×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಪಡುಬಿದ್ರಿ ಸಹಕಾರಿ ಸೊಸೈಟಿ ನವೀಕೃತ ಪಲಿಮಾರು ಶಾಖೆ ಉದ್ಘಾಟನೆ.

ಪಡುಬಿದ್ರಿ: ಪಲಿಮಾರು ಶಾಖೆಯ ನೂತನ ಕಟ್ಟಡ `ಸಹಕಾರ ಸಂಕೀರ್ಣ’ ಹಾಗೂ ನವೀಕೃತ ಹವಾ ನಿಯಂತ್ರಿತ ಶಾಖೆಯ ಉದ್ಘಾಟನಾ ಕಾರ್ಯಕ್ರಮ ಸೋಮವಾರ  ನೆರವೇರಿತು.ಪಲಿಮಾರು ಶಾಖೆಯ ನೂತನ ಕಟ್ಟಡ `ಸಹಕಾರ ಸಂಕೀರ್ಣ’ ಹಾಗೂ ನವೀಕೃತ ಹವಾ ನಿಯಂತ್ರಿತ ಪಲಿಮಾರು ಶಾಖೆಯನ್ನು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ನಿ. ಅಧ್ಯಕ್ಷ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ವಾಣಿಜ್ಯ ಬ್ಯಾಂಕ್‌ಗಳು ವಿಲೀನದಿಂದ ಸಂಕುಚಿತಗೊಂಡಿದ್ದು, ಜನರು ಖಾಸಗಿ ಬ್ಯಾಂಕ್‌ಗಳಿಂದ ದೂರವಾಗುತಿದ್ದಾರೆ. ಜನರೊಂದಿಗೆ ಒಡನಾಟ, ಸೇವೆ ಹಾಗೂ ಸಾಮಾಜಿಕ ಕಳಕಳಿಯಿಂದ ಸಹಕಾರಿ ಸಂಸ್ಥೆಗಳು ಜನರಿಗೆ ಹತ್ತಿರವಾಗುತ್ತಿದ್ದು, ಸಹಕಾರಿ ಸಂಸ್ಥೆಗಳು, ಸಹಕಾರಿ ಬ್ಯಾಂಕ್ ಇಂದು ಜನರಿಗಾಗಿ ವಿಸ್ತಾರಗೊಳ್ಳುತ್ತಿದೆ ಎಂದರು. ಸಹಕಾರಿ ಸಂಸ್ಥೆಗಳಿಂದ ರೈತರಿಗೆ ಸೇವೆ ನೀಡುವುದರೊಂದಿಗೆ ಜನರಿಗೆ ಅನೇಕ ಸೌಲಭ್ಯಗಳನ್ನೂ ಮಾಡಿಕೊಡುವ ಮೂಲಕ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡು ಮೆಚ್ಚುಗೆಗೆ ಪಾತ್ರವಾಗಿರುವ ಪಡುಬಿದ್ರಿ ಸಹಕಾರಿ ಸಂಘವು, ಅವಿಭಜಿತ ಜಿಲ್ಲೆಯಲ್ಲಿ ಎಲ್ಲಾ ಶಾಖೆಗಳು ಹವಾನಿಯಂತ್ರಿತಗೊಂಡಿರುವ ಏಕೈಕ ಸಹಕಾರಿ ಸಂಸ್ಥೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ ಡಾ.ಎಂ.ಎನ್. ರಾಜೇಂದ್ರ ಕುಮಾರ್, ಪಲಿಮಾರು ಎಸಿ ಶಾಖಾ ಕಟ್ಟಡದ ಕೆಲಸ ಕಾರ್ಯಗಳಿಗಾಗಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಮೂಲಕ ೧೦ಲಕ್ಷ ರೂ. ಗಳನ್ನು ನೀಡಲಾಗುವುದು ಎಂದರು. ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ, ಪಡುಬಿದ್ರಿ ವ್ಯವಸಾಯಿಕ ಸಹಕಾರಿ ಸಂಸ್ಥೆಯ ಬಗೆಗೆ ಹೆಮ್ಮೆ ಎನಿಸುತ್ತಿದೆ. ಭಾರತದ ಬಲಿಷ್ಠ ಹಣಕಾಸು ಸಂಸ್ಥೆಯಾಗಿ ದೇಶದಲ್ಲಿ ಸಹಕಾರಿ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. ಇದಕ್ಕೆ ಮತ್ತಷ್ಟು ಕಾಯಕಲ್ಪ ನೀಡುವ ಕಾರ್ಯವನ್ನು ಕೇಂದ್ರ ಸಹಕಾರ ಸಚಿವ ಅಮಿತ್ ಷಾ ಮಾಡುತ್ತಿದ್ದಾರೆ ಎಂದರು. ಮಾಜಿ ಸಚಿವ ವಿನಯಕುಮಾರ್ ಸೊರಕೆ, ಮಾಜಿ ಶಾಸಕ ಲಾಲಾಜಿ ಮೆಂಡನ್, ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಬಿ. ಜಯಕರ ಶೆಟ್ಟಿ ಇಂದ್ರಾಳಿ, ಪಲಿಮಾರು ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಪ್ರಧಾನ ಅರ್ಚಕ ಶ್ರೀನಿವಾಸ ಉಡುಪ, ಸಹಕಾರಿ ಸಂಘಗಳ ನಿವೃತ್ತ ಸಹಾಯಕ ನಿಬಂಧಕ ಅರುಣ್ ಕುಮಾರ್ ಎಸ್. ವಿ., ಮಾತನಾಡಿದರು. ಪಡುಬಿದ್ರಿ ಸೊಸೈಟಿಯ ಅಧ್ಯಕ್ಷ ವೈ. ಸುಧೀರ್ ಕುಮಾರ್ ಅಧ್ಯಕ್ಷತೆ ವಹಿಸಿ, ಮಾತನಾಡಿದರು. ಅಖಿಲ ಭಾರತ ಬಿಲ್ಲವರ ಯೂನಿಯನ್ ಅಧ್ಯಕ್ಷ ನವೀನ್‌ಚಂದ್ರ ಡಿ. ಸುವರ್ಣ, ಕುಂದಾಪುರ ಉಪವಿಭಾಗ ಸಹಕಾರ ಸಂಘಗಳ ಸಹಾಯಕ ನಿಬಂಧಕಿ ಸುಕನ್ಯಾ, ದ. ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ದೇವಿಪ್ರಸಾದ್ ಶೆಟ್ಟಿ, ಫಲಿಮಾರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸೌಮ್ಯಲತಾ ಶೆಟ್ಟಿ, ಉಪಾಧ್ಯಕ್ಷ ರಾಯೇಶ್ವರ ಪೈ, ತಾ. ಪಂ. ಮಾಜಿ ಸದಸ್ಯರಾದ ಲಕ್ಷ್ಮಣ್ ಶೆಟ್ಟಿ, ದಿನೇಶ್ ಕೋಟ್ಯಾನ್, ಡಾ| ಪ್ರಭಾ ನಂಬಿಯಾರ್, ಹಾಜಿ ಎಂ.ಪಿ. ಶೇಖಬ್ಬ ಫಲಿಮಾರು, ಉದ್ಯಮಿ ದಿನೇಶ್ ಪ್ರಭು ಉಪಸ್ಥಿತರಿದ್ದರು. ಸನ್ಮಾನ : ಸಮಾರಂಭದಲ್ಲಿ ದ. ಕ. ಕೇಂದ್ರ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷ ಡಾ| ಎಂ. ಎನ್. ರಾಜೇಂದ್ರಕುಮಾರ್, ಸಹಕಾರ ಸಂಘಗಳ ನಿವೃತ್ತ ಸಹಾಯಕ ನಿಬಂಧಕರಾದ ಅರುಣ್ ಕುಮಾರ್ ಎಸ್.ವಿ., ಭಾರತ ಕಬ್ಬಡಿ ತಂಡದ ಮಾಜಿ ನಾಯಕ ಗುತ್ತಿನಾರ್‌ ಶೇಖರ ಶೆಟ್ಟಿ, ಯುವ ಕೃಷಿಕ ರೋಹಿತ್ ಶೆಟ್ಟಿ, ಯುವ ಸಮಾಜ ಸೇವಕ ಶರಣ್‌ಕುಮಾರ್ ಮಟ್ಟು, ಕಟ್ಟಡದ ಗುತ್ತಿಗೆದಾರರು ಮತ್ತಿತರನ್ನು ಸಮ್ಮಾನಿಸಿ ಅಭಿನಂದಿಸಲಾಯಿತು. ಸಭೆಯಲ್ಲಿದ್ದ ವಿವಿಧ ಸಹಕಾರಿ ಸಂಘಗಳ ಮುಖ್ಯ ರ್ಯನಿರ್ವಹಣಾಧಿಕಾರಿಗಳು, ಅಧ್ಯಕ್ಷರುಗಳನ್ನು ಗುರುತಿಸಿ ಗೌರವಿಸಲಾಯಿತು. ಸಭಾ ಕಾರ್ಯಕ್ರಮದ ಪ್ರಾರಂಭದಲ್ಲಿ ಮಜಾ ಟಾಕೀಸ್ ಖ್ಯಾತಿಯ ಚಂದ್ರಕಾತ್ ಪಡುಬಿದ್ರಿ ಇವರಿಂದ ಸಂಗೀತ ಕಾರ್ಯಕ್ರಮವು ಜರಗಿತು. ನಿರ್ದೇಶಕರಾದ ಶಿವರಾಮ ಶೆಟ್ಟಿ, ವೈ. ಜಿ. ರಸೂಲ್, ಮಾಧವ ಆಚಾರ್ಯ, ರಾಜಾರಾಮ್ ರಾವ್, ಸ್ಟ್ಯಾನಿ ಕ್ವಾಡ್ರಸ್, ಗಿರೀಶ್ ಪಲಿಮಾರು, ವಾಸುದೇವ ಪಲಿಮಾರು, ಯಶವಂತ ಪಿ. ಬಿ., ಸುಚರಿತಾ ಎಲ್. ಅಮೀನ್, ಕುಸುಮಾ ಎಂ. ಕರ್ಕೇರ, ಕಾಂಚನಾ, ದ.ಕ., ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಪ್ರತಿನಿಧಿ ಬಾಲಗೋಪಾಲ ಬಲ್ಲಾಳ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ನಿಶ್ಮಿತಾ ಪಿ. ಎಚ್., ಶಾಖಾ ಪ್ರಬಂಧಕಿ ಶೋಭಾ ಪುತ್ರನ್ ಉಪಸ್ಥಿತರಿದ್ದರು. ದೇವಿಪ್ರಸಾದ್ ಬೆಳ್ಳಿಬೆಟ್ಟು ಕಾರ್ಯಕ್ರಮ ನಿರ್ವಹಿಸಿದರು. ಸಹಕಾರಿ ಸಂಸ್ಥೆಯ ಉಪಾಧ್ಯಕ್ಷ ಗುರುರಾಜ ಪೂಜಾರಿ ವಂದಿಸಿದರು.

Leave a Reply

Your email address will not be published. Required fields are marked *