
ಸರಣಿ ಅಪಘಾತ- ಸ್ಕೂಟರ್ ಸವಾರ ಮೃತ್ಯು ಪಡುಬಿದ್ರೆ-ಕಾರ್ಕಳ ಜಂಕ್ಷನ್ನಲ್ಲಿ ನಿನ್ನೆ ಸಾಯಂಕಾಲ ನಡೆದ ಸರಣಿ ಅಪಘಾತದಲ್ಲಿ ಸ್ಕೂಟರ್ ಸವಾರನೋರ್ವ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ನೇಪಾಳ ಮೂಲದ 42ವರ್ಷದ ಲೋಕ್ಬಹದ್ದೂರ್ ಕಡ್ಕ ಮೃತಪಟ್ಟ ದುರ್ದೈವಿ. ಲೋಕ್ಬಹದ್ದೂರ್ ಅವರ ಪತ್ನಿ ಮೀನಾ ಕಡ್ಕ ಅವರು ತೀವ್ರ ಸ್ವರೂಪದ ಗಾಯಗಳೊಂದಿಗೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಲೋಕ್ಬಹಾದ್ದೂರ್ ಕಡ್ಕ ದಂಪತಿ ಮಂಗಳೂರಿಗೆ ಬಂದು ನೆಲೆಸಿ 17ವರ್ಷಗಳಾಗಿದ್ದವು. ಈ ದಂಪತಿ ವಿವಿಧ ಪಿಜಿಗಳಿಗೆ ತಾವೇ ಹೋಗಿ ಅಡುಗೆ ಮಾಡಿಕೊಡುವ ಕೆಲಸ ಮಾಡಿಕೊಂಡಿದ್ದರು. ಇವರು ನಿನ್ನೆ ಉಡುಪಿಯಲ್ಲಿ ಸುತ್ತಾಡಿ ವಿವಿಧ ದೇವಳಗಳನ್ನು ಸಂದರ್ಶಿಸಿ ವಾಪಾಸಾಗುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಪಿಕಪ್ನಲ್ಲಿದ್ದ ಇಬ್ಬರೂ ಗಾಯಗೊಂಡಿದ್ದು, ಪಡುಬಿದ್ರಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಲಾರಿ ಚಾಲಕನ ನಿರ್ಲಕ್ಷತನ ಚಾಲನೆಯಿಂದಾಗಿ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ. ಲಾರಿ ಚಾಲಕನು ನಿರ್ಲಕ್ಷತನದಿಂದ ಲಾರಿಯನ್ನು ಚಲಾಯಿಸಿಕೊಂಡು ಬಂದು ಬ್ಯಾರಿಕೇಡ್, ಸ್ಕೂಟರ್ ಹಾಗೂ ಪಿಕಪ್ ವಾಹನಕ್ಕೆ ಡಿಕ್ಕಿ ಹೊಡೆದಿದ್ದಾನೆ. ಪಡುಬಿದ್ರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ಮುಂದುವರಿದಿದೆ.

