×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಕೇಂದ್ರ-ರಾಜ್ಯ ಸರ್ಕಾರಗಳ ಬೆಲೆ ಏರಿಕೆ ವಿರುದ್ಧ ಪ್ರತಿಭಟನಾ ಅಭಿಯಾನ:ವಿಮೆನ್ ಇಂಡಿಯಾ ಮೂವ್ಮೆಂಟ್

ಉಡುಪಿ- ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರಾಜ್ಯದ ಜನತೆಯ ಮೇಲೆ ಮಿತಿಮೀರಿದ ಆರ್ಥಿಕ ಹೊರೆಯನ್ನು ಹೇರುತ್ತಿರುವುದರ ವಿರುದ್ಧ ವಿಮೆನ್ ಇಂಡಿಯಾ ಮೂವ್ಮೆಂಟ್ ಉಡುಪಿ ಜಿಲ್ಲಾ ಸಮಿತಿಯು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತದೆ. ಈಗಾಗಲೇ ದಿನ ಬಳಕೆ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿ ಹೋಗಿರುವ ಜನತೆಗೆ ಅತ್ತ ಕೇಂದ್ರ ಬಿಜೆಪಿ ಸರ್ಕಾರ ಅಡುಗೆ ಅನಿಲ ದರವನ್ನು ಹೆಚ್ಚಿಸಿದರೆ, ಇತ್ತ ರಾಜ್ಯ ಕಾಂಗ್ರೆಸ್ ಸರ್ಕಾರ ವಿದ್ಯುತ್, ಹಾಲು, ನೀರು, ಬಸ್ ದರಗಳನ್ನು ಏರಿಸಿದ್ದು ಇದು ಗಾಯದ ಮೇಲೆ ಬರೆ ಎಳೆದಂತಾಗಿದೆ. ಅದರ ಜೊತೆಗೆ ಜನಸ್ನೇಹಿಯಾಗಿದ್ದ ನಮ್ಮ ಮೆಟ್ರೋ ರೈಲಿನ ದರ ಏರಿಕೆಯಿಂದ ಜನಸಾಮಾನ್ಯರು ಮತ್ತೆ ತಮ್ಮ ಖಾಸಗಿ ವಾಹನಗಳ ಕಡೆ ಮುಖ ಮಾಡುವಂತಾಗಿದೆ. ಜಾಗತಿಕವಾಗಿ ತೈಲ ಬೆಲೆಗಳು ಇಳಿಯುತ್ತಿದ್ದರೂ ಸಹ ತೈಲಗಳ ಮೇಲೆ ಅಬಕಾರಿ ಸುಂಕ ಹೆಚ್ಚಳ ಮಾಡುವ ಮೂಲಕ ಸರ್ಕಾರ ಹಗಲು ದರೋಡೆಗೆ ಇಳಿದಿರುವುದು ಸ್ಪಷ್ಟವಾಗಿ ಕಾಣುತ್ತಿದೆ. ಕಚ್ಚಾತೈಲಗಳ ಬೆಲೆ ಕುಸಿತದ ಲಾಭ ಜನ ಸಾಮಾನ್ಯರಿಗೆ ದೊರಕದಂತೆ ಮಾಡಲಾಗಿದೆ. ಬಡ, ಮಧ್ಯಮ ವರ್ಗಗಳಿಗೆ ಅಭಿವೃದ್ಧಿಯ ಭರವಸೆ ನೀಡಿ ಅಧಿಕಾರಕ್ಕೆ ಏರಿರುವ ಸರ್ಕಾರಗಳು ಇದೀಗ ಜನತೆಯ ದೈನಂದಿನ ಜೀವನವನ್ನೇ ತ್ರಾಸದಾಯಕವನ್ನಾಗಿಸಿವೆ. ಒಂದು ಕಡೆ ಅಚ್ಛೇದಿನ್ ಹೆಸರಲ್ಲಿ ಕೇಂದ್ರ ಸರ್ಕಾರ, ಗ್ಯಾರಂಟಿ ಯೋಜನೆಗಳ ಮೂಲಕ ತಮ್ಮದು ಜನಪರ ಸರ್ಕಾರ ಎನ್ನುವ ರಾಜ್ಯ ಸರ್ಕಾರ ಎರಡೂ ಸೇರಿಕೊಂಡು ಬೆಲೆ ಏರಿಕೆಯಿಂದ ಜನರನ್ನೇ ಲೂಟಿ ಮಾಡುತ್ತಿವೆ. ಇದು ಸಾಲದೆಂಬಂತೆ ಪರಸ್ಪರ ಕೆಸೆರೆರಚಾಟದಲ್ಲಿ ತೊಡಗಿ ಜನರ ಗಮನ ಅತ್ತಕಡೆ ಸೆಳೆದು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿರುವ ಕೇಂದ್ರ ಬಿಜೆಪಿ ಹಾಗೂ ರಾಜ್ಯ ಕಾಂಗ್ರೆಸ್ ಸರ್ಕಾರಗಳು ನಿರಂತರವಾಗಿ ಜನರ ಕಣ್ಣಿಗೆ ಮಣ್ಣೆರಚುವ ಪ್ರಯತ್ನ ಮಾಡುತ್ತಿವೆ‌. ವಸಾಹತುಶಾಹಿ ಬ್ರಿಟಿಷರ ಜನವಿರೋಧಿ ನೀತಿಗಳಂತೆ ಇಂದು ಕೂಡ ಅಗತ್ಯ ಸೇವಾ ಕ್ಷೇತ್ರಗಳನ್ನು ಖಾಸಗೀಕರಣಗೊಳಿಸಿ ದೇಶದ ಜನತೆಯನ್ನು ಆರ್ಥಿಕ ಸಂಕಷ್ಟಕ್ಕೆ ಈಡುಮಾಡಲಾಗುತ್ತಿದೆ. ಅತ್ಯವಶ್ಯಕ ವಸ್ತುಗಳ ಖರೀದಿಗೂ ಭಾರಿ ತೆರಿಗೆ ಪಾವತಿಸಬೇಕಾದಂತ ದುಸ್ಥಿತಿ ಉಂಟಾಗಿದೆ. ಜನರ ಹಿತಾಸಕ್ತಿ ಕಾಪಾಡುವಲ್ಲಿ ಸಂಪೂರ್ಣ ಎಡುವಿರುವ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಜನ ವಿರೋಧಿ ನೀತಿಗಳ ವಿರುದ್ಧ ಏಪ್ರಿಲ್‍ 18 ರಿಂದ 28 ರ ವರೆಗೆ ರಾಜ್ಯದಾದ್ಯಂತ ಪ್ರತಿಭಟನಾ ಅಭಿಯಾನ ಹಮ್ಮಿಕೊಳ್ಳಲು ವಿಮೆನ್ ಇಂಡಿಯಾ ಮೂವ್ಮೆಂಟ್ ತೀರ್ಮಾನಿಸಿದ್ದು ಇದರ ಅಂಗವಾಗಿ ದಿನಾಂಕ 26-04-2025 ರಂದು ಕಾಪುವಿನಲ್ಲಿ ಹಾಗೂ 28-04-2025 ರಂದು ಉಡುಪಿ DC ಕಛೇರಿ ಮುಂಭಾಗದಲ್ಲಿ ಪ್ರತಿಭಟನೆಯನ್ನು ನಡೆಸಲು ತೀರ್ಮಾನಿಸಿದ್ದೇವೆ ಎಂದು ವಿಮೆನ್ ಇಂಡಿಯಾ ಮೂವ್ಮೆಂಟ್ ಉಡುಪಿ ಜಿಲ್ಲಾಧ್ಯಕ್ಷೆಯಾಗಿರುವ ನಾಝಿಯ ನಸ್ರುಲ್ಲ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ಉಪಸ್ಥಿತಿ: 1) ನಾಝಿಯಾ ನಸ್ರುಲ್ಲ, ಜಿಲ್ಲಾಧ್ಯಕ್ಷರು ವಿಮೆನ್ ಇಂಡಿಯಾ ಮೂವ್ಮೆಂಟ್-ಉಡುಪಿ ಜಿಲ್ಲೆ. 2) ನಸೀಮಾ, ಉಪಾಧ್ಯಕ್ಷರು ವಿಮೆನ್ ಇಂಡಿಯಾ ಮೂವ್ಮೆಂಟ್- ಉಡುಪಿ ಜಿಲ್ಲೆ. 3)ನಸೀಮ್ ಫಾತಿಮಾ, ಜಿಲ್ಲಾ ಸಮಿತಿ ಸದಸ್ಯೆ 4)ಜೋಹಾರ, ಜಿಲ್ಲಾ ಸಮಿತಿ ಸದಸ್ಯೆ. 5)ರಹಮತುನ್ನಿಸಾ ಜಿಲ್ಲಾ ಸಮಿತಿ ಸದಸ್ಯೆ.

Leave a Reply

Your email address will not be published. Required fields are marked *