×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಉಡುಪಿ ಅಗ್ನಿ ದುರಂತ: ತಡವಾದ ಅಗ್ನಿಶಾಮಕ ಪ್ರತಿಕ್ರಿಯೆಗೆ ತನಿಖೆ ಮತ್ತು ಪೀಡಿತರಿಗೆ ತಕ್ಷಣ ಪರಿಹಾರಕ್ಕೆ ಎಸ್ ಡಿ ಪಿ ಐ ಆಗ್ರಹ

ಉಡುಪಿ: ಉಡುಪಿ ನಗರದ ಸಿಟಿ ಬಸ್ ನಿಲ್ದಾಣದ ಸಮೀಪ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ ಹಲವು ಅಂಗಡಿಗಳು ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದ್ದು, ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿ ನಷ್ಟವಾಗಿರುವುದು ಅತ್ಯಂತ ಆಘಾತಕಾರಿ ಘಟನೆಯಾಗಿದೆ. ಈ ದುರಂತಕ್ಕೆ ಎಸ್‌ಡಿಪಿಐ ಉಡುಪಿ ವಿಧಾನಸಭಾ ಕ್ಷೇತ್ರ ಸಮಿತಿ ತೀವ್ರ ವಿಷಾದವನ್ನು ವ್ಯಕ್ತಪಡಿಸುತ್ತದೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಸಮಿತಿಯ ಅಧ್ಯಕ್ಷರಾದ ಅಶ್ರಫ್ ಭಾವ ಅವರು, “ಘಟನೆ ನಡೆದ ಸ್ಥಳದಿಂದ ಅಗ್ನಿಶಾಮಕ ದಳದ ಕಚೇರಿ ಕೇವಲ 2 ಕಿಮೀ ದೂರದಲ್ಲಿದ್ದರೂ, ಅವಘಡ ಸಂಭವಿಸಿದ ಸುಮಾರು 45 ನಿಮಿಷಗಳ ನಂತರ ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಆಗಮಿಸಿರುವುದು ಬೆಂಕಿ ವ್ಯಾಪಕವಾಗಿ ಹರಡಲು ಕಾರಣವಾಗಿದೆ. ಅಗ್ನಿಶಾಮಕ ದಳದ ತಡವಾದ ಪ್ರತಿಕ್ರಿಯೆ ಕುರಿತು ತಕ್ಷಣವೇ ಉನ್ನತ ಮಟ್ಟದ ಹಾಗೂ ಪಾರದರ್ಶಕ ತನಿಖೆ ನಡೆಸಬೇಕು. ಯಾವುದೇ ರೀತಿಯ ನಿರ್ಲಕ್ಷ್ಯ ಅಥವಾ ಆಡಳಿತ ವೈಫಲ್ಯ ಕಂಡುಬಂದಲ್ಲಿ, ಹೊಣೆಗಾರರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು” ಎಂದು ತೀವ್ರವಾಗಿ ಆಗ್ರಹಿಸಿದ್ದಾರೆ.

ಅಲ್ಲದೆ, ಈ ದುರಂತದಲ್ಲಿ ಎಲ್ಲವನ್ನೂ ಕಳೆದುಕೊಂಡ ವ್ಯಾಪಾರಿಗಳಿಗೆ ಸರ್ಕಾರವು ತಕ್ಷಣ ಮಧ್ಯಂತರ ಪರಿಹಾರ ಘೋಷಿಸಿ, ಸಂಪೂರ್ಣ ನಷ್ಟದ ಸಮೀಕ್ಷೆ ನಡೆಸಿ ಸಮರ್ಪಕ ಪರಿಹಾರಧನವನ್ನು ಬಿಡುಗಡೆ ಮಾಡಬೇಕು. ಕೇವಲ ಆರ್ಥಿಕ ಪರಿಹಾರವಷ್ಟೇ ಅಲ್ಲದೆ, ವ್ಯಾಪಾರ ಪುನರ್ ಸ್ಥಾಪನೆಗಾಗಿ ವಿಶೇಷ ಪ್ಯಾಕೇಜ್ ಹಾಗೂ ಅಗತ್ಯ ಸೌಲಭ್ಯಗಳನ್ನು ಒದಗಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ನಗರದ ವಾಣಿಜ್ಯ ಪ್ರದೇಶಗಳಲ್ಲಿ ಅಗ್ನಿ ಸುರಕ್ಷತಾ ನಿಯಮಗಳು ಸರಿಯಾಗಿ ಜಾರಿಯಲ್ಲಿದೆಯೇ ಎಂಬುದರ ಕುರಿತು ಸಮಗ್ರ ಪರಿಶೀಲನೆ ನಡೆಸಿ, ಅಗತ್ಯ ಮೂಲಸೌಕರ್ಯಗಳ ಕೊರತೆಗಳನ್ನು ತಕ್ಷಣ ಸರಿಪಡಿಸಬೇಕು. ಇಂತಹ ದುರಂತಗಳು ಮರುಕಳಿಸದಂತೆ ಶಾಶ್ವತ ಕ್ರಮಗಳನ್ನು ಕೈಗೊಳ್ಳುವುದು ಅತ್ಯವಶ್ಯಕವಾಗಿದೆ ಎಂದು ಅವರು ತಿಳಿಸಿದ್ದಾರೆ.

ಈ ಸಂಕಷ್ಟದ ಸಂದರ್ಭದಲ್ಲಿ ಹಾನಿಗೊಳಗಾದ ವ್ಯಾಪಾರಿಗಳಿಗೆ ಧೈರ್ಯ ತುಂಬುತ್ತಾ, ಅವರ ಜೊತೆ ಸದಾ ನಿಲ್ಲುವ ಭರವಸೆಯನ್ನು ಎಸ್‌ಡಿಪಿಐ ವ್ಯಕ್ತಪಡಿಸುತ್ತದೆ. ಸರ್ಕಾರ ತಕ್ಷಣ ಸ್ಪಂದಿಸಿ ನ್ಯಾಯ ಒದಗಿಸಬೇಕು ಎಂಬುದು ನಮ್ಮ ಸ್ಪಷ್ಟ ಆಗ್ರಹವಾಗಿದೆ ಎಂದು ಅವರ ಪತ್ರಿಕೆಯ ಪ್ರಕರಣ ಮೂಲಕ ತಿಳಿಸಿದ್ದಾರೆ.

Leave a Reply

Your email address will not be published. Required fields are marked *