
ಕಳೆದ ಹಲವಾರು ವರ್ಷಗಳಿಂದ ಸುರತ್ಕಲ್ ನಲ್ಲಿ ಅಕ್ರಮ ಟೋಲ್ ಗೇಟ್ ನ ವಿರುದ್ಧ ಅದೆಷ್ಟೋ ಮನವಿ ಹೋರಾಟಗಳು ನಡೆದರೂ ಸರಕಾರ ಅಕ್ರಮ ಟೋಲ್ ಗೇಟ್ ಅನ್ನು ತೆರವುಗೊಳಿಸುವ ಬದಲಾಗಿ ಅದರ ಬೆಂಬಲಕ್ಕೆ ನಿಂತಿರುವುದು ವಿಪರ್ಯಾಸವೇ ಸರಿ. ಪ್ರತಿ ಸಲ ಹೋರಾಟಗಳು ನಡೆದಾಗ ಸರಕಾರ/ ಜನ ಪ್ರತಿನಿಧಿಗಳು ಅಕ್ರಮ ಟೋಲ್ ಗೇಟ್ ಅನ್ನು ತೆರವುಗೊಳಿಸುತ್ತೇವೆ ಅನ್ನುತ್ತಾರೆಯೇ ಹೊರತು ತೆರವುಗೊಳಿಸುವ ನಿಟ್ಟಿನಲ್ಲಿ ಯಾವುದೇ ಕ್ರಮ ಕೈಗೊಂಡಿರುವುದಿಲ್ಲ. ಇದೀಗ ಅಕ್ಟೋಬರ್ 18ರಂದು ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿಯು ಅಕ್ರಮ ಟೋಲ್ ಗೇಟ್ ಅನ್ನು ತೆರವುಗೊಳಿಸಿಯೇ ಸಿದ್ದ ಎಂಬ ಗಟ್ಟಿ ನಿರ್ಧಾರದೊಂದಿಗೆ ಹೋರಾಟ ವೊಂದನ್ನು ಕೈಗೆತ್ತಿಕೊಂಡಿರುತ್ತದೆ. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಪ್ರಜ್ಞಾವಂತ ನಾಗರಿಕರು ಹಾಗೂ ಸಂಘ ಸಂಸ್ಥೆಗಳು ಈ ಹೋರಾಟಕ್ಕೆ ಬೆಂಬಲ ಸೂಚಿಸಿರುತ್ತದೆ. ಸರಕಾರಕ್ಕೆ ಇದು ಬಿಸಿ ತುಪ್ಪವಾಗಿ ಪರಿಣಮಿಸಿದ್ದು ಇದೀಗ ಸರ್ಕಾರ ಹೋರಾಟಗಾರರನ್ನು ಹತ್ತಿಕ್ಕಲು ಶತಾಯಗತಾಯವಾಗಿ ಪ್ರಯತ್ನಿಸುತ್ತಿದೆ. ಇದು ಸರಕಾರದ ಹೇಡಿತನವನ್ನು ಎತ್ತಿ ತೋರಿಸುತ್ತದೆ.
ಸರ್ಕಾರದ ತಾಕತ್ತು ಅಕ್ರಮ ಟೋಲ್ ಗೇಟ್ ನ ವಿರುದ್ಧ ಸಾಬೀತಾಗಬೇಕೇ ಹೊರತು ಹೋರಾಟಗಾರರ ಮೇಲಲ್ಲ. ಸರಕಾರ ಇದೇ ರೀತಿ ಹೋರಾಟಗಾರರನ್ನು ಹತ್ತಿಕುವ ಕೆಲಸವನ್ನು ಮುಂದುವರಿಸಿದರೆ ಅದಕ್ಕೆ ತಕ್ಕ ಬೆಲೆ ತರ ಬೇಕಾಗಿತ್ತು ಎಂದು ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣದ ಉಡುಪಿ ಜಿಲ್ಲಾಧ್ಯಕ್ಷರಾದ ಅನ್ಸಾರ್ ಅಹಮದ್ ರವರು ಎಚ್ಚರಿಸಿರುತ್ತಾರೆ

