ಕಾಪು ದಂಡತೀರ್ಥ ವಿದ್ಯಾಸಂಸ್ಥೆಯಲ್ಲಿ ಕಾಪು ಜೇಸಿಐ ನ ಸಹಯೋಗದಲ್ಲಿ ವನಮಹೋತ್ಸವ ಆಚರಿಸಲಾಯಿತು. ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ಆಡಳಿತಾಧಿಕಾರಿ ಆಲ್ಬನ್ ರೊಡ್ರಿಗಸ್ ರವರು ವೈಜ್ಞಾನಿಕ ಯುಗದಲ್ಲಿಯೂ ಪ್ರಕೃತಿಯ ಮಹತ್ವವನ್ನು ವಿದ್ಯಾರ್ಥಿಗಳು ಅಗತ್ಯವಾಗಿ ತಿಳಿಯಬೇಕು, ಮನುಷ್ಯನ ಶಾರೀರಿಕ ಮತ್ತು ಮಾನಸಿಕ ಬೆಳವಣಿಗೆಗೆ ಪ್ರಕೃತಿ ಹೇಗೆ ಸಹಕಾರಿಯಾಗಿದೆ, ಹಾಗೂ ವಿದ್ಯಾರ್ಥಿಗಳು ಮನೆ ಹಾಗೂ ಶಾಲೆಗಳಲ್ಲಿ ಪ್ರಕೃತಿಯ ಸಂರಕ್ಷಣೆಯನ್ನು ಹೇಗೆ ಮಾಡಬಹುದು ಎಂಬುದರ ಕುರಿತು ತಿಳಿಹೇಳಿದರು. ಮುಖ್ಯ ಅತಿಥಿಯಾಗಿ ಆಗಮಿಸಿದ ಕಾಪು ಜೇಸಿಸ್ ನ ಅಧ್ಯಕ್ಷೆ ಅನಿತಾ ಹೆಗ್ಡೆಯವರು ವಿದ್ಯಾರ್ಥಿಗಳಿಗೆ ಸಸಿ ವಿತರಿಸಿ, ಪ್ರಕೃತಿಯನ್ನು ನಾವು ರಕ್ಷಿಸಿದರೆ, ಪ್ರಕೃತಿ ನಮ್ಮನ್ನು ರಕ್ಷಿಸುತ್ತದೆ, ನಮ್ಮ ಆರೋಗ್ಯವನ್ನು ಕಾಪಾಡಲು ಈ ಪ್ರಕೃತಿಯ ಆರಾಧನೆಯನ್ನು ವನಮಹೋತ್ಸವದ ರೂಪದಲ್ಲಿ ನಾವು ಆಚರಿಸಬೇಕು ಎಂಬ ಸಂದೇಶವನ್ನು ನೀಡಿದರು. ಸಮಾರಂಭದಲ್ಲಿ ಜೇಸಿಸ್ ನಿಕಟಪೂರ್ವಾಧ್ಯಕ್ಷೆ ಸುಖಾಲಾಕ್ಷಿ ಬಂಗೇರ, ಪ್ರಾಂಶುಪಾಲ ನೀಲಾನಂದ್ ನಾಯ್ಕ್, ಪ್ರಾಥಮಿಕ ವಿಭಾಗದ ಮುಖ್ಯೋಪಾಧ್ಯಾಯ ಗೇಬ್ರಿಯಲ್ ಮಸ್ಕರೇನ್ಹಸ್, ಶಿಕ್ಷಕಿ ಶೋಭಾ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಆತ್ಮಿಕಾ ಎ. ಶೆಟ್ಟಿ ಕಾರ್ಯಕ್ರಮದ ಮಹತ್ವದ ಕುರಿತು ಮಾತನಾಡಿದರು. ಸುರಯ್ಯಾ ಅಝ್ವ ಸ್ವಾಗತಿಸಿದರು, ಪ್ರಗ್ಯಾ ಶೆಟ್ಟಿ ವಂದಿಸಿದ ಈ ಕಾರ್ಯಕ್ರಮವನ್ನು ಶಮಿಕಾ ರವೀಂದ್ರ ಕುಂದರ್ ನಿರೂಪಿಸಿದರು.

