Site icon ಉಡುಪಿ ನ್ಯೂಸ್ ಪ್ಲಸ್

ಗಣಹೋಮ ನಡೆಸಿದ ಅಂಗನವಾಡಿ ಕಾರ್ಯಕರ್ತೆಗೆ ಅಮಾನತಿನ ಶಿಕ್ಷೆ ಅನುದಾನವಿಲ್ಲದೆ ಗುದ್ದಲಿಪೂಜೆ ನಡೆಸಿದ ಶಾಸಕರಿಗೆ ಯಾವ ಶಿಕ್ಷೆ ?ಶುಭದರಾವ್

ಕಾರ್ಕಳ : ಗಣಹೋಮದ ನಡೆಸಿ ಧಾರ್ಮಿಕತೆ ಮೆರೆದ ಅಂಗನವಾಡಿ ಕಾರ್ಯಕರ್ತೆಗೆ ಶಾಸಕರ ಒತ್ತಡದ ಮೇಲೆ ಅಮಾನತಿನ ಶಿಕ್ಷಯಾದರೆ, ನಾಯಪೈಸೆ ಅನುದಾನ ತಾರದೆ, ನಿಟ್ಟೆಯಲ್ಲಿ ಜವಳಿ ಪಾರ್ಕ್‌ಗೆ ಗುದ್ದಲಿಪೂಜೆ ನಡೆಸಿದ ಶಾಸಕರಿಗೆ ಯಾವ ಶಿಕ್ಷೆಯಾಗಬೇಕು ? ಎಂದು ಬ್ಲಾಕ್ ಕಾಂಗ್ರೇಸ್ ವಕ್ತಾರ ಶುಭದರಾವ್ ಪ್ರಶ್ನಿಸಿದ್ದಾರೆ. ಪ್ರೋಟೋಕಾಲ್ ಉಲ್ಲಂಘನೆ ಎನ್ನುವ ಕಾರಣ ಸಹಿತ ಕುಕ್ಕುಂದೂರು ಅಂಗನವಾಡಿ ಕಾರ್ಯಕರ್ತೆಯನ್ನು ಶಾಸಕರ ಒತ್ತಡದ ಮೇಲೆ ಅಮಾನತುಗೊಳಿಸಿ ಆದೇಶಿಸಲಾಗಿದೆ. ಇದೇ ಕಾನೂನು ಇತರರಿಗೂ ಅನ್ವಯವಾಗುವುದಾದರೆ, ನಿಟ್ಟೆಯಲ್ಲಿ ಸರಕಾರ ಅನುದಾನವನ್ನೇ ಬಿಡುಗೊಳಿಸದ ಸಂದರ್ಭದಲ್ಲಿ, ಚುನಾವಣೆ ಗಿಮಿಕಿಗಾಗಿ ಗುದ್ದಲಿಪೂಜೆ ನಡೆಸಿದ ಶಾಸಕರು ಹಾಗೂ ಈ ನಿಯಮಬಾಹಿರ ಗುದ್ದಲಿಪೂಜೆಯಲ್ಲಿ ಭಾಗವಹಿಸಿದ ಅಧಿಕಾರಿಗಳಿಗೂ ಸೂಕ್ತ ಶಿಕ್ಷೆಯಾಗಬೇಕು. ನಿಟ್ಟೆಯಲ್ಲಿ ಗುದ್ದಲಿಪೂಜೆ ಸಂದರ್ಭ ಅಂದಿನ ಸರಕಾರ ೨೦ ಕೋಟಿ ರೂ. ಅನುದಾನವನ್ನು ಕಾದಿರಿಸಿದೆ ಎಂದು ಶಾಸಕರು ಹೇಳಿದ್ದರು. ಅಂದಿನ ಸರಕಾರ ಆ ಅನುದಾನವನ್ನು ಕಾದಿರಿಸಿದ್ದು ನಿಜವೇ ? ಎನ್ನುವುದನ್ನು ಪ್ರಶ್ನಿಸುತ್ತಿದ್ದೇವೆ. ಇತ್ತೀಚಿಗೆ ಕಾಂಗ್ರೆಸ್ ನೇತೃತ್ವದ ಸರಕಾರ ಸಚಿವ ಸಂಪುಟದಲ್ಲಿ ೨೭.೯೭ಕೋಟಿ ರೂ. ಅಂದಾಜು ಮೊತ್ತದಲ್ಲಿ ಅಭಿವೃದ್ದಿಪಡಿಸಲು ಸಚಿವ ಸಂಪುಟದಲ್ಲಿ ಆಡಳಿತಾತ್ಮಕ ಅನುಮೋದನೆ ನೀಡಿರುತ್ತದೆ. ಹಾಗಾದರೆ ಅಂದಿನ ಸರಕಾರದ ಅವಧಿಯಲ್ಲಿ ಶಾಸಕರು ಕಾದಿರಿಸಿದ ೨೦ ಕೋಟಿ ರೂ. ಅನುದಾನ ಎಲ್ಲಿ ಹೋಗಿದೆ ?
ನಿಟ್ಟೆಯಲ್ಲಿ ಕೇವಲ ಗುದ್ದಲಿಪೂಜೆಗೆ ಸೀಮಿತವಾಗಿದ್ದ ಜವಳಿ ಪಾರ್ಕ್ನ ಅಭಿವೃದ್ದಿಗೆ ನಮ್ಮ ಕಾಂಗ್ರೆಸ್ ಸರಕಾರ ಮುಂದಾಗಿದ್ದು, ಅನುದಾನವನ್ನು ನೀಡುವ ಪ್ರಯತ್ನ ನಡೆಸಿರುವುದು ಅಭಿನಂದನೀಯ. ಅದಕ್ಕಾಗಿ ಸಿದ್ದರಾಮಯ್ಯ ನೇತೃತ್ವದ ಸರಕಾರವನ್ನು ಕಾರ್ಕಳದ ಕಾಂಗ್ರೆಸ್ ಅಭಿನಂದಿಸುತ್ತದೆ. ಆದರೆ ಅನುದಾನವಿಲ್ಲದೆ, ಜನತೆಯನ್ನು ಮರಳು ಮಾಡುವ ಉದ್ದೇಶದಿಂದ ನಡೆದ ಗುದ್ದಲಿಪೂಜೆ ಮತ್ತು ಅದರಲ್ಲಿ ಭಾಗವಹಿಸಿದ ಅಧಿಕಾರಿಗಳ ವಿರುದ್ದ ಸರಕಾರ ಗಂಭೀರವಾಗಿ ಪರಿಗಣಿಸುವಂತೆ ಕಾರ್ಕಳ ಕಾಂಗ್ರೆಸ್ ಒತ್ತಾಯಿಸುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Exit mobile version