ಪಡುಬಿದ್ರಿ: ಅಂತರಾಷ್ಟ್ರೀಯ ಸಹಕಾರಿ ವರ್ಷ-2025 ಸಲುವಾಗಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ಆದೇಶದನ್ವಯ ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಆಶ್ರಯದೊಂದಿಗೆ ಪಡುಬಿದ್ರಿ ಸಿ.ಎ.ಸೊಸೈಟಿ ನೇತೃತ್ವದಲ್ಲಿ ಭಾನುವಾರ ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಜರಗಿದ ಬೀಚ್ ಸ್ವಚ್ಚತಾ ಕಾರ್ಯಕ್ರಮಕ್ಕೆ ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಚಾಲನೆ ನೀಡಿದರು. ಅವರು ಈ ಸಂದರ್ಭ ಮಾತನಾಡಿ, ಅಂತರಾಷ್ಟ್ರೀಯ ಸಹಕಾರ ವರ್ಷ -2025 ಸಲುವಾಗಿ ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿಯು ಸಹಕಾರ ಸಪ್ತ ಸಂಭ್ರಮಾಚರಣೆಯ ಪ್ರಯುಕ್ತ ಮೊದಲ ದಿನದಂದು ಸುಂದರ ಕಡಲ ಕಿನಾರೆಯಲ್ಲಿ ಶುಚಿತ್ವ ಕಾಪಾಡುವ ನೆಲೆಯಲ್ಲಿ ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಪರಿಸರ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಂಡಿದೆ. ಈ ಬಾರಿಯ ಸಹಕಾರ ವರ್ಷದಲ್ಲಿ ಸಮಾಜಮುಖಿ ಕಾರ್ಯಕ್ರಮಗಳಿಗೆ ಒತ್ತನ್ನು ನೀಡಲಾಗಿದೆ. ಏಳು ದಿನಗಳ ಕಾಲ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡ ಪಡುಬಿದ್ರಿ ಸಿ.ಎ.ಸೊಸೈಟಿ ಕಾರ್ಯ ಶ್ಲಾಘನೀಯ ಎಂದು ಹೇಳಿದರು. ಬೆಳಿಗ್ಗೆ 8 ಗಂಟೆಯಿಂದ ಆರಂಭವಾದ ಸ್ವಚ್ಛತಾ ಕಾರ್ಯ ಹೆಜಮಾಡಿ ಕರಾವಳಿ ಯುವಕ ಯುವತಿ ವೃಂದದ ಸಹಯೋಗದಲ್ಲಿ ಹೆಜಮಾಡಿ ಬೀಚ್, ಪಡುಬಿದ್ರಿ ಕರಾವಳಿ ಸ್ಟಾರ್ ನಡಿಪಟ್ನ ಮತ್ತು ಯುವವಾಹಿನಿ ಪಡುಬಿದ್ರಿ ಘಟಕದ ಸಹಯೋಗದೊಂದಿಗೆ ಪಡುಬಿದ್ರಿ ಬೀಚ್, ತೆಂಕ ಕರಾವಳಿ ಫ್ರೆಂಡ್ಸ್ ಸಹಯೋಗದೊಂದಿಗೆ ತೆಂಕ ಎರ್ಮಾಳ್ ಬೀಚ್ ಬಳಿ ಸ್ವಚ್ಚತಾ ಕಾರ್ಯಕ್ರಮ ಜರಗಿತು. ಈ ಸಂದರ್ಭ ಪಡುಬಿದ್ರಿ ಸಿ.ಎ.ಸೊಸೈಟಿ ಅಧ್ಯಕ್ಷರಾದ ವೈ ಸುಧೀರ್ ಕುಮಾರ್, ನಿರ್ದೇಶಕರಾದ ಗಿರೀಶ್ ಪಲಿಮಾರು, ಕೃಷ್ಣ ಬಂಗೇರ, ಮಾಧವ ಆಚಾರ್ಯ, ರೋಹಿಣಿ ಎ., ಕುಸುಮಾ ಕರ್ಕೇರ, ಶಿವರಾಮ ಎನ್ ಶೆಟ್ಟಿ, ಪ್ರಭಾರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶೋಭಾ ಎಚ್.ಪುತ್ರನ್ ಉಪಸ್ಥಿತರಿದ್ದರು. ಪಡುಬಿದ್ರಿ ಸಿ.ಎ.ಸೊಸೈಟಿ ಅಧ್ಯಕ್ಷರಾದ ವೈ ಸುಧೀರ್ ಕುಮಾರ್ ಸ್ವಾಗತಿಸಿದರು. ನಿಖಿಲ್ ಪೂಜಾರಿ ನಿರೂಪಿಸಿ, ವಂದಿಸಿದರು.


