
ಹಳೆಯಂಗಡಿ: ಹಳೆಯಂಗಡಿ ರಾಷ್ಟ್ರೀಯ ಹೆದ್ದಾರಿ 66ರ ಪಡುಪಣಂಬೂರು ಪೆಟ್ರೋಲ್ ಪಂಪಿನ ಬುಧವಾರ ಮಧ್ಯರಾತ್ರಿ ಹೆದ್ದಾರಿ ಬದಿಯಲ್ಲಿ ಲಾರಿ ದುರಸ್ತಿ ಮಾಡುತ್ತಿದ್ದವರಿಗೆ ಕಾರು ಢಿಕಿ ಹೊಡೆದು ಇಬ್ಬರು ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟ ಘಟನೆ ನಡೆದಿದೆ. ಮೃತ ದುರ್ದೈವಿಗಳು ಮಧ್ಯ ಪ್ರದೇಶದ ಬಬುಲು ಅಚಲ್ ಸಿಂಗ್ ಎಂದು ತಿಳಿದುಬಂದಿದೆ. ಕೇರಳ ನಿವಾಸಿ ಅನಿಶ್ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಧ್ಯಪ್ರದೇಶದ ಇಂದೋರ್ನಿಂದ ಕೇರಳಕ್ಕೆ ಪ್ರಯಾಣಿಸುತ್ತಿದ್ದ ಲಾರಿಯ ಚಕ್ರ ಪಂಕ್ಚರ್ ಆಗಿ ಪಡುಪಣಂಬೂರು ಹೆದ್ದಾರಿ ಬಳಿ ಕೆಟ್ಟು ನಿಂತಿತ್ತು. ಹೀಗಾಗಿ ಲಾರಿಯನ್ನು ದುರಸ್ತಿ ಮಾಡಲೆಂದು ಮೂವರು ಲಾರಿಯಿಂದ ಇಳಿದು ಟಯರ್ ಬದಲಿಸುತ್ತಿದ್ದರು. ಈ ವೇಳೆ ಉಡುಪಿ ಕಡೆಯಿಂದ ಬಂದ ಕಾರು ಮೂವರಿಗೂ ಢಿಕ್ಕಿಯಾಗಿದೆ. ಢಿಕ್ಕಿಯ ರಭಸಕ್ಕೆ ಇಬ್ಬರು ಸ್ಥಳದಲ್ಲೇ ಮೃತಪಟ್ಟರೆ, ಓರ್ವನಿಗೆ ಗಾಯಗಳಾಗಿದೆ. ಗಾಯಾಳುವನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಢಿಕ್ಕಿ ಹೊಡೆದ ಕಾರು ಸ್ಥಳದಲ್ಲಿ ನಿಲ್ಲದೇ ಪರಾರಿಯಾಗಿದೆ. ಸಂಚಾರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ

