
ಗೋವಾದಿಂದ ಪುತ್ತೂರಿಗೆ ಹೊರಡುವ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳಾ ಪ್ರಯಾಣಿಕರೊಬ್ಬರ ಬ್ಯಾಗ್ನಲ್ಲಿ ಇಟ್ಟಿದ್ದ ಸುಮಾರು 18 ರಿಂದ 20 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳು ಕಳವಾಗಿರುವ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಐರೋಡಿ ಗ್ರಾಮದ ಸಂಗೀತಾ ಭಟ್ ಅವರು ಗೋವಾದ ಪಣಜಿಯಿಂದ ಪುತ್ತೂರಿಗೆ ಹೊರಡುವ ಕೆ.ಎಸ್.ಆರ್.ಟಿ.ಸಿ ಬಸ್ನಲ್ಲಿ ಪ್ರಯಾಣಿಸುತ್ತಿದ್ದರು. ಅವರ ಹಿಂದಿನ ಸೀಟ್ ನಲ್ಲಿ ಹಿಂದಿ ಮಾತನಾಡುವ ವ್ಯಕ್ತಿಗಳು ಕುಳಿತುಕೊಂಡಿದ್ದರು. ಈ ವೇಳೆ ಟ್ರಾಲಿ ಬ್ಯಾಗಿನಲ್ಲಿ ಬಟ್ಟೆ ಬರೆ ಹಾಗೂ ಅದರ ಒಳಗಡೆ ಸಣ್ಣ ವಸ್ತ್ರದ ಚೀಲದಲ್ಲಿ ಚಿನ್ನಾಭರಣ ಇಟ್ಟು ಟ್ರಾಲಿ ಬ್ಯಾಗಿಗೆ ಬೀಗ ಹಾಕಿ ಅವರು ಕುಳಿತ ಸೀಟಿನ ಕೆಳಗಡೆ ಇಟ್ಟುಕೊಂಡಿದ್ದರು. ಬಳಿಕ ಅವರು ತಮ್ಮಪ್ರಯಾಣ ಮುಗಿಸಿ ಮಧ್ಯಾಹ್ನದ ವೇಳೆ ಮಾಬುಕಳದಲ್ಲಿ ಬಸ್ಸಿನಿಂದ ಇಳಿದಿದ್ದರು. ಆದರೆ ಮರುದಿನ ಬೆಳಿಗ್ಗೆ ಎದ್ದು ಟ್ರಾಲಿ ಬ್ಯಾಗನ್ನು ನೋಡಿದಾಗ ಅದರಲ್ಲಿದ್ದ18 ರಿಂದ 20 ಲಕ್ಷ ರೂ ಮೌಲ್ಯದ ಚಿನ್ನದ ಆಭರಣಗಳು ಕಳವಾಗಿರುವುದು ಕಂಡು ಬಂದಿದೆ. ಅವರ ಚಿನ್ನಾಭರಣ ಕಳವಿನ ಬಗ್ಗೆ ಬಸ್ ನಲ್ಲಿ ಅವರ ಹಿಂದೆ ಕುಳಿತಿದ್ದ ಹಿಂದಿ ಮಾತನಾಡುವ ಇಬ್ಬರು ವ್ಯಕ್ತಿಗಳ ಮೇಲೆ ಅನುಮಾನ ಇರುವುದಾಗಿ ಸಂಗೀತಾ ಭಟ್ ಅವರು ನೀಡಿದ ದೂರಿನಂತೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

