
ಕಾರ್ಕಳದಿಂದ ಸುರತ್ಕಲ್ ಪ್ರಯಾಣಿಸುವವರು ಎರಡು ಕಡೆ ಟೋಲ್ ಪಾವತಿಸುವ ದುಸ್ಥಿತಿ ಆರು ವರ್ಷಗಳಿಂದ ಮುಂದುವರಿದಿದೆ. ಬಸ್ಸಿನಲ್ಲಿ ಪ್ರಯಾಣಿಸುವ ಸಾಮಾನ್ಯ ಪ್ರಯಾಣಿಕನ ಜೇಬಿಗೂ ಇದರ ಹೊರೆ ಬಿದ್ದಿದೆ.ಆರು ತಿಂಗಳ ತಾತ್ಕಾಲಿಕ ನೆಲೆಯಲ್ಲಿ ಆರಂಭಗೊಂಡ ಸುರತ್ಕಲ್ ಟೋಲ್ ಗೇಟ್ ಸತತ ಹೋರಾಟಗಳ ಹೊರತಾಗಿಯೂ ಮುಂದುವರಿಯಲು ಜನಪ್ರತಿನಿಧಿಗಳ ಬೇಜವಾಬ್ದಾರಿತನವೇ ನೇರಕಾರಣ. ಇದರಿಂದಾಗಿ ಟೋಲ್ ಸುಲಿಗೆ ನಿರಾತಂಕವಾಗಿ ಮುಂದುವರಿದಿದೆ. ಅಕ್ಟೋಬರ್ 18 ರಂದು ನಡೆಯುವ ಟೋಲ್ ಗೇಟ್ ತೆರವು ಮುತ್ತಿಗೆ ಹೋರಾಟ ಎರಡೂ ಜಿಲ್ಲೆಗಳ ಮಟ್ಟಿಗೆ ಮಹತ್ವದ ಹೋರಾಟವಾಗಿದ್ದು ಸುರತ್ಕಲ್ ಟೋಲ್ ಗೇಟ್ ನ ನೇರ ಸಂತ್ರಸ್ತರಾಗಿರುವ ಕಾರ್ಕಳ ಭಾಗದ ಜನರು ಈ ಹೋರಾಟದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕಿದೆ ಎಂದು ಕಾರ್ಕಳ ಪುರಸಭಾ ಸದಸ್ಯ ಶುಭದ ರಾವ್ ಹೇಳಿದರು. ಅವರು ಅಕ್ಟೋಬರ್ 18 ರಂದು ನಡೆಯಲಿರುವ ಸುರತ್ಕಲ್ ಟೋಲ್ ಗೇಟ್ ಮುತ್ತಿಗೆ ಪ್ರತಿಭಟನೆಯ ಸಿದ್ದತೆಯ ಭಾಗವಾಗಿ ಕಾರ್ಕಳದ ಬಸ್ಸು ಏಜಂಟರ ಕಚೇರಿಯಲ್ಲಿ ಜರುಗಿದ ಸಮಾನ ಮನಸ್ಕರ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದರು. ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ಸಂಚಾಲಕರಾದ ಮುನೀರ್ ಕಾಟಿಪಳ್ಳ ಮಾತನಾಡುತ್ತಾ ಆರು ವರ್ಷಗಳ ಸತತ ಹೋರಾಟದ ಫಲವಾಗಿ ಸರಕಾರ ಸುರತ್ಕಲ್ ಟೋಲ್ ಗೇಟ್ ತೆರವಿನ ತೀರ್ಮಾನ ತೆಗೆದುಕೊಂಡಿದೆ. ಆದರೆ ತೀರ್ಮಾನ ಜಾರಿಮಾಡದೆ ಜನರ ತಾಳ್ಮೆಯನ್ನು ಪರೀಕ್ಷಿಸಲಾಗುತ್ತಿದೆ. ಸರಕಾರ ಹಾಗು ಜನಪ್ರತಿನಿಧಿಗಳ ಇಂತಹ ಜನವಿರೋಧಿತನದ ವಿರುದ್ದ ನಿರ್ಣಾಯಕ ಹೋರಾಟ ಅನಿವಾರ್ಯ ಎಂದು ಹೇಳಿದರು. ಈ ಸಂದರ್ಭದಲ್ಲಿ ಟೋಲ್ ವಿರುದ್ದದ ಪೋಸ್ಟರನ್ನು ಬಸ್ಸ್ ಏಜೆಂಟರ ಬಳಗದ ಗೌರವಾದ್ಯಕ್ಷರಾದ ಸುರೇಶ್ ದೇವಾಡಿಗ ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಎಜೆಂಟರ ಬಳಗದ ಅದ್ಯಕ್ಷ ಹರೀಶ್ ಪೂಜಾರಿ, ಸದಸ್ಯರುಗಳಾದ ಸದಾನಂದ ನಾಯಕ್ ಬಾಲಕೃಷ್ಣ ದೇವಾಡಿಗ, ಟ್ಯಾಕ್ಸಿ ಯೂನಿಯನ್ ಪದಾದಿಕಾರಿಗಳಾದ ಮುನೀರ್, ಇಮಾಮ್, ಲಕ್ಷಣ್, ಮೊದಲಾದವರು ಉಪಸ್ಥಿತರಿದ್ದರು ಇಕ್ಬಾಲ್ ಅಹ್ಮದ್ ಸ್ವಾಗತಿಸಿ ಧನ್ಯವಾದವಿತ್ತರು.

