ಸಹಕಾರಿ ಕ್ಷೇತ್ರವು ಕೇವಲ ಆರ್ಥಿಕ ವಹಿವಾಟಿನ ಕೇಂದ್ರವಲ್ಲ, ಬದಲಾಗಿ ಅದು ಸಮಾಜದ ಸಾಮಾನ್ಯ ಜನರ ಬದುಕಿನ ಅವಿಭಾಜ್ಯ ಅಂಗ ಮತ್ತು ಏಳಿಗೆಯ ಮೂಲ ಎಂಬುದನ್ನು ಎತ್ತಿ ತೋರಿಸುತ್ತದೆ.ಕೇವಲ ಆರ್ಥಿಕ ವಹಿವಾಟಿನ ವೇದಿಕೆಯಲ್ಲ, ಅದು ಜನರ ಸರ್ವತೋಮುಖ ಬೆಳವಣಿಗೆಯ ಪ್ರಮುಖ ಪಾತ್ರ ವಹಿಸಿದೆ
ಎಂದು ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ| ಎಂ.ಎನ್. ರಾಜೇಂದ್ರ ಕುಮಾರ್ ಹೇಳಿದರು.ಶುಕ್ರವಾರ ಕುಂದಾಪುರದಲ್ಲಿ ಬಡಗಬೆಟ್ಟು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಉಡುಪಿ ಇದರ 12ನೇ ಶಾಖೆಯನ್ನು ಪಾರಿಜಾತ ಹೋಟೆಲ್ ಬಳಿಯ ಶ್ರೀ ನಂದಿಕೇಶ್ವರ ಟವರ್ಸ್ ನಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.
ನೂರು ವರ್ಷಗಳ ಇತಿಹಾಸವಿರುವ ಈ ಸೊಸೈಟಿಯ ಬೆಳವಣಿಗೆಯಲ್ಲಿ ಅದರ ಪ್ರಸಕ್ತ ಅಧ್ಯಕ್ಷ ಇಂದ್ರಾಳಿ ಜಯಕರ ಶೆಟ್ಟಿ ಅವರ ತಂಡದ ಪರಿಶ್ರಮವಿದೆ. ಸಂಘದ ಸದಸ್ಯರು, ಸಿಬಂದಿ, ಗ್ರಾಹಕರೆಲ್ಲರ ಸಹಕಾರವಿದ್ದರೆ ಮಾತ್ರ ಸಂಸ್ಥೆಯು ಲಾಭದಾಯಕವಾಗಿ ಬೆಳೆಯಲು ಸಾಧ್ಯ. ಸಹಕಾರಿ ಸಂಘಗಳು ಗಳಿಸಿದ ಲಾಭವನ್ನು ಸಮಾಜದ ಏಳಿಗೆಗೆ ವಿನಿಯೋಗಿಸುತ್ತಿರುವುದು ಶ್ಲಾಘನೀಯ ಎಂದರು.

ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಸಹಕಾರಿ ಸಂಘಗಳನ್ನು ಯಾವ ರೀತಿ ಬೆಳೆಸಬಹುದು ಅನ್ನುವುದಕ್ಕೆ ಜಯಕರ ಶೆಟ್ಟಿ ಅವರ ನೇತೃತ್ವದಲ್ಲಿ ನಡೆದ ಬಡಗುಬೆಟ್ಟು ಸೊಸೈಟಿಯ ಸಾಧನೆಯೇ ಸಾಕ್ಷಿ ಎಂದರು.

ತ್ವರಿತ ಸಾಲ ಸೌಲಭ್ಯ, ಉತ್ತಮ ಸೇವೆಯೊಂದಿಗೆ ಜನರ ವಿಶ್ವಾಸಕ್ಕೆ ಪಾತ್ರವಾದ ಬಡಗುಬೆಟ್ಟು ಸೊಸೈಟಿಯ ಪ್ರಯೋಜನವನ್ನು ಈ ಭಾಗದ ಜನರು ಪಡೆಯುವಂತಾಗಲಿ ಎಂದು ಶಾಸಕ ಕಿರಣ್ ಕುಮಾರ್ ಕೊಡ್ಲಿ ಶುಭ ಹಾರೈಸಿದರು.
ಮಾಜಿ ಸಂಸದ ಕೆ. ಜಯಪ್ರಕಾಶ್ ಹೆಗ್ಡೆ ಮಾತನಾಡಿ, ಶಿಕ್ಷಣಕ್ಕೆ ಭದ್ರತೆ ರಹಿತ ಸಾಲ ನೀಡುವ ಸೌಲಭ್ಯವನ್ನು ಸಹಕಾರಿ ಸಂಘಗಳು ಕೂಡ ಆರಂಭಿಸಬೇಕು ಎಂದರು.ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಶುಭ ಹಾರೈಸಿದರು.

ಅಧ್ಯಕ್ಷತೆ ವಹಿಸಿದ್ದ ಬಡಗಬೆಟ್ಟು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಪ್ರಾಸ್ತಾವಿಕವಾಗಿ ಮಾತನಾಡಿ ಸೊಸೈಟಿಯು ವಾರ್ಷಿಕ 18 ಕೋ.ರೂ.ಗೂ ಮಿಕ್ಕಿ ಲಾಭ ಗಳಿಸಿದೆ. ಆಡಳಿತ ಮಂಡಳಿಯ ಮಾರ್ಗದರ್ಶನ, ಸಿಬಂದಿಗಳ ಸೇವೆಯ ಕೀರಣ ಸೊಸೈಟಿಯು ಗ್ರಾಹಕರ ವಿಶ್ವಸಾರ್ಹತೆ ಗಳಿಸಲು ಸಾಧ್ಯವಾಗಿದೆ ಎಂದರು.

ಎಸ್ ಸಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಮಹೇಶ ಹೆಗ್ಡೆ ಮೊಳಹಳ್ಳಿ, ಸಹಕಾರಿ ಸಂಘಗಳ ಉಪನಿಬಂಧಕಿ ಲಾವಣ್ಯ ಕೆ.ಆರ್., ಕುಂದಾಪುರ ಉಪವಿಭಾಗದ ಸಹಾಯಕ ನಿಬಂಧಕ ಸುಧೀರ್ ಕುಮಾರ್ ಜೆ., ಸಂಘದ ಉಪಾಧ್ಯಕ್ಷ ಜಾರ್ಜ್ ಸಾಮ್ಯುವೆಲ್, ಪ್ರಧಾನ ವ್ಯವಸ್ಥಾಪಕ ರಾಜೇಶ್ ವಿ. ಶೇರಿಗಾರ್, ನಿರ್ದೇಶಕರು, ಉಪಸ್ಥಿತರಿದ್ದರು.ಈ ಸಂದರ್ಭದಲ್ಲಿ ಡಾ.ಎಂ.ಎನ್. ರಾಜೇಂದ್ರ ಕುಮಾರ್ ಅವರನ್ನು ಅಭಿನಂದಿಸಿ ಗೌರವಿಸಲಾಯಿತು

ಜಿಲ್ಲಾ ಸಹಕಾರಿ ಯೂನಿಯನ್ ನಿರ್ದೇಶಕ ಶ್ರೀಧರ್ ಪಿ.ಎಸ್. ಹಾಗೂ ನವೀನ್ ಕೆ. ಕಾರ್ಯಕ್ರಮ ನಿರೂಪಿಸಿದರು. ನೂತನ ಶಾಖಾ ವ್ಯವಸ್ಥಾಪಕ ಸಮರ್ಥ್ ಶೆಟ್ಟಿ ವಂದಿಸಿದರು

