21-03-2026 ಸಂಜೆ 4:00 ಗಂಟೆಗೆ ಮಂಗಳೂರು ಇನ್ಸ್ಟಿ ಟ್ಯೂಟ್ ಆಫ್ ಒಮಕಾಲಜಿ ಪಂಪ್ವೆಲ್, ಮಂಗಳೂರು
ಸಂಜೀವಿನಿ ಕ್ಯಾನ್ಸರ್ ಸೇವಾ ಟ್ರಸ್ಟ್, ಮಂಗಳೂರು ಇನ್ಸ್ಟಿಟ್ಯೂಟ್ ಆಫ್ ಆಂಕೋಲಜಿ (M.I.O), ಮಂಗಳೂರು ಇವರ ಸಹಯೋಗದಲ್ಲಿ, ಕರಾವಳಿ ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ 20 ಪ್ರಶ್ನೆಗಳನ್ನೊಳಗೊಂಡ ಸಮಗ್ರ ಕ್ಯಾನ್ಸರ್ ಜಾಗೃತಿ ಮನೆ-ಮನೆ ಸಮೀಕ್ಷೆ ನಡೆಸಲಾಗಿದೆ.
ಈ ಸಮೀಕ್ಷೆಯಲ್ಲಿ ಗೃಹಿಣಿಯರು, ವಿದ್ಯಾರ್ಥಿಗಳು, ಕಾರ್ಮಿಕರು, ವೃತ್ತಿಪರರು, ವ್ಯಾಪಾರಿಗಳು ಮತ್ತು ಇನ್ನಿತರ ಸಮುದಾಯದವರು ಸೇರಿ 10,000ಕ್ಕೂ ಹೆಚ್ಚು ಜನರು ಭಾಗವಹಿಸಿದ್ದಾರೆ. ಈ ಸಮೀಕ್ಷೆ ಕ್ಯಾನ್ಸರ್ ತಡೆಗಟ್ಟುವಿಕೆ ಹಾಗೂ ಆರಂಭಿಕ ಪತ್ತೆಗೆ ಸಂಬಂಧಿಸಿದಂತೆ ಸಾರ್ವಜನಿಕರ ಜಾಗೃತಿ, ಇರುವ ತಪ್ಪು ಕಲ್ಪನೆಗಳು ಮತ್ತು ಪ್ರಮುಖ ಅಡೆತಡೆಗಳ ಕುರಿತು ಮಹತ್ವದ ಒಳನೋಟಗಳನ್ನು ಒದಗಿಸುತ್ತಿದೆ.
ಸಮೀಕ್ಷೆಯ ವರದಿಯ ಪ್ರಕಾರ ಸಾರ್ವಜನಿಕರಲ್ಲಿ ಕ್ಯಾನ್ಸರ್ ಬಗ್ಗೆ ಮೂಲಭೂತ ಜಾಗೃತಿ ಉತ್ತಮ ಮಟ್ಟದಲ್ಲಿದೆ ಎಂದು ಕಂಡುಬಂದಿದೆ. ಈ ಸಮೀಕ್ಷೆಯಲ್ಲಿ 90% ಕ್ಕಿಂತ ಹೆಚ್ಚು ಪ್ರತಿಕ್ರಿಯೆದಾರರು ತಂಬಾಕು ಸೇವನೆಯು ಕ್ಯಾನ್ಸರ್ಗೆ ಕಾರಣವಾಗುತ್ತಿದೆ ಎಂಬುದನ್ನು ಅರಿತುಕೊಂಡಿದ್ದಾರೆ. ಇನ್ನು ಬಹುತೇಕರು ಕ್ಯಾನ್ಸರ್ ಅನ್ನು ಆರಂಭಿಕ ಹಂತದಲ್ಲಿಯೇ ಪತ್ತೆಹಚ್ಚಿದರೆ ಚಿಕಿತ್ಸೆಯು ಹೆಚ್ಚು ಫಲಕಾರಿ ಮತ್ತು ಬದುಕುಳಿಯುವ ಸಾಧ್ಯತೆಯು ಅಧಿಕ ಎಂದು ಅರಿತಿದ್ದಾರೆ. ಜೊತೆಗೆ, ಕ್ಯಾನ್ಸರ್ ಒಂದು ಸಾಂಕ್ರಾಮಿಕರಹಿತ ರೋಗ (Non-communicable disease), ಅದು ಒಬ್ಬರಿಂದ ಮತ್ತೊಬ್ಬರಿಗೆ ಹರಡುವುದಿಲ್ಲ ಎಂಬ ಅರಿವು ಕೂಡ ಜನರಲ್ಲಿ ವ್ಯಾಪಕವಾಗಿದೆ. ಕಳೆದ ಹಲವು ವರ್ಷಗಳಿಂದ ನಡೆಯುತ್ತಿರುವ ಸಾರ್ವಜನಿಕ ಜಾಗೃತಿ ಅಭಿಯಾನಗಳ ಪರಿಣಾಮ ಈ ಭಾಗದ ಜನರಲ್ಲಿ ಜಾಗೃತಿ ಹೆಚ್ಚಿರುವುದು ಕಂಡುಬರುತ್ತಿದೆ.
ಪ್ರಮುಖ ಸವಾಲುಗಳು:
ಆರಂಭಿಕ ಹಂತದಲ್ಲಿ ಕ್ಯಾನ್ಸರ್ ಪತ್ತೆಹಚ್ಚುವುದರ ಬಗ್ಗೆ ಮಹತ್ವದ ಅರಿವು ಇದ್ದರೂ ಸಹ, ಸರಿಸುಮಾರು 15% ಕ್ಕಿಂತ ಕಡಿಮೆ ಜನರು ಮಾತ್ರ ನಿಯಮಿತ ಕ್ಯಾನ್ಸರ್ ತಪಾಸಣೆಗೆ (Regular Screening) ಒಳಗಾಗುತ್ತಿದ್ದಾರೆ. ಇದಕ್ಕೂ ಪ್ರಮುಖ ಕಾರಣಗಳಾಗಿ ರೋಗ ಪತ್ತೆಯ ಭಯ, ಚಿಕಿತ್ಸೆಯ ವೆಚ್ಚಗಳ ಬಗ್ಗೆ ಆತಂಕ ಮತ್ತು ಚಿಕಿತ್ಸಾ ಕೇಂದ್ರಗಳ ದೂರ ಎಂದು ತಿಳಿಸಲಾಗಿದೆ. ಇನ್ನು ಗರ್ಭಕಂಠದ ಕ್ಯಾನ್ಸರ್ ಸೇರಿದಂತೆ ಕೆಲವು ಗಂಟಲು ಕ್ಯಾನ್ಸರ್ ಪ್ರಕಾರಗಳನ್ನು ತಡೆಯಲು ಸಹಾಯಕವಾಗುವ ಹೆಚ್ ಪಿ ವಿ (HPV ) ಲಸಿಕೆ ಕುರಿತು ಅರಿವು ಮಧ್ಯಮ ಮಟ್ಟದಲ್ಲಿದೆ. ಅನೇಕರು ರೋಗದ ಗಂಭೀರ ಅಥವಾ ಕೊನೆಯ ಹಂತದ ಲಕ್ಷಣಗಳು ಕಾಣಿಸಿಕೊಂಡ ನಂತರವಷ್ಟೇ ವೈದ್ಯಕೀಯ ನೆರವನ್ನು ಪಡೆಯುತ್ತಾರೆ, ಇದರಿಂದ ಆರಂಭಿಕ ಹಂತದಲ್ಲಿಯೇ ತಡೆಗಟ್ಟುವಿಕೆ ಮತ್ತು ಉತ್ತಮ ಚಿಕಿತ್ಸೆ ಪಡೆಯುವ ಸುವರ್ಣಾವಕಾಶವನ್ನು ಜನರು ಕಳೆದುಕೊಳ್ಳುತ್ತಾರೆ. ಏತನ್ಮಧ್ಯೆ, ಸಮೀಕ್ಷೆಯಲ್ಲಿ ಕೆಲವು ಉತ್ಸಾಹಕರ ಬೆಳವಣಿಗೆಗಳೂ ಕಂಡುಬಂದಿದ್ದು, ಹಲವರು ಸ್ವಯಂ ಪರೀಕ್ಷೆ (Self-examination) ಮತ್ತು ಆರೋಗ್ಯಕರ ಆಹಾರ ಪದ್ಧತಿಯ ಬಗ್ಗೆ ಜಾಗೃತಿ ಹೊಂದಿರುವುದಾಗಿ ತಿಳಿಸಿದ್ದಾರೆ.
ಮುಂದಿನ ದಾರಿ:
ಸಬ್ಸಿಡಿ ಆಧಾರಿತ ಕ್ಯಾನ್ಸರ್ ತಪಾಸಣಾ ಶಿಬಿರಗಳು, ಭಯ ನಿವಾರಣಾ ಸಲಹಾ ಸೇವೆಗಳು, HPV ಲಸಿಕೆ ಜಾಗೃತಿ ಅಭಿಯಾನಗಳು ಮತ್ತು ಮೊಬೈಲ್/ಚರ ತಪಾಸಣೆ/ಪತ್ತೆ ಕೇಂದ್ರಗಳು ಮುಂತಾದ ಕ್ರಮಗಳು ಜಾಗೃತಿಯನ್ನು ಕಾರ್ಯರೂಪಕ್ಕೆ ತರಲು ಸಹಾಯಕವಾಗಬಹುದು.
ವೈದ್ಯರು, ಟಿವಿ ಹಾಗೂ ಪತ್ರಿಕಾ ಮಾಧ್ಯಮಗಳು ಮತ್ತು ಸಾಮಾಜಿಕ ಜಾಲತಾಣಗಳಂತಹ ವಿಶ್ವಾಸಾರ್ಹ ಸಂಪರ್ಕ ಮಾಧ್ಯಮಗಳ ಮೂಲಕ ಮಾಹಿತಿ ಹರಡುವಿಕೆಯನ್ನು ಬಲಪಡಿಸುವುದರಿಂದ ಜನರು ನಿಯಮಿತ ತಪಾಸಣೆ ಮತ್ತು ಲಸಿಕೆ ಪಡೆಯಲು ಉತ್ತೇಜನ ಸಿಗುತ್ತದೆ. ಇದರಿಂದ ಕ್ಯಾನ್ಸರ್ ಅನ್ನು ಕೊನೆಯ ಹಂತದಲ್ಲಿ ಪತ್ತೆಹಚ್ಚುವ ಪ್ರಕರಣಗಳು ಕಡಿಮೆಯಾಗುವಂತೆ ಮಾಡಬಹುದು ಮತ್ತು ಬಲಿಷ್ಠ ಆರೋಗ್ಯ ವ್ಯವಸ್ಥೆ ನಿರ್ಮಾಣಕ್ಕೂ ಸಹಕಾರಿಯಾಗುತ್ತದೆ.
ಕಾರ್ಯಕ್ರಮದ ವಿವರಗಳು:
ಕ್ಯಾನ್ಸರ್ ತಡೆಗಟ್ಟುವಿಕೆ ಮತ್ತು ಆರಂಭಿಕ ಪತ್ತೆಯ ಅಗತ್ಯತೆಯನ್ನು ಸಾಮಾನ್ಯ ಜನತೆ ಮತ್ತು ಸರ್ಕಾರದ ಗಮನಕ್ಕೂ ತರುವ ಉದ್ದೇಶದಿಂದ, “ಕ್ಯಾನ್ಸರ್ ಜಾಗೃತಿಯಲ್ಲಿ ಭರವಸೆಯ ಹೊಸ ಮುನ್ನುಡಿ” 10,000+ ಮನೆಗಳ ಕ್ಯಾನ್ಸರ್ ಜಾಗೃತಿ ಸಮೀಕ್ಷೆ – ದಕ್ಷಿಣ ಕನ್ನಡ ಜಿಲ್ಲೆ ಎಂಬ ಸಮೀಕ್ಷಾ ವರದಿ ಪುಸ್ತಕವನ್ನು ಮಂಗಳೂರಿನ ಪಂಪ್ವೆಲ್ನಲ್ಲಿರುವ M.I.O ನಲ್ಲಿ ಅಧಿಕೃತವಾಗಿ ಬಿಡುಗಡೆ ಮಾಡಲಾಯಿತು. ಈ ಕಾರ್ಯಕ್ರಮವು ಡಾ. ಸುರೇಶ್ ರಾವ್, ಅಧ್ಯಕ್ಷರು ಮತ್ತು ವ್ಯವಸ್ಥಾಪಕ ಟ್ರಸ್ಟಿ, ಸಂಜೀವಿನಿ ಕ್ಯಾನ್ಸರ್ ಸೇವಾ ಟ್ರಸ್ಟ್ ಹಾಗೂ ನಿರ್ದೇಶಕರು, M.I.O ಇವರ ಅಧ್ಯಕ್ಷತೆಯಲ್ಲಿ ನಡೆಯಿತು, ಮುಖ್ಯ ಅತಿಥಿಯಾಗಿ ಕರ್ನಾಟಕ ವಿಧಾನ ಪರಿಷತ್ ಸದಸ್ಯರಾದ ಶ್ರೀ ಐವನ್ ಡಿ’ಸೋಜಾ ಹಾಗೂ ಡೈಜಿವರ್ಲ್ಡ್ ಮೀಡಿಯಾ ಸಂಸ್ಥಾಪಕ ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ವಾಲ್ಟರ್ ನಂದಳಿಕೆ ಉಪಸ್ಥಿತರಿದ್ದರು. ಜೊತೆಗೆ ಗಣ್ಯ ಅತಿಥಿಗಳು, ವೈದ್ಯರು, ಆರೋಗ್ಯ ತಜ್ಞರು, ಸಮಾಜದ ಮುಖಂಡರು, ಸಮೀಕ್ಷೆಯಲ್ಲಿ ಭಾಗವಹಿಸಿದವರು ಮತ್ತು ಇತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಕಾರ್ಯಕ್ರಮದಲ್ಲಿ ಸಮೀಕ್ಷೆಯ ಪ್ರಮುಖಾಂಶಗಳನ್ನು/ಕಂಡುಹಿಡಿಕೆಗಳನ್ನು ವಿಡಿಯೋ ಪ್ರಸ್ತುತೀಕರಣದ ಮೂಲಕ ಪರಿಚಯಿಸಲಾಯಿತು ಹಾಗೂ ಈ ಪ್ರದೇಶದಲ್ಲಿ ಕ್ಯಾನ್ಸರ್ ತಡೆಗಟ್ಟುವಿಕೆ ಹಾಗೂ ಆರಂಭಿಕ ಪತ್ತೆಯನ್ನು ಇನ್ನಷ್ಟು ಬಲಪಡಿಸಲು ಅಗತ್ಯವಾದ ಕ್ರಮಗಳ ಕುರಿತು ಚರ್ಚೆ ಮತ್ತು ಚಿಂತನೆ ನಡೆಯಿತು.
ಈ ಸಮೀಕ್ಷಾ ವರದಿಯನ್ನು ಕರ್ನಾಟಕ ಸರ್ಕಾರ ಹಾಗೂ ಸಂಬಂಧಿತ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸಲ್ಲಿಸಲಾಗುತ್ತಿದ್ದು, ತನ್ಮೂಲಕ ಆರಂಭಿಕ ಪತ್ತೆ ಮತ್ತು ಕ್ಯಾನ್ಸರ್ ತಡೆಗಟ್ಟುವ ಆರೋಗ್ಯ ಸೇವೆಗಳನ್ನು ವಿಸ್ತರಿಸುವ ನೀತಿಗಳು ಮತ್ತು ಕ್ರಮಗಳಿಗೆ ಮಾರ್ಗದರ್ಶನ ನೀಡುತ್ತವೆ ಎಂಬ ನಿರೀಕ್ಷೆಯಿದೆ.
ಈ ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು ವರದಿ ಮಾಡಲು ಆಯೋಜಕರು, ಪತ್ರಿಕಾ ಮತ್ತು ಮಾಧ್ಯಮ ಪ್ರತಿನಿಧಿಗಳನ್ನು ಆತ್ಮೀಯವಾಗಿ ಆಹ್ವಾನಿಸಿ ಈ ಮಾಹಿತಿಯನ್ನು ವ್ಯಾಪಕವಾಗಿ ಜನಸಾಮಾನ್ಯರಿಗೆ ತಲುಪಿಸುವ ಮೂಲಕ ಕ್ಯಾನ್ಸರ್ ತಪಾಸಣೆ ಮತ್ತು ತಡೆಗಟ್ಟುವ ಆರೋಗ್ಯ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸಲು ಮಾಧ್ಯಮಗಳು ಮಹತ್ವದ ಪಾತ್ರವಹಿಸಬೇಕೆಂದು ಕೋರಿಕೊಂಡರು.
ಈ ಸಮೀಕ್ಷೆಯನ್ನು ಯಶಸ್ವಿಯಾಗಿ ನಡೆಸಲು ಸಹಕರಿಸಿದ ವೈದ್ಯರು, ಸಿಬ್ಬಂದಿ, ಸ್ವಯಂಸೇವಕರು ಹಾಗೂ ಸಮುದಾಯದ ಸದಸ್ಯರ ಪರಿಶ್ರಮವನ್ನು ಡಾ. ಸುರೇಶ್ ರಾವ್, ಸಂಜೀವಿನಿ ಕ್ಯಾನ್ಸರ್ ಸೇವಾ ಟ್ರಸ್ಟ್ನ ಪರವಾಗಿ ಹೃತ್ಪೂರ್ವಕವಾಗಿ ಕೃತಜ್ಞತೆಯಿಂದ ಸ್ಮರಿಸಿದರು.
ಸಂಜೀವಿನಿ ಕ್ಯಾನ್ಸರ್ ಸೇವಾ ಟ್ರಸ್ಟ್: ವಿಶೇಷವಾಗಿ ಆರ್ಥಿಕ ನೆರವು ಮತ್ತು ಜಾಗೃತಿ ಉಪಕ್ರಮಗಳ ಮೂಲಕ ಕರಾವಳಿ ಕರ್ನಾಟಕದ ಕ್ಯಾನ್ಸರ್ ರೋಗಿಗಳನ್ನು ಬೆಂಬಲಿಸಲು ಮೀಸಲಾಗಿರುವ ಒಂದು ಲಾಭರಹಿತ ಸಂಸ್ಥೆಯಾಗಿದೆ. ಮಂಗಳೂರು ಇನ್ಸ್ಟಿಟ್ಯೂಟ್ ಆಫ್ ಆಂಕೋಲಜಿ (M.I.O) ಯೊಂದಿಗೆ ನಿಕಟ ಸಂಬಂಧ ಹೊಂದಿರುವ ಈ ಟ್ರಸ್ಟ್, ಕ್ಯಾನ್ಸರ್ ಚಿಕಿತ್ಸೆಯ ಆರ್ಥಿಕ ಹೊರೆಗಳನ್ನು ಎದುರಿಸುತ್ತಿರುವ ರೋಗಿಗಳಿಗೆ ಸಹಾಯ ಮಾಡುವತ್ತ ಗಮನ ಹರಿಸುತ್ತದೆ.
ಮಂಗಳೂರು ಇನ್ಸ್ಟಿಟ್ಯೂಟ್ ಆಫ್ ಆಂಕೋಲಜಿ (M.I.O): ಕರಾವಳಿ ಕರ್ನಾಟಕದ ಕ್ಯಾನ್ಸರ್ ಸ್ಪೆಷಾಲಿಟಿ ಆಸ್ಪತ್ರೆಯಾಗಿದ್ದು 2011ರಲ್ಲಿ ಮಂಗಳೂರಿನಲ್ಲಿ ಸ್ಥಾಪನೆಯಾಯಿತು. ಇದು ಆಸ್ಪತ್ರೆಗಳು ಮತ್ತು ಆರೋಗ್ಯ ಪೂರೈಕೆದಾರರ ರಾಷ್ಟ್ರೀಯ ಮಾನ್ಯತಾ ಮಂಡಳಿಯಿಂದ (NABH) ಮಾನ್ಯತೆ ಪಡೆದಿದೆ. ಡಾ. ಸುರೇಶ್ ರಾವ್ (ಅಧ್ಯಕ್ಷರು ಮತ್ತು ವ್ಯವಸ್ಥಾಪಕ ಟ್ರಸ್ಟಿ, ಸಂಜೀವಿನಿ ಕ್ಯಾನ್ಸರ್ ಸೇವಾ ಟ್ರಸ್ಟ್ ಹಾಗೂ ನಿರ್ದೇಶಕರು, M.I.O) ಅವರು ಸ್ಥಾಪಿಸಿದ ಎಂ.ಐ.ಓ, ಇಂದು ಸುಧಾರಿತ ತಂತ್ರಜ್ಞಾನ ಮತ್ತು ಆಂಕೋಲಜಿ (ಅರ್ಬುದ ಸಂಬಂಧಿ) ತಜ್ಞರ ತಂಡದೊಂದಿಗೆ ಮಂಗಳೂರಿನ ಪಂಪ್ವೆಲ್ ಮತ್ತು ಕರಂಗಲ್ಪಾಡಿಯಲ್ಲಿ 120 ಹಾಸಿಗೆಗಳ ಸೂಪರ್-ಸ್ಪೆಷಾಲಿಟಿ ಆಸ್ಪತ್ರೆಯಾಗಿ ಬೆಳೆದಿದ್ದು, ವಿಶ್ವದರ್ಜೆಯ, ಕೈಗೆಟುಕುವ ಆರೈಕೆಯನ್ನು ಹಾಗೂ ಸಮಗ್ರ ಆಂಕೋಲಜಿ ಸೇವೆಗಳನ್ನು ನೀಡುತ್ತಿದೆ.

