×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಭಾರತ್‌ ಜೋಡೋ ಸಮಾರೋಪ ಸಮಾರಂಭಕ್ಕೆ 21 ವಿರೋಧ ಪಕ್ಷಗಳಿಗೆ ಆಹ್ವಾನ ನೀಡಿದ ಕಾಂಗ್ರೆಸ್‌

ಜನವರಿ 30 ರಂದು ಜಮ್ಮು-ಕಾಶ್ಮೀರದ ಶ್ರೀನಗರದಲ್ಲಿ ನಡೆಯಲಿರುವ ಭಾರತ್ ಜೋಡೋ ಯಾತ್ರೆಯ ಸಮಾರೋಪ ಸಮಾರಂಭದಲ್ಲಿ ರಾಹುಲ್ ಗಾಂಧಿ ಅವರೊಂದಿಗೆ ಪಾಲ್ಗೊಳ್ಳುವಂತೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು 21 ವಿರೋಧ ಪಕ್ಷಗಳ ಅಧ್ಯಕ್ಷರಿಗೆ ಪತ್ರ ಬರೆದಿದ್ದಾರೆ. ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಕನ್ಯಾಕುಮಾರಿಯಿಂದ ಆರಂಭವಾದ ಭಾರತ್ ಜೋಡೋ ಯಾತ್ರೆ ಕಾಶ್ಮೀರದಲ್ಲಿ ಮುಕ್ತಾಯಗೊಳ್ಳಲಿದೆ. ಪ್ರಮುಖ ವಿರೋಧ ಪಕ್ಷಗಳಾದ ತೃಣಮೂಲ ಕಾಂಗ್ರೆಸ್, ಸಮಾಜವಾದಿ, ಡಿಎಂಕೆ, ಸಿಪಿಎಂ, ಸಿಪಿಐ, ಶಿವಸೇನಾ, ಆರ್‌ಜೆಡಿ, ನ್ಯಾಷನಲ್ ಕಾನ್ಫರೆನ್ಸ್‌‌, ಹಾಗೂ ಬಿಎಸ್‌ಪಿ ಸೇರಿದಂತೆ 21 ಸಮಾನ ಮನಸ್ಕ ಪಕ್ಷಗಳ ನಾಯಕರನ್ನು ಆಹ್ವಾನಿಸಿರುವ ಖರ್ಗೆ, ಎಎಪಿ, ಜೆಡಿಎಸ್, ಬಿಅರ್‌ಎಸ್, ಬಿಜೆಡಿ ಮತ್ತು ಅಕಾಲಿ ದಳ ಪಕ್ಷಗಳಿಗೆ ಆಹ್ವಾನ ನೀಡದೇ ಇರುವುದು ಆಶ್ಚರ್ಯ ಮೂಡಿಸಿದೆ. “ಯಾತ್ರೆಯ ಆರಂಭದಿಂದಲೂ, ಸಮಾನ ಮನಸ್ಸಿನ ಪ್ರತಿಯೊಬ್ಬ ಭಾರತೀಯನ ಭಾಗವಹಿಸುವಿಕೆಯನ್ನು ನಾವು ಆಹ್ವಾನಿಸಿದ್ದೇವೆ. ರಾಹುಲ್ ಗಾಂಧಿಯವರ ಆಹ್ವಾನದ ಮೇರೆಗೆ ಹಲವು ರಾಜಕೀಯ ಪಕ್ಷಗಳ ಸಂಸದರು ಕೂಡ ವಿವಿಧ ಹಂತಗಳಲ್ಲಿ ಯಾತ್ರೆಯಲ್ಲಿ ತೆರಳಿದ್ದಾರೆ. ಜನವರಿ 30 ರಂದು ಮಧ್ಯಾಹ್ನ ಶ್ರೀನಗರದಲ್ಲಿ ನಡೆಯಲಿರುವ ಭಾರತ್ ಜೋಡೋ ಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಖುದ್ದಾಗಿ ಪಾಲ್ಗೊಳ್ಳುವಂತೆ ನಾನು ಈಗ ನಿಮ್ಮನ್ನು ಆಹ್ವಾನಿಸುತ್ತೇನೆ” ಎಂದು ಮಲ್ಲಿಕಾರ್ಜುನ ಖರ್ಗೆ ಪತ್ರದಲ್ಲಿ ಹೇಳಿದ್ದಾರೆ. “ದ್ವೇಷ ಮತ್ತು ಹಿಂಸಾಚಾರದ ಸಿದ್ಧಾಂತದ ವಿರುದ್ಧದ ದಣಿವರಿಯದ ಹೋರಾಟದಲ್ಲಿ ಈ ದಿನ (ಜನವರಿ 30) ಪ್ರಾಣ ಕಳೆದುಕೊಂಡ ಮಹಾತ್ಮಾ ಗಾಂಧಿಯವರ ಸ್ಮರಣೆಗೆ ಈ ಕಾರ್ಯವನ್ನು ಸಮರ್ಪಿಸಲಾಗಿದೆ” ಎಂದು ಅವರು ಹೇಳಿದ್ದಾರೆ. ಈ ಯಾತ್ರೆಯು ಪ್ರತಿಪಕ್ಷಗಳ ಧ್ವನಿಯನ್ನು ಲಕ್ಷಾಂತರ ಜನರಿಗೆ ನೇರವಾಗಿ ಸಂಪರ್ಕಿಸಲು ಸಹಾಯ ಮಾಡಿದೆ ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *