×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಡಿ.26, 27 ,28: ಪದವಿ ಪ್ರದಾನ, ಸಂಸ್ಥಾಪಕರ ದಿನಾಚರಣೆ, 120ರ ಸಂಭ್ರಮ ‘ಬ್ಯಾರೀಸ್ ಉತ್ಸವ-2025

ಕುಂದಾಪುರ, ಡಿ.24: 1906ರಲ್ಲಿ ಸೂಫಿ ಸಾಹೇಬ್ ಕೋಡಿಯವರ ಮೂಲಕ ಹುಲ್ಲಿನ ಗುಡಿಸಿಲಿನಲ್ಲಿ ಅರಳಿದ ಕೋಡಿ ಬ್ಯಾರೀಸ್ ಶಿಕ್ಷಣ ಸಂಸ್ಥೆಗಳಿಂದು 120ರ ಸಂಭ್ರಮದಲ್ಲಿವೆ. ಈ ಸಂಸ್ಥೆಗಳ ಪದವಿ ಪ್ರದಾನ, ಸಂಸ್ಥಾಪಕರ ದಿನಾಚರಣೆ ಹಾಗೂ ಬ್ಯಾರೀಸ್ ಉತ್ಸವ-2025 ಕಾರ್ಯಕ್ರಮಗಳು ಡಿ.26ರಿಂದ 28ರವರೆಗೆ ನಡೆಯಲಿವೆ ಎಂದು ಬ್ಯಾರೀಸ್ ಗ್ರೂಪ್ ಆಫ್ ಇನ್‌ಸ್ಟಿಟ್ಯೂಟ್‌ನ ನಿರ್ದೇಶಕಿ ಅಶ್ವಿನಿ ಶೆಟ್ಟಿ ಹೇಳಿದ್ದಾರೆ.

ಬುಧವಾರ ಕುಂದಾಪುರ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅತ್ಯುತ್ತಮ ಶೈಕ್ಷಣಿಕ ಸಾಧನೆಯೊಂದಿಗೆ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಸಮಾರಂಭ’ ಹಮ್ಮಿಕೊಳ್ಳಲಾಗಿದೆ. ಡಿ.26ರ ಅಪರಾಹ್ನ 2:30ಕ್ಕೆ ಬ್ಯಾರಿಸ್ ನಾಲೆಡ್ಜ್ ಕ್ಯಾಂಪಸ್‌ನಲ್ಲಿ ನಡೆಯಲಿರುವ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಮಣಿಪಾಲ ಎಂಐಟಿ ಜಂಟಿ ನಿರ್ದೇಶಕಿ ಡಾ.ಚಂದ್ರಕಲಾ ಸಿ.ಎ., ಮಂಗಳೂರು ವಿವಿಯ ಕುಲಸಚಿವ (ಮೌಲ್ಯಮಾಪನ) ಡಾ.ಎಚ್.ದೇವೇಂದ್ರಪ್ಪ ಗೌರವ ಅತಿಥಿಗಳಾಗಿ ಉಡುಪಿ ಡಯಟ್‌ ಪ್ರಾಂಶುಪಾಲ ಡಾ.ಅಶೋಕ್ ಕಾಮತ್ ಆಗಮಿಸಲಿದ್ದಾರೆ ಎಂದರು.

ಡಿ.27ರಂದು ಬೆಳಗ್ಗೆ 10ಕ್ಕೆ ಸಂಸ್ಥೆಯ 120ರ ಸಂಭ್ರಮದೊಂದಿಗೆ ‘ಬ್ಯಾರೀಸ್ ಉತ್ಸವ-2025’, ಸಂಸ್ಥಾಪಕರ ದಿನಾಚರಣೆ ಮತ್ತು ಶಾಲಾ ವಾರ್ಷಿಕೋತ್ಸವ ನಡೆಯಲಿದೆ. ಮುಖ್ಯ ಅತಿಥಿಯಾಗಿ ಶಾಸಕ ಹಾಗೂ ಕಿಯೋನಿಕ್ಸ್‌ನ ಅಧ್ಯಕ್ಷ ಶರತ್ ಕುಮಾರ್ ಬಚ್ಚೇಗೌಡ ಉಪಸ್ಥಿತರಿರುವರು. ಅತಿಥಿಗಳಾಗಿ ಶಾಸಕ ಎ.ಕಿರಣ್ ಕುಮಾರ್ ಕೊಡ್ಲಿ ,ಮಾಜಿ ಲೋಕಸಭಾ ಸದಸ್ಯ ಜಯಪ್ರಕಾಶ್ ಹೆಗ್ಡೆ ರಾಜ್ಯ ಸರಕಾರದ ವಿಷನ್ ಗ್ರೂಪ್ ಫಾರ್ ಹೈಯರ್ ಎಜುಕೇಶನ್ ಆಂಡ್ ರಿಸರ್ಚ್‌ನ ಸದಸ್ಯ ಅರುಣ್ ಸೀತಾರಾಮ್, ಕುಂದಾಪುರ ಉಪ ವಿಭಾಗದ ಸಹಾಯಕ ಆಯುಕ್ತ ರಶ್ಮಿ ಎಸ್.ಆರ್., ನಿವೃತ್ತ ಪ್ರಾದ್ಯಾಪಕ ಡಾ.ಸೋಮಶೇಖ‌ರ್ ಉಡುಪ, ಕರ್ನಾಟಕ ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ.ಎ.ಗಫೂರ್ ಉಪಸ್ಥಿತರಿರುವರು

ಬ್ಯಾರೀಸ್ ಗ್ರೂಪ್ ಆಫ್ ಇನ್‌ಸ್ಟಿಟ್ಯೂಟ್‌ ಟ್ರಸ್ಟಿಡಾ.ಆಸಿಫ್ ಬ್ಯಾರಿ ಮಾತನಾಡಿ, ಬ್ಯಾರೀಸ್ ನಾಲೆಡ್ಜ್ ಕ್ಯಾಂಪಸ್‌ನಲ್ಲಿರುವ ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಡಿ.28ರಂದು ‘ರಕ್ಷಣಾ ವಲಯದಲ್ಲಿ ವೃತ್ತಿ ಅವಕಾಶಗಳು ಮತ್ತು ತಯಾರಿ’ ಎಂಬ ಪ್ರೇರಣಾದಾಯಕ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ ಎಂದರು.

ಭಾರತೀಯ ರಕ್ಷಣಾ ಸೇವೆಯಲ್ಲಿ ಗೌರವಾನ್ವಿತ ಮತ್ತು ಅರ್ಥಪೂರ್ಣ ವೃತ್ತಿ ಆಯ್ಕೆಮಾಡಲು ಆಸಕ್ತಿ ಹೊಂದಿರುವ ವಿವಿಧ ವಿದ್ಯಾ ಕ್ಷೇತ್ರಗಳ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುವ ಉದ್ದೇಶವನ್ನು ಈ ಕಾರ್ಯಕ್ರಮ ಹೊಂದಿದೆ. ಅನೀಸ್ ಡಿಫೆನ್ಸ್ ಕೆರಿಯರ್ ಇನ್‌ಸ್ಟಿಟ್ಯೂಟ್ ಪುಣೆಯ ಸಂಸ್ಥಾಪಕ ಮತ್ತು ನಿರ್ದೇಶಕ ಅನೀಸ್ ಕುಟ್ಟಿ ಈ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ. 36 ವರ್ಷಕ್ಕಿಂತ ಹೆಚ್ಚು ಕಾಲ ರಕ್ಷಣಾ ವೃತ್ತಿ ಮಾರ್ಗದರ್ಶಕರಾಗಿ ಸೇವೆ ಸಲ್ಲಿಸಿರುವ ಅನೀಸ್ ಕುಟ್ಟಿ ಸಾವಿರಾರು ವಿದ್ಯಾರ್ಥಿಗಳನ್ನು ಭಾರತೀಯ ಸೇನೆ, ನೌಕಾಪಡೆ ಮತ್ತು ವಾಯುಪಡೆ ಸೇರುವಂತೆ ಪ್ರೇರೇಪಿಸಿ ಮಾರ್ಗದರ್ಶನ ನೀಡಿದ್ದಾರೆ ಎಂದರು.

ಸೂಫಿ ಸಾಹೇಬರ ಬಳಿಕ ಅವರ ಪುತ್ರ ಹಾಜಿ ಕೆ.ಮೊಯ್ದಿನ್‌ ಬ್ಯಾರಿ ಸಂಸ್ಥೆಯನ್ನು ನಡೆಸಿಕೊಂಡು ಬಂದರು. 1993ರಲ್ಲಿ ಹಾಜಿ ಕೆ.ಮೊಯ್ದಿನ್ ಬ್ಯಾರಿ ಎಜುಕೇಶನ್ ಟ್ರಸ್ಟ್ ಸ್ಥಾಪನೆಗೊಂಡಿತು. ಇದರ ಸ್ಥಾಪಕಾಧ್ಯಕ್ಷ ದಿ.ಹಾಜಿ ಮಾಸ್ಟರ್ ಮಹಮೂದ್ ನೇತೃತ್ವದಲ್ಲಿ ಸಾವಿರಾರು ವಿದ್ಯಾರ್ಥಿಗಳಿಗೆ ಬ್ಯಾರೀಸ್ ಸಂಸ್ಥೆ ಬೆಳಕಾಯಿತು. ಪ್ರಸಕ್ತ ಅಧ್ಯಕ್ಷ ಹಾಜಿ ಕೆ.ಎಂ.ಅಬ್ದುಲ್ ರಹ್ಮಾನ್ ಬ್ಯಾರಿಯವರ ಮುಂದಾಳತ್ವದಲ್ಲಿ, ಸಂಚಾಲಕ ಸೈಯದ್ ಮುಹಮ್ಮದ್ ಬ್ಯಾರಿಯವರ ಮಾರ್ಗದರ್ಶನದಲ್ಲಿ ಸಂಸ್ಥೆ ಮುನ್ನೆಡೆಯುತ್ತಿದೆ ಎಂದು ಅಶ್ವಿನಿ ಶೆಟ್ಟಿ ವಿವರಿಸಿದರು.

ಸುದ್ದಿಗೋಷ್ಠಿಯಲ್ಲಿ ಬ್ಯಾರೀಸ್ ಗ್ರೂಪ್ ಆಫ್ ಇನ್‌ಸ್ಟಿಟ್ಯೂಶನ್‌ ಅಧ್ಯಕ್ಷ ಅಬ್ದುಲ್ ರಹ್ಮಾನ್ ಬ್ಯಾರಿ, ಬ್ಯಾರೀಸ್ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಶಬೀನಾ ಎಚ್., ಬ್ಯಾರೀಸ್ ಸೀಸೈಡ್ ಪಬ್ಲಿಕ್ ಸ್ಕೂಲ್‌ನ ಎಚ್‌ಒಡಿ ಶ್ವೇತಾ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *