು ಬಿಜೆಪಿ ನಾಯಕರಿಗೆ ಇಚ್ಛಾ ಶಕ್ತಿಯಿದ್ದರೆ ಕೇಂದ್ರ ಇಂಧನ ಸಚಿವರ ಮುಂದೆ ಕುಳಿತು ಈ ಯೋಜನೆಯನ್ನು ಕೈಬಿಡುವಂತೆ ಒತ್ತಾಯಿಸಬೇಕಿದೆ, ಅದನ್ನು ಬಿಟ್ಟು ಸ್ಥಳೀಯ ಮುಗ್ದ ಜನರ ಮುಂದೆ ಬಿಜೆಪಿ ಪಟಲಾಮು ಮೊಸಳೆ ಕಣ್ಣೀರು ಸುರಿಸಿದರೆ ಯಾವ ಪ್ರಯೋಜನವೂ ಇಲ್ಲ.ಈ ಸಂದರ್ಭದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

