ಬಂಟಕಲ್ : ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾ ವಿದ್ಯಾಲಯದ ರಾಷ್ಟ್ರೀ ಸೇವಾ ಯೋಜನೆಯು ವಿಶ್ವ ರೆಡ್ಕ್ರಾಸ್ ದಿನದ ಅಂಗವಾಗಿ “ಹೃದಯ ಮತ್ತು ಶ್ವಾಸಕೋಶದ ಪುನರುಜ್ಜೀವ” ಎಂಬ ವಿಷಯದ ಕುರಿತು ಪ್ರಾತ್ಯಕ್ಷಿಕೆಯನ್ನು ಆಯೋಜಿಸಿತ್ತು. ಈ ಕಾರ್ಯಕ್ರಮದ ಮುಖ್ಯ ಉದ್ದೇಶ ಯಾವುದೇ ವ್ಯಕ್ತಿಯ ಅನಾರೋಗ್ಯ ಸಂದರ್ಭದಲ್ಲಿ ತುರ್ತು ಪ್ರಥಮ ಚಿಕಿತ್ಸೆ ನೀಡಿ ಜೀವ ಉಳಿಸುವುದಾಗಿದೆ. ಹೃದಯ ಮತ್ತು ಶ್ವಾಸಕೋಶದ ಪುನರುಜ್ಜೀವ ತಂತ್ರಗಳ ನೇರ ಪ್ರದರ್ಶನವನ್ನು ಇಂಜಿನಿಯರಿಂಗ್ ವಿಭಾಗ, ಎಂಬಿಎ ವಿಭಾಗ ಮತ್ತು ನಿರಾಮಯ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳು ನಡೆಸಿಕೊಟ್ಟರು. ಸಂಸ್ಥೆಯ ಪ್ರಾಂಶುಪಾಲರಾದ ಡಾ. ತಿರುಮಲೇಶ್ವರ ಭಟ್ ಇಂತಹ ಕಾರ್ಯಕ್ರಮವನ್ನು ಆಯೋಜಿಸಿದ್ದಕ್ಕಾಗಿ ರಾಷ್ಟ್ರೀಯ ಸೇವಾ ಯೋಜನೆಯ ಸಂಯೋಜಕರನ್ನು ಅಭಿನಂದಿಸಿದರು. ಶ್ರೀ ಸೋದೆ ವಾದಿರಾಜ ಮಠ ಶಿಕ್ಷಣ ಸಂಸ್ಥೆಗಳ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಡಾ. ರಾಧಾಕೃಷ್ಣ ಎಸ್ ಐತಾಳ್, ವಿವಿಧ ವಿಭಾಗದ ಮುಖ್ಯಸ್ಥರು, ಪ್ರಾಧ್ಯಾಪಕರು ಮತ್ತು ರಾಷ್ಟ್ರೀಯ ಸೇವಾ ಯೋಜನೆಯ ಸಂಯೋಜಕ ಸಚಿನ್ ಪ್ರಭು ಉಪಸ್ಥಿತರಿದ್ದರು.


