×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸಿ: ಶ್ರೀಮತಿ. ಪುಷ್ಪರಾಣಿ

ಬ್ರಹ್ಮಾವರ: ಗ್ರಾಮಾಭಿವೃದ್ಧಿ ಮತ್ತು ಸ್ವ ಉದ್ಯೋಗ ತರಬೇತಿ (ರುಡ್ ಸೆಟ್) ಸಂಸ್ಥೆ, ಬ್ರಹ್ಮಾವರ ಇವರ ಆಶ್ರಯದಲ್ಲಿ ಮಹಿಳೆಯರ ಟೈಲರಿಂಗ್ ತರಬೇತಿಯ ಸಮಾರೋಪ ಸಮಾರಂಭವು ಸಂಸ್ಥೆಯ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಶ್ರೀಮತಿ. ಪುಷ್ಪರಾಣಿ, ಅಧೀಕ್ಷಕರು, ರಾಜ್ಯ ಮಹಿಳಾ ನಿಲಯ, ಉಡುಪಿ ಅವರು ಮಾತನಾಡಿ, ಮಹಿಳೆಯರು ಸ್ವಾವಲಂಬಿ ಜೀವನ ನಡೆಸಲು ಟೈಲರಿಂಗ್ ಉದ್ಯಮವು ಉತ್ತಮ ಅವಕಾಶಗಳನ್ನು ಒದಗಿಸುತ್ತದೆ. ಕಡಿಮೆ ವೆಚ್ಚದಲ್ಲಿ ಗುಣಮಟ್ಟವನ್ನು ಕಾಪಾಡಿಕೊಂಡು ಕಾರ್ಯನಿರ್ವಹಿಸಿದರೆ ಈ ಕ್ಷೇತ್ರದಲ್ಲಿ ಭದ್ರವಾಗಿ ನೆಲೆನಿಲ್ಲಲು ಸಾಧ್ಯ ಎಂದು ತಿಳಿಸಿದರು.

ತರಬೇತಿ ಪೂರ್ಣಗೊಂಡ ನಂತರ ಕೆಲವರು ಸ್ವಂತ ಉದ್ಯಮ ಆರಂಭಿಸಲು ಹಿಂಜರಿಯುತ್ತಾರೆ. ಮುಂದೆ ಎದುರಾಗುವ ಸಣ್ಣ ತೊಂದರೆಗಳಿಗೆ ಭಯಪಟ್ಟು ಹಿಂದೆ ಸರಿಯುವುದು ಸಾಮಾನ್ಯ. ಆದರೆ ಯಾವುದೇ ಕ್ಷೇತ್ರದಲ್ಲಾದರೂ ಸವಾಲುಗಳು ಸಹಜವಾಗಿವೆ. ಆದ್ದರಿಂದ ಸೋಲಿಗೆ ತಲೆಬಾಗದೆ, ಕ್ರೀಡಾ ಮನೋಭಾವದಿಂದ ಮತ್ತೆ ಮತ್ತೆ ಪ್ರಯತ್ನಿಸಬೇಕು. ಸೋಲು ಹಾಗೂ ಗೆಲುವನ್ನು ಸಮಾನವಾಗಿ ಸ್ವೀಕರಿಸುವ ಧನಾತ್ಮಕ ಚಿಂತನೆ ಯಶಸ್ಸಿನ ದಾರಿಯನ್ನು ತೋರಿಸುತ್ತದೆ ಎಂದು ಹೇಳಿದರು.

ನಂತರ ತರಬೇತಿ ಅವಧಿಯಲ್ಲಿ ಶಿಬಿರಾರ್ಥಿಗಳು ತಯಾರಿಸಿದ್ದ ವಿವಿಧ ಮಾದರಿಯ ವಸ್ತ್ರಗಳನ್ನು ವೀಕ್ಷಿಸಿ, ಶಿಬಿರಾರ್ಥಿಗಳಿಗೆ ಶುಭಾಶಯಗಳನ್ನು ತಿಳಿಸಿ ಪ್ರಮಾಣಪತ್ರಗಳನ್ನು ವಿತರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ರುಡ್ ಸೆಟ್ ಸಂಸ್ಥೆಯ ನಿರ್ದೇಶಕರಾದ ಡಾ. ಬೊಮ್ಮಯ್ಯ ಎಂ ಮಾತನಾಡಿ, ದೇಶದ ಅಭಿವೃದ್ಧಿಯಲ್ಲಿ ಮಹಿಳೆಯರ ಪಾತ್ರ ಮಹತ್ವದ್ದಾಗಿದೆ. ನೀಡಲಾಗಿರುವ ತರಬೇತಿಯ ಸದ್ಬಳಕೆ ಮಾಡಿಕೊಳ್ಳುವುದು ಪ್ರತಿಯೊಬ್ಬರ ಜವಾಬ್ದಾರಿ. ತರಬೇತಿ ಅವಧಿಯಲ್ಲಿ ಪಾಲಿಸಿದ ಶಿಸ್ತನ್ನು ಜೀವನದುದ್ದಕ್ಕೂ ಮುಂದುವರಿಸಿದರೆ ಉತ್ತಮ ಭವಿಷ್ಯ ನಿರ್ಮಿಸಿಕೊಳ್ಳಬಹುದು ಎಂದು ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಕುಮಾರಿ ಸುಮಲತಾ, ಶ್ರೀಮತಿ ಮಾಲತಿ ಎಸ್ , ಶ್ರೀಮತಿ ಸ್ವಾತಿ ಹಾಗೂ ಶ್ರೀಮತಿ ವಿನಯ್ ಶೆಟ್ಟಿ ಅವರು ತರಬೇತಿಯ ಅನುಭವಗಳನ್ನು ಹಂಚಿಕೊಂಡರು.

ಕಾರ್ಯಕ್ರಮವನ್ನು ಹಿರಿಯ ಉಪನ್ಯಾಸಕರಾದ ಶ್ರೀ ಸಂತೋಷ್ ಶೆಟ್ಟಿ ನಿರೂಪಿಸಿದರು. ಉಪನ್ಯಾಸಕರಾದ ಶ್ರೀಮತಿ. ಚೈತ್ರ ಕೆ ಸ್ವಾಗತಿಸಿದರು. ಕುಮಾರಿ ಭವ್ಯ ಹಾಗೂ ಕುಮಾರಿ ಅಂಕಿತ ಪ್ರಾರ್ಥನೆ ನೆರವೇರಿಸಿದರು. ಕಚೇರಿ ಸಹಾಯಕರಾದ ಶ್ರೀ ಶಾಂತಪ್ಪ ವಂದಿಸಿದರು.

Leave a Reply

Your email address will not be published. Required fields are marked *