ಕಾಪು: ಯುವ ಜನರನ್ನು ಪರಿಸರ ಜಾಗೃತಿಯತ್ತ ಸೆಳೆಯಲು ಕಟಪಾಡಿಯಲ್ಲಿ ಮಿಯಾವಾಕಿ ವನ ಎಂಬ ವಿಶೇಷ ಕಾರ್ಯಕ್ರಮವನ್ನು
ಆಯೋಜಿಸಿಕೊಂಡಿದ್ದು ಅದರ ಸಲುವಾಗಿ ಇಂದು ಕಾಪು ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಸುದ್ದಿ ಗೋಷ್ಠಿ ನಡೆಯಿತು.
ಸುದ್ದಿ ಗೋಷ್ಠಿಯಲ್ಲಿ ವ್ಯಕ್ತಿತ್ವ ವಿಕಸನ ತರಬೇತುದಾರರಾದ ಶ್ರೀ ಕೆ ಮಹೇಶ ಶೆಣೈ ಮಾತನಾಡಿ ಈ ವರ್ಷ ಅಂದರೆ 2026 ನೇ ಕ್ರಿಕೆಟ್ ವಿಶ್ವಕಪ್ ಗೆದ್ದ ಸಂದರ್ಭದಲ್ಲಿ, ಯುವಜನರು ಇಷ್ಟಪಡುವ ಕ್ರಿಕೆಟ್ ಬ್ಯಾಟ್ ನ ಮಾದರಿಯಲ್ಲಿ 30 ಸೇಂಟ್ ಜಾಗದಲ್ಲಿ ಒಂದು ಮಿಯಾವಾಕಿ ವನವನ್ನು ನಿರ್ಮಿಸಲಾಗುವುದು ಮತ್ತು ಇದನ್ನು ಕ್ರಿಕೆಟ್ ಜಗತ್ತಿನ ದೇವರು ಎಂದು ಕರೆಸಿಕೊಳ್ಳುವ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿಯೇ ಸಚಿನ್ ತೆಂಡೂಲ್ಕರ್ ಮಿಯಾವಾಕಿ ವನ ಎಂದು ಹೆಸರಿಸಲಾಗುವುದು. ಇದರ ಮೊದಲ ಹಂತವಾದ ಮಣ್ಣಿನ ಪದರವನ್ನು ನಿರ್ಮಿಸುವ ಕೆಲಸಕ್ಕೆ ಏಪ್ರಿಲ್ 3 ರ ಬೆಳಿಗ್ಗೆ 9:00 ಗಂಟೆಗೆ ರೈಸಿಂಗ್ ರೂಸ್ ಕ್ರಿಕೆಟ್ ಅಕಾಡೆಮಿ ಅಸ್ಟ್ರೇಲಿಯದ ಅಧ್ಯಕ್ಷರಾದ ಸುಧೀರ್ ನಾಯಕ್ ಅವರು ಚಾಲನೆ ನೀಡಲಿದ್ದಾರೆ.
ಆಸ್ಟ್ರೇಲಿಯಾದ ಖ್ಯಾತ ಕ್ರಿಕೆಟ್ ಕೋಚ್ ಗಳಾದ ರಿಚರ್ಡ್ ಕ್ಲಿಪ್ಟನ್, ಜೆಸನ್ ಕಾಕಸ್, ಮಿಚ್ ಡೇವಿ ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಈ ಸಂದರ್ಭದಲ್ಲಿ ಮಿಯವಾಕಿ ವನವನ್ನು ಬೆಳೆಸುವ ಪ್ರಕ್ರಿಯೆಯನ್ನು ಮತ್ತಷ್ಟು ಬಲಪಡಿಸಲು ಸರಕಾರದ ಗಮನಕ್ಕೆ ಕೆಲವು ವಿಚಾರಗಳನ್ನು ತರಲಿದ್ದೇವೆ.
ಅದೇ ರೀತಿ ಸರಕಾರದ ವತಿಯಿಂದ ಕೇವಲ ಮಳೆಗಾಲದ ಹೊತ್ತಿನಲ್ಲಿ ಮಾತ್ರ ಈ ಸಸಿಗಳು ಲಭ್ಯವಿದ್ದು ಮಿಯವಾಕಿ ವನವನ್ನು ಯಾವುದೇ ಕಾಲಗಳಲ್ಲಿಯೂ ಮಾಡಬಹುದಾದದರಿಂದ ಸ್ಥಳೀಯವಾಗಿ ಬೆಳೆಯುವ ಸಸಿಗಳು ಎಲ್ಲಾ ಸಂದರ್ಭದಲ್ಲಿ ಲಭ್ಯವಿರಬೇಕು ಎಂದು ಆಗ್ರಹಿಸಲಿದ್ದೇವೆ ಎಂದರು.
ಸುದ್ದಿ ಗೋಷ್ಠಿಯಲ್ಲಿ ಶ್ರೀ ಅವಿನಾಶ್ ಕಾಮತ್, ನಿವೃತ್ತ ಶಿಕ್ಷಕಿ ಮತ್ತು ಸಂಪನ್ಮೂಲ ವ್ಯಕ್ತಿ ಶರಾವತಿ ರವಿರಾಜ್ ಹಾಗೂ ಶ್ರೀ ಆಲ್ ಫ್ರೆಂಡ್ ಮೋನಿಸ್ ಬಂಟಕಲ್ ಇವರು ಉಪಸ್ಥಿತರಿದ್ದರು.

