
ಮಂಗಳೂರು: ಗುರುಪುರ ಸೇತುವೆ ಬಳಿ ರವಿವಾರ ನದಿಯಲ್ಲಿ ಶವವಾಗಿ ಕಂಡುಬಂದ ವ್ಯಕ್ತಿ ಮೂಡುಬಿದಿರೆಯ ಹೊರವಲಯ, ಬೆಳ್ತಂಗಡಿ ತಾಲೂಕಿನ ಕಾಶಿಪಟ್ಟ ಮೂಲದ ಉದ್ಯಮಿ ಆಶಿತ್ ಕುಮಾರ್ (51) ಎಂದು ತಿಳಿದು ಬಂದಿದೆ. ಅವರು ಆರ್ಥಿಕ ಸಂಕಷ್ಟದಿಂದಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ. ಆಶಿತ್ ಕುಮಾರ್ ಮೂಡುಬಿದಿರೆ ತ್ರಿಭುವನ್ ಜೇಸೀ, ಮಹಾವೀರ ಕಾಲೇಜು ಹಳೆವಿದ್ಯಾರ್ಥಿ ಸಂಘ ಮೊದಲಾದ ಸಂಘಟನೆಗಳಲ್ಲಿ ಸಕ್ರಿಯರಾಗಿದ್ದರು. ಮೊದಲಿಗೆ ಮಹಾವೀರ ಇಲೆಕ್ಟ್ರಾನಿಕ್ಸ್ ಹೆಸರಿನ ಸಂಸ್ಥೆ ನಡೆಸುತ್ತಿದ್ದ ಅವರು ವಿವಿಧ ವಿಮಾ ಕಂಪೆನಿಗಳ ಪ್ರತಿನಿಧಿಯಾಗಿದ್ದರು. ಕೆಲವು ವರ್ಷಗಳಿಂದ ಅವರು ಮಂಗಳೂರಿನಲ್ಲಿ ನೆಲೆಸಿದ್ದರು. ಆಶಿತ್ ಕುಮಾರ್ ಪತ್ನಿ ಮತ್ತು ಪುತ್ರನನ್ನು ಅಗಲಿದ್ದಾರೆ. ಇವರು ಶನಿವಾರ ಮನೆಯಿಂದ ಹೊರಟಿದ್ದರು ಎಂದು ತಿಳಿದುಬಂದಿದೆ. ಪ್ರಾಥಮಿಕ ತನಿಖೆಯ ಪ್ರಕಾರ, ಆತ್ಮಹತ್ಯೆಗೆ ಆರ್ಥಿಕ ಒತ್ತಡವೇ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ. ಬಜ್ಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

