
ಮನೆಯ ಹಿಂಬಾಗಿಲಿನ ಬಾಗಿಲು ಮುರಿದು ಒಳ ಪ್ರವೇಶಿಸಿ ಕಳ್ಳರು ಸುಮಾರು 15 ಲಕ್ಷ ರೂಪಾಯಿ ಮೌಲ್ಯದ ಚಿನ್ನ ಬೆಳ್ಳಿ ಮತ್ತು ವಜ್ರಾಭರಣಗಳನ್ನು ಕಳವುಗೈದ ಘಟನೆ ಕಾಪು ತಾಲೂಕಿನ ಪಣಿಯೂರಿನಲ್ಲಿ ವರದಿಯಾಗಿದೆ.ನಿನ್ನೆ ಮಧ್ಯರಾತ್ರಿಯ ಬಳಿಕ ಈ ಕಳ್ಳತನ ನಡೆದಿದ್ದು, ಇಂದು ಬೆಳಿಗ್ಗೆ ಘಟನೆ ಬೆಳಕಿಗೆ ಬಂದಿದೆ. ಮೂಲ್ಕಿ ವಿಜಯಾ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ರಘುರಾಮ್ ರಾವ್ ಅವರ ಪಣಿಯೂರಿನ ಸ್ವಗೃಹ ಯಶ್ ಕಿರಣ್ ಇಲ್ಲಿ ಘಟನೆ ನಡೆದಿದೆ.ಶುಭಕಾರ್ಯ ಮತ್ತು ಧಾರ್ಮಿಕ ಕಾರ್ಯಕ್ರಮಗಳ ನಿಮಿತ್ತಅಮೇರಿಕಾ, ಬೆಂಗಳೂರು ಮತ್ತಿತರ ಕಡೆಗಳಿಂದ ಸಂಬಂಧಿಕರು ಆಗಮಿಸಿದ್ದ ಸಂದರ್ಭದಲ್ಲೇ ಈ ಕಳ್ಳತನ ಪ್ರಕರಣ ನಡೆದಿರುವುದು ಮನೆಯವರನ್ನು ಆತಂಕಗೊಳಗಾಗಿಸಿದೆ. ಕಾಪು ಪೊಲೀಸ್ ವೃತ್ತ ನಿರೀಕ್ಷಕ ಕೆ.ಸಿ. ಪೂವಯ್ಯ ಹಾಗೂ ಶಿರ್ವ ಪೊಲೀಸ್ ಠಾಣೆಯ ಎಸೈ ಮತ್ತು ಕ್ರೈಂ ಎಸೈ ಹಾಗೂ ಬೆರಳಚ್ಚು ತಜ್ಞರು, ಶ್ವಾನದಳ, ಪೋಲಿಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಾಗಿದೆ.

