
ಕಟಪಾಡಿ : ಅವಳಿ ವೀರರಾದ ಕೋಟಿಚೆನ್ನಯರು ನೆಲೆಯೂರಿದ ಐತಿಹ್ಯದ ಕಟಪಾಡಿ ಏಣಗುಡ್ಡೆ ಗರಡಿಯ ಸಮಗ್ರ ಜೀರ್ಣೋದ್ಧಾರ ಪ್ರಕ್ರಿಯೆಯು ಸುಮಾರು 4.5 ಕೋಟಿ ವೆಚ್ಚದಲ್ಲಿ ನಿರ್ಮಿತವಾಗಿದ್ದು ಮೇ 7ರಿಂದ ಮೊದಲ್ಗೊಂಡು ಮೇ 23ರವರೆಗೆ ವಿವಿಧ ಧಾರ್ಮಿಕ ಕ್ರಿಯೆಗಳು ನಡೆಯಲಿವೆ ಎಂದು ಜೀಣೋದ್ಧಾರ ಸಮಿತಿಯ ಪ್ರಧಾನ ಕಾರ್ಯದರ್ಶಿ ಹರೀಶ್ಚಂದ್ರ ಅಮೀನ್ ಹೇಳಿದರು. ಅವರು ಕಟಪಾಡಿ ಏಣಗುಡ್ಡೆ ಶ್ರೀ ಬ್ರಹ್ಮ ಬೈದೆರುಗಳ ಗರಡಿ ಪ್ರತಿಷ್ಠಾಪನೆ ಮತ್ತು ಬ್ರಹ್ಮಕಲಶಾಭಿಷೇಕ ಹಾಗೂ ಕಾಲಾವಧಿ ಜಾತ್ರಾ ಮಹೋತ್ಸವ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ಮಾಹಿತಿ ನೀಡಿದರು.
ಶಿಲಾ ದಾರು ಶಿಲ್ಪಗಳಿಂದ ಅಲಂಕರಿಸಲ್ಪಟ್ಟ ವೈಭವದಿಂದ ಕಂಗೊಳಿಸುವ ಶ್ರೀ ಬ್ರಹ್ಮ ಬೈದೆರುಗಳ ಮತ್ತು ಪರಿವಾರ ಶಕ್ತಿಗಳ ಪುನರ್ ಪ್ರತಿಷ್ಠಾಪನೆ ಹಾಗೂ ಬ್ರಹ್ಮಕಲಶಾಭಿಷೇಕ ಆಗಮೋಕ್ತ ವೈದಿಕ ವಿಧಿಗಳು ವೇದಮೂರ್ತಿ ಮನೋಜ್ ತಂತ್ರಿ ಶಿವಗಿರಿ ಮತ್ತು ವೇದಮೂರ್ತಿ ಮಹೇಶ್ ಶಾಂತಿ ಹೆಜಮಾಡಿ ಇವರ ನೇತೃತ್ವದಲ್ಲಿ ಗರಡಿಯ ಪೂಜಾ ಪೂಜಾರಿ ಇಂಪು ಪೂಜಾರಿ, ಜ್ಯೋತಿಷ್ಯ ಪ್ರವೀಣ ಮೋಹನ್ ಮಾಯಿಪ್ಪಾಡಿ, ವಾಸ್ತುತಜ್ಞ ಪ್ರಮೋದ್ ಕುಮಾರ್ ಕಾರ್ಕಳ ಉಪಸ್ಥಿತಿಯಲ್ಲಿ ತಂತ್ರಿವರೇಣ್ಯರು ಹಾಗೂ ವೇದಜ್ಞ ಋತ್ವಿಜರ ಸಹಕಾರದೊಂದಿಗೆ ನೆರವೇರಲಿದೆ.