ಪಡುಬಿದ್ರಿ ಠಾಣಾ ವ್ಯಾಪ್ತಿಯ ಸಾಂತೂರು ಗ್ರಾಮದ ಮುದರಂಗಡಿ ರಸ್ತೆಯಲ್ಲಿ ತಲಾ 10 ಸಾವಿರ ಮೌಲ್ಯದ 3 ಯುನಿಟ್ ತೂಕದ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಎರಡು ಟಿಪ್ಪರನ್ನು ಪಡುಬಿದ್ರಿ ಪೋಲಿಸರು ವಶ ಪಡೆದುಕೊಂಡ ಘಟನೆ ಬುಧವಾರ ತಡ ರಾತ್ರಿ ಸಂಭವಿಸಿದೆ. ಸಾಂತೂರು ಗ್ರಾಮದಲ್ಲಿ ಪಡುಬಿದ್ರಿ ಠಾಣಾ ಹೆಡ್ ಕಾನ್ಸ್ಟೇಬಲ್ ಉದಯಕುಮಾರ್ ಶೆಟ್ಟಿ ಗಸ್ತಿನಲ್ಲಿರುವಾಗ ಸಾಂತೂರು ಸುಬ್ರಹ್ಮಣ್ಯ ದೇವಸ್ಥಾನ ಕಡೆಯಿಂದ ಮುದರಂಗಡಿ ಕಡೆಗೆ ಸಾಗುತ್ತಿದ್ದ ಎರಡು ಟಿಪ್ಪರ್ ಲಾರಿಗಳ ಚಾಲಕರು ಇವರನ್ನು ಕಂಡು ಟಿಪ್ಪರುಗಳನ್ನು ರಸ್ತೆಯ ಬದಿಗೆ ನಿಲ್ಲಿಸಿ ಪರಾರಿಯಾಗಿದ್ದಾರೆ. ಯಾವುದೇ ಪರವಾನಿಗೆ ಹೊಂದದೆ ಎಲ್ಲಿಂದಲೋ ಕಳವು ಮಾಡಿ, 2 ಟಿಪ್ಪರ್ ಲಾರಿಗಳಲ್ಲಿ ತುಂಬಿಸಿ, ಎಲ್ಲಿಗೋ ಸಾಗಿಸುವ ಉದ್ದೇಶದಿಂದ ಕಾಪು ತಾಲೂಕು ಸಾಂತೂರು ಗ್ರಾಮದ ಸಾಂತೂರು ಸುಬ್ರಹ್ಮಣ್ಯ ದೇವಸ್ಥಾನ ಕಡೆಯಿಂದ ಮುದರಂಗಡಿ ಕಡೆಗೆ ರಸ್ತೆಯಲ್ಲಿ ಚಲಾಯಿಸಿಕೊಂಡು ಬಂದಿದ್ದಾರೆ. ಟಿಪ್ಪರ್ಗಳ ಚಾಲಕರು ಮತ್ತು ಮಾಲೀಕರ ವಿರುದ್ದ ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

