ಉಡುಪಿ : ರಂಗಭೂಮಿ ಉಡುಪಿ ವತಿಯಿಂದ ಈ ವರ್ಷದ “ರಂಗಭೂಮಿ ರಂಗ ಶಿಕ್ಷಣ” ಅಭಿಯಾನದಲ್ಲಿ ಉಡುಪಿ ನಗರದ ಆಯ್ದ 11 ಪ್ರೌಢಶಾಲೆಗಳ 250 ಕ್ಕೂ ಅಧಿಕ ಮಕ್ಕಳ ಭಾಗವಹಿಸುವಿಕೆಯಲ್ಲಿ 11 ಹೆಸರಾಂತ ನಿರ್ದೇಶಕರಿಂದ ತಯಾರಾದ 11 ಕಿರು ನಾಟಕಗಳ ಪ್ರದರ್ಶನ `ರಂಗಭೂಮಿ ರಂಗಶಿಕ್ಷಣ ಮಕ್ಕಳ ನಾಟಕೋತ್ಸವ ‘ ಡಿ.29 ಮತ್ತು ಡಿ.30 ರಂದು ಬೆಳಗ್ಗೆ 9.30 ರಿಂದ ಸಂಜೆ 5.30 ರ ತನಕ ಎಂಜಿಎA ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ನಡೆಯಲಿದೆ.
ಕಾರ್ಯಕ್ರಮವನ್ನು ಡಿ.29 ರಂದು ಬೆಳಗ್ಗೆ 9.30ಕ್ಕೆ ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಉದ್ಘಾಟಿಸಲಿದ್ದಾರೆ. ರಂಗಭೂಮಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಉದ್ಯಮಿ ಭುವನೇಂದ್ರ ಕಿದಿಯೂರು, ಹರಿಪ್ರಸಾದ್ ರೈ, ಎಂಜಿಎo ಕಾಲೇಜಿನ ಉಪ ಪ್ರಾಂಶುಪಾಲ ಡಾ. ಎಂ. ವಿಶ್ವನಾಥ ಪೈ, ರಂಗಶಿಕ್ಷಣ ಸಂಚಾಲಕ ವಿದ್ಯಾವಂತ ಆಚಾರ್ಯ ಉಪಸ್ಥಿತರಿರುವರು.
ಸಮಾರೋಪ ಡಿ.30ರಂದು ಮಧ್ಯಾಹ್ನ 12 ಗಂಟೆಗೆ ನಡೆಯಲಿದ್ದು, ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಅಧ್ಯಕ್ಷತೆ ವಹಿಸುವರು. ಅದಾನಿ ಗ್ರೂಪ್ಸ್ನ ಅಧ್ಯಕ್ಷ ಕಿಶೋರ್ ಆಳ್ವ ಸಮಾರೋಪ ಭಾಷಣ ಮಾಡಲಿದ್ದಾರೆ.
ಉದ್ಯಮಿಗಳಾದ ಜಮಾಲುದ್ದೀನ್ ಅಬ್ಬಾಸ್, ಅಲಯನ್ಸ್ ಜಿಲ್ಲೆ 275ಎಸ್ರ ಜಿಲ್ಲಾ ಗವರ್ನರ್ ಅಲೈ ಸುನೀಲ್ ಸಾಲ್ಯಾನ್, ಉದ್ಯಮಿ ಪೆರ್ಣಂಕಿಲ ಶ್ರೀಶ ನಾಯಕ್, ಎಂಜಿಎo ಕಾಲೇಜಿನ ಪ್ರಾಂಶುಪಾಲೆ ಪ್ರೊ. ವನಿತಾ ಮಯ್ಯ ಹಾಗೂ ರಂಗಶಿಕ್ಷಣ ಸಂಚಾಲಕ ವಿದ್ಯಾವಂತ ಆಚಾರ್ಯ ಉಪಸ್ಥಿತರಿರುವರು.
ಯಾವೆಲ್ಲಾ ನಾಟಕಗಳು ? :
ಡಿ.29ರಂದು ಬೆಳಗ್ಗೆ 10.45ಕ್ಕೆ ಕುಂಜಿಬೆಟ್ಟು ಶಾರದಾ ರೆಸಿಡೆನ್ಶಿಯಲ್ ಸ್ಕೂಲಿನ ಮಕ್ಕಳಿಂದ ‘ಪುಷ್ಪರಾಣಿ’, ಬೆಳಗ್ಗೆ 11.45ಕ್ಕೆ ಕಲ್ಯಾಣಪುರ ಮಿಲಾಗ್ರಿಸ್ ಪ್ರೌಢಶಾಲೆಯ ಮಕ್ಕಳಿಂದ ‘ಕಾಡಿನ ಪಕ್ಷಿ ಪ್ಯಾಟೆಗೆ ಬಂತು ‘, ಮಧ್ಯಾಹ್ನ 12.45ಕ್ಕೆ ಉಡುಪಿ ವಿದ್ಯೋದಯ ಪಬ್ಲಿಕ್ ಸ್ಕೂಲಿನ ಮಕ್ಕಳಿಂದ ‘ಅಳಿಲು ಮರಿಯ ಹೊರಳು ಸೇವೆ ‘, ಅಪರಾಹ್ನ 2.30ಕ್ಕೆ ಆದಿ ಉಡುಪಿ ಪ್ರೌಢಶಾಲೆಯ ಮಕ್ಕಳಿಂದ ಲಂಬಕರ್ಣನ ಉಷ್ಣೇಶ, ಅಪರಾಹ್ನ 3.30ಕ್ಕೆ ಉಡುಪಿ ಬೋರ್ಡ್ ಹೈಸ್ಕೂಲ್ ಮಕ್ಕಳಿಂದ ‘ಕಾವ್ಯ ಕಥಾನಾಟಕ’ ಹಾಗೂ ಸಂಜೆ 4.30ಕ್ಕೆ ಮಣಿಪಾಲ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ಮಕ್ಕಳಿಂದ ‘ಕಾಮನ್ಸೆನ್ಸ್ ‘ ನಾಟಕ ಪ್ರದರ್ಶನಗೊಳ್ಳಲಿವೆ.
ಡಿ.30ರಂದು ಬೆಳಗ್ಗೆ 9.30ಕ್ಕೆ ಉಡುಪಿ ಬೈಲಕೆರೆ ಶ್ರೀ ಅನಂತೇಶ್ವರ ಪ್ರೌಢಶಾಲೆಯ ಮಕ್ಕಳಿಂದ ‘ಒಮ್ಮೆ ಸಿಕ್ಕರೆ ‘ ನಾಟಕ, 11 ಗಂಟೆಗೆ ನಿಟ್ಟೂರು ಪ್ರೌಢಶಾಲಾ ಮಕ್ಕಳಿಂದ ‘ಕತ್ತಲೆ ನಗರ ತಲೆಕೆಟ್ಟ ರಾಜ ‘, ಮಧ್ಯಾಹ್ನ 2 ಗಂಟೆಗೆ ಕುಂಜಿಬೆಟ್ಟು ಟಿಎ ಪೈ ಆಂಗ್ಲ ಮಾಧ್ಯಮ ಶಾಲೆಯಿಂದ ‘ತಾರೆ’ ಅಪರಾಹ್ನ 3 ಗಂಟೆಗೆ ಸೈಂಟ್ ಸಿಸಿಲೀಸ್ ಪ್ರೌಢಶಾಲೆ ಮಕ್ಕಳಿಂದ ‘ಅಳಿಲು ರಾಮಾಯಣ’ ಹಾಗೂ ಸಂಜೆ 4 ಗಂಟೆಗೆ ಇಂದ್ರಾಳಿ ಆಂಗ್ಲ ಮಾಧ್ಯಮ ಶಾಲಾ ಮಕ್ಕಳಿಂದ ‘ಎಂಡ್ ಇಲ್ಲದ ಬಂಡ್ ಅವತಾರ ‘ ನಾಟಕಗಳು ಪ್ರದರ್ಶನಗೊಳ್ಳಲಿವೆ.
ಡಿ.29ರಂದು 6 ಹಾಗೂ ಡಿ.30ರಂದು 5 ಶಿಕ್ಷಣ ಸಂಸ್ಥೆಗಳ ಮಕ್ಕಳಿಂದ ನಾಟಕ ಪ್ರದರ್ಶನಗಳು ನಡೆಯಲಿವೆ ಎಂದು ಸಂಸ್ಥೆಯ ಪ್ರಕಟನೆ ತಿಳಿಸಿದೆ.
ಡಿ. 31 ಹಾಗೂ ಜನವರಿ 1 ರಂದು ದಿ|ನಿ.ಬೀ.ಅಣ್ಣಾಜಿ ಬಲ್ಲಾಳರ ಸ್ಮರಣಾರ್ಥ ಅಂಬಲಪಾಡಿ ನಾಟಕೋತ್ಸವ
ರಂಗಭೂಮಿ (ರಿ.) ಉಡುಪಿ ವತಿಯಿಂದ ಅಂಬಲಪಾಡಿ ಶ್ರೀ ಜನಾರ್ದನ ಮತ್ತು ಮಹಾಕಾಳಿ ದೇವಸ್ಥಾನದ ಆಶ್ರಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಕಾರದಲ್ಲಿ ದಿ.ನಿ.ಬೀ.ಅಣ್ಣಾಜಿ ಬಲ್ಲಾಳರ ಸ್ಮರಣಾರ್ಥ ‘ಅಂಬಲಪಾಡಿ ನಾಟಕೋತ್ಸವ ‘ (ನೀನಾಸಂ ತಿರುಗಾಟ -2025ರ ನಾಟಕಗಳ ಪ್ರದರ್ಶನ) ಡಿಸೆಂಬರ್ 31 ಮತ್ತು 2026ರ ಜನವರ 1 ರಂದು ಸಂಜೆ 6.30ಕ್ಕೆ ಯಕ್ಷಗಾನ ಕಲಾರಂಗದ ಐವೈಸಿ ಸಭಾಂಗಣದಲ್ಲಿ ನಡೆಯಲಿದೆ.
ನಾಟಕೋತ್ಸವವನ್ನು ಡಿ.31ರಂದು ಸಂಜೆ 6.30ಕ್ಕೆ ಅಂಬಲಪಾಡಿ ದೇವಳದ ಧರ್ಮದರ್ಶಿ ಡಾ.ಎನ್.ಬಿ.ವಿಜಯ ಬಲ್ಲಾಳ್ ಉದ್ಘಾಟಿಸುವರು.
ಅಧ್ಯಕ್ಷತೆಯನ್ನು ರಂಗಭೂಮಿ ಉಡುಪಿ ಸಂಸ್ಥೆಯ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ ವಹಿಸುವರು. ಮುಖ್ಯ ಅತಿಥಿಗಳಾಗಿ ಹಿರಿಯ ರಂಗಕರ್ಮಿ ಪ್ರೊ.ಆರ್.ಎಲ್.ಭಟ್, ಸಾಫಲ್ಯ ಚಾರಿಟೇಬಲ್ ಟ್ರಸ್ಟ್ನ ಅಧ್ಯಕ್ಷೆ ಶ್ರೀಮತಿ ರಂಜನಾ ಶ್ರೀಧರ ಶೆಟ್ಟಿ, ಟ್ರಸ್ಟ್ನ ಪ್ರವರ್ತಕಿ ಶ್ರೀಮತಿ ನಿರುಪಮಾ ಪ್ರಸಾದ್ ಉಪಸ್ಥಿತರಿರುವರು.
ಸಭಾ ಕಾರ್ಯಕ್ರಮದ ಬಳಿಕ ನೀನಾಸಂ ತಂಡದಿಂದ `ಹೃದಯದ ತೀರ್ಪು ‘ ನಾಟಕ ಪ್ರದರ್ಶನಗೊಳ್ಳಲಿದೆ.
ಜನವರಿ 1 ರಂದು ಸಂಜೆ 6.30ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು, ಅಧ್ಯಕ್ಷತೆಯನ್ನು ಅಂಬಲಪಾಡಿ ದೇವಳದ ಧರ್ಮದರ್ಶಿ ಡಾ.ಎನ್.ಬಿ.ವಿಜಯ ಬಲ್ಲಾಳ್ ವಹಿಸುವರು. ರಂಗಭೂಮಿ ಉಡುಪಿ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ ಶುಭಶಂಸನೆ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಉದ್ಯಮಿ ಆನಂದ ಪಿ. ಸುವರ್ಣ ಮಲ್ಪೆ, ಲಯನ್ಸ್ ಕ್ಲಬ್ ಅಂಬಲಪಾಡಿ ಅಧ್ಯಕ್ಷ ತಾರಾನಾಥ ಸುವರ್ಣ ಭಾಗವಹಿಸಲಿರುವರು. ಈ ಸಂದರ್ಭದಲ್ಲಿ ತುಳು ನಾಟಕಗಳ ರಚನೆಗಾಗಿ ಧರ್ಮಸ್ಥಳದ ರತ್ನವರ್ಮ ಹೆಗ್ಗಡೆ ಪ್ರಶಸ್ತಿ ಹಾಗೂ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ನಾಟಕಕಾರ ರವಿಕುಮಾರ್ ಕಡೆಕಾರ್ ಅವರಿಗೆ ರಂಗಸನ್ಮಾನ ನಡೆಯಲಿದೆ.
ಸಭಾ ಕಾರ್ಯಕ್ರಮದ ಬಳಿಕ ನೀನಾಸಂ ತಿರುಗಾಟ ತಂಡದ ನಾಟಕ ‘ಅವತರಣಂ ಭ್ರಾಂತಾಲಯಂ ‘ ಪ್ರದರ್ಶನಗೊಳ್ಳಲಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ರಂಗಭೂಮಿಯ ಅಧ್ಯಕ್ಷರಾದ ಡಾ. ತಲ್ಲೂರು ಶಿವರಾಮ ಶೆಟ್ಟಿ ಅವರು ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.
ಪತ್ರಿಕಾ ಗೋಷ್ಠಿಯಲ್ಲಿ ರಂಗಭೂಮಿಯ ಉಪಾಧ್ಯಕ್ಷರಾದ ಭಾಸ್ಕರ ರಾವ್ ಕಿದಿಯೂರು, ಪ್ರಧಾನ ಕಾರ್ಯದರ್ಶಿ ಪ್ರದೀಪ್ ಚಂದ್ರ ಕುತ್ಪಾಡಿ ಉಪಸ್ಥಿತರಿದ್ದರು.

