
ಕಾಪು ವಿದ್ಯಾನಿಕೇತನ ಪಬ್ಲಿಕ್ ಸ್ಕೂಲ್ನಲ್ಲಿ ವಿದ್ಯಾರ್ಥಿಗಳ ಪ್ರಾಯೋಜಕತ್ವದಲ್ಲಿ ೩೦೦ಕ್ಕೂ ಅಽಕ ಗಿಡಗಳನ್ನು ನೆಡುವ ಮೂಲಕ ಮಕ್ಕಳ ದಿನಾಚರಣೆ ಕಾರ್ಯಕ್ರಮವನ್ನು ಆಯೋಜಿಸಲಾಯಿತು.
ವನಮಹೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ವಿದ್ಯಾನಿಕೇತನ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಕೆ. ಪಿ. ಆಚಾರ್ಯ ಮಾತನಾಡಿ, ಇದೊಂದು ಅಪರೂಪದ ಮಾದರಿ ಕಾರ್ಯಕ್ರಮವಾಗಿದ್ದು ವಿದ್ಯಾರ್ಥಿಗಳೇ ಸ್ವತಃ ಸಂಸ್ಥೆಯ ಆವರಣದಲ್ಲಿ ವನಮಹೋತ್ಸವ ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ. ಗಾಳಿ ಮತ್ತು ಹಸುರು ಪರಿಸರವನ್ನು ಬೆಳೆಸುವ ಶೈಕ್ಷಣಿಕ ಸಂಯೋಜನೆಯ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಮೂಲಕ ತಮ್ಮಲ್ಲಿ ತಾವು ಪರಿರದ ಬಗ್ಗೆ ಜಾಗೃತಿ ಹೆಚ್ಚಿಸಿಕೊಳ್ಳಲು ಈ ಕಾರ್ಯಕ್ರಮ ಪ್ರೇರಣೆಯಾಗಲಿದೆ ಎಂದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮೂಳೂರು ವೆಸ್ಟ್ ಕೋಸ್ಟ್ ನರ್ಸರಿಯ ಮಾಲಕ ಅನಿಲ್ ಸೋನ್ಸ್ ಮಾತನಾಡಿ, ನಮ್ಮ ಪರಿಸರ ಉತ್ತಮವಾಗಿದ್ದರೆ ಮಾತ್ರಾ ನಾವು ನೈಸರ್ಗಿಕ ಗಾಳಿಯನ್ನು ಸೇವಿಸಲು ಸಾಧ್ಯವಿದೆ. ನಾವು ಉತ್ತಮ ಗಾಳಿಯನ್ನು ಸೇವಿಸುವುದರ ಜೊತೆಗೆ ನಮ್ಮ ಪ್ರಕೃತಿಯನ್ನು ಉಳಿಸಲು ಗಿಡ ಮರಗಳ ಬೆಳೆಸುವಿಕೆ ಅತ್ಯಗತ್ಯವಾಗಿದೆ. ನಾವು ಬೆಳೆಸುವ ಗಿಡ ಮರಗಳು ನಮಗೆ ನೆರಳು, ಗಾಳಿ ನೀಡುವುದರೊಂದಿಗೆ ಪ್ರಾಣಿ – ಪಕ್ಷಿಗಳಿಗೆ ಆಹಾರ ಒದಗಿಸುವಲ್ಲಿಯೂ ಪೂರಕವಾಗಲಿದೆ ಎಂದರು. ಪತ್ರಕರ್ತ ರಾಕೇಶ್ ಕುಂಜೂರು ಮಾತನಾಡಿ, ಇಂದು ಎಲ್ಲೆಡೆ ಗಿಡ-ಮರಗಳನ್ನು ಬೆಳೆಸಲು ಉತ್ತೇಜನೆ ನೀಡಲಾಗುತ್ತಿದೆ. ಪ್ರತೀ ವಿದ್ಯಾರ್ಥಿಗಳಲ್ಲೂ ಸಸಿ ನೆಟ್ಟು ಅದನ್ನು ಬೆಳೆಸಿ, ಪೋಷಿಸುವ ಬಗ್ಗೆ ಜಾಗೃತಿ ಮೂಡಿಸುತ್ತಿರುವ ವಿದ್ಯಾನಿಕೇತನ ಶಿಕ್ಷಣ ಸಂಸ್ಥೆಯ ಕಾರ್ಯಕ್ರಮ ಶ್ಲಾಘನೀಯವಾಗಿದೆ. ಇಂತಹ ಕಾರ್ಯಕ್ರಮಗಳು ಪ್ರತೀ ಶಿಕ್ಷಣ ಸಂಸ್ಥೆಯ ಆವರಣದಲ್ಲೂ ನಡೆದಾಗ ಇದರಿಂದ ಮುಂದಿನ ಪೀಳಿಗೆಗೆ ಬಲು ಉಪಯುಕ್ತವಾಗಲಿದೆ ಎಂದರು. ಕಾಪು ಪುರಸಭೆ ಸದಸ್ಯೆ ಹರಿಣಾಕ್ಷಿ ದೇವಾಡಿಗ, ಕಾಪು ವಿದ್ಯಾನಿಕೇತನ ಪಬ್ಲಿಕ್ ಸ್ಕೂಲ್ನ ಸಹ ಉಪಾಧ್ಯಕ್ಷೆ ಶ್ವೇತಾ ಕಾಪು, ಉದ್ಯಮಿ ಸುಶೀಲ್ ಬೋಳಾರ್ ಶುಭಾಶಂಸನೆಗೈದರು. ಪ್ರಭಾರ ಪ್ರಾಂಶುಪಾಲೆ ರಂಜಿತಾ ಸ್ವಾಗತಿಸಿದರು. ಶಿಕ್ಷಣ ಸಂಯೋಜಕ ರಾಜೇಂದ್ರ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

