ದಿನಾಂಕ 07-09-2002 ಬೆಳಿಗ್ಗೆ 8:30 ಗಂಟೆಗೆ ಪಡುಬಿದ್ರಿ ಪೊಲೀಸ್ ಠಾಣಾ ವ್ಯಾಪ್ತಿಯ ಬಡಾ ಗ್ರಾಮದ ಮೂಳೂರು ಮಸೀದಿ ಹತ್ತಿರ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ MH12FA6993 ಮಿನಿ ಗೂಡ್ಸ್ ಲಾರಿಯನ್ನು ಅದರ ಚಾಲಕ ವಿಲಾಸ್ ಶಿಂಧೆ, ವಾಸ:ಬೋರ್, ಉತ್ರಳ್ಳಿ ತಾಲೂಕು, ಪುನಾ ಜಿಲ್ಲೆ, ಮಹಾರಾಷ್ಟ್ರ ರಾಜ್ಯ ಎಂಬಾತನು ಮಂಗಳೂರು ಕಡೆಯಿಂದ ಉಡುಪಿ ಕಡೆಗೆ ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿ ರಸ್ತೆಯ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಶಾಲಾ ಬಾಲಕನಿಗೆ ಡಿಕ್ಕಿ ಹೊಡೆದ ಪರಿಣಾಮ ಬಾಲಕನು ಮೃತಪಟ್ಟಿದ್ದು ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ಆರೋಪಿ ಚಾಲಕನ ವಿರುದ್ಧ ಮಾನ್ಯ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿಯನ್ನು ಸಲ್ಲಿಸಲಾಗಿದ್ದು, ಬಳಿಕ ಪ್ರಕರಣವು ನ್ಯಾಯಾಲಯದಲ್ಲಿ ವಿಚಾರಣೆಯಾಗಿ ಲಾರಿ ಚಾಲಕನ ಮೇಲಿನ ಆರೋಪ ಸಾಬೀತಾದ ಕಾರಣ ಚಾಲಕನಿಗೆ ಮಾನ್ಯ ನ್ಯಾಯಾಲಯ 3 ಮೂರು ತಿಂಗಳ ಜೈಲುವಾಸ ಮತ್ತು ರೂಪಾಯಿ ರೂ 1000/- ದಂಡವನ್ನು ವಿಧಿಸಿರುತ್ತದೆ. ನ್ಯಾಯಾಲಯದ ತೀರ್ಪಿನ ಬಳಿಕ ಅಪರಾಧಿ ಲಾರಿ ಚಾಲಕ 23 ವರ್ಷಗಳಿಂದ ತಲೆಮರೆಸಿಕೊಂಡಿದ್ದು ಮಾನ್ಯ ನ್ಯಾಯಾಲಯವು ಅಪರಾಧಿ ಲಾರಿ ಚಾಲಕನ ವಿರುದ್ಧ LPC ವಾರಂಟನ್ನು ಹೊರಡಿಸಿರುತ್ತದೆ.
ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀ ಹರಿರಾಮ್ ಶಂಕರ್ ಐಪಿಎಸ್ ರವರ ಆದೇಶದಂತೆ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶ್ರೀ ಸುಧಾಕರ ಎಸ್ ನಾಯಕ್, ಕಾರ್ಕಳ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಶ್ರೀ ಎಸ್ ವಿಜಯಪ್ರಸಾದ್, ಕಾಪು ವೃತ್ತ ನಿರೀಕ್ಷಕ ಅಜ್ಮತ್ ಆಲಿ ರವರ ಮಾರ್ಗದರ್ಶನದಂತೆ ಪಡುಬಿದ್ರಿ ಪೊಲೀಸ್ ಠಾಣಾ ಪಿಎಸ್ಐ ಸಕ್ತಿವೇಲು ಈ ಮತ್ತು ಅನಿಲ್ ಕುಮಾರ್ ಟಿ ನಾಯಕ್ ರವರ ಸೂಚನೆಯಂತೆ ಸಿಬ್ಬಂದಿಗಳಾದ ಎ ಎಸ್ ಐ ರಾಜೇಶ್ ಪಿ, ಹೆಚ್ ಸಿ ಕೃಷ್ಣಪ್ರಸಾದ್, ಪಿಸಿ ಸಂದೇಶ್ ಭಂಡಾರಿ ಅಪರಾಧಿ ವಿಲಾಸ್ ಶಿಂಧೆ ಮಹಾರಾಷ್ಟ್ರ ರಾಜ್ಯದ ಪೂನ ಎಂಬಲ್ಲಿ ಲಾರಿಯಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿರುವ ಬಗ್ಗೆ ಮಾಹಿತಿ ಸಂಗ್ರಹಿಸಿ ಅಲ್ಲಿಗೆ ತೆರಳಿ ದಸ್ತಗಿರಿ ಮಾಡಿ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

