Site icon ಉಡುಪಿ ನ್ಯೂಸ್ ಪ್ಲಸ್

ಅನ್ಯಾಯದ ವಿರುದ್ಧ ಒಂದಾಗಿ ಸೆಟೆದು ನಿಲ್ಲಿರಿ’: ವಿಮೆನ್ ಇಂಡಿಯಾ ಮೂವ್ಮೆಂಟ್ ರಾಷ್ಟ್ರೀಯ ಜಾಗ್ರತಿ ಅಭಿಯಾನ

ಉಡುಪಿ –ವಿಮೆನ್ ಇಂಡಿಯಾ ಮೂವ್ಮೆಂಟ್ ವತಿಯಿಂದ “ಅನ್ಯಾಯದ ವಿರುದ್ಧ ಒಂದಾಗಿ ಸೆಟೆದು ನಿಲ್ಲಿರಿ” ಎಂಬ ಘೋಷಣೆಯೊಂದಿಗೆ ದೇಶದಾದ್ಯಂತ ರಾಷ್ಟ್ರೀಯ ಅಭಿಯಾನವನ್ನು ಹಮ್ಮಿಕೊಂಡಿದ್ದು, ಇದರ ಪ್ರಯುಕ್ತ ಕರ್ನಾಟಕ ರಾಜ್ಯಾದ್ಯಂತ ಸೆಮಿನಾರ್, ವೆಬಿನಾರ್, ಬಿತ್ತಿ ಪತ್ರ ಹಂಚಿಕೆ, ಕುಟುಂಬ ಸಮ್ಮಿಲನ, ಪೋಸ್ಟರ್ ಕ್ಯಾಂಪೇನ್ ಹಾಗೂ ಇನ್ನೂ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ ಎಂದು ವಿಮ್ ಉಡುಪಿ ಜಿಲ್ಲಾಧ್ಯಕ್ಷೆ ನಾಝಿಯ ನಸ್ರುಲ್ಲಾ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಭಾರತದಲ್ಲಿ ಮಹಿಳೆಯರ ಪರಿಸ್ಥಿತಿಯು ತೀರಾ ಶೋಚನೀಯವಾಗಿದೆ. ಇಂದು ಮಹಿಳೆಯರು ಆರ್ಥಿಕ ,ಶೈಕ್ಷಣಿಕ, ಸಾಮಾಜಿಕ, ರಾಜಕೀಯ ಕ್ಷೇತ್ರದಲ್ಲೂ ಮುಂದುವರಿಯುತ್ತಿದ್ದರೂ ಈ ಎಲ್ಲಾ ಕ್ಷೇತ್ರದಲ್ಲಿ ಆಕೆಯು ನಿರಂತರವಾಗಿ ದೌರ್ಜನ್ಯ ಕ್ಕೊಳಗಾಗುತ್ತಿದ್ದಾಳೆ. ಸರ್ಕಾರದ ಜನವಿರೋಧಿ ಆಡಳಿತದಿಂದಾಗಿ ದೇಶದ ಕಾನೂನು ಸುವ್ಯವಸ್ಥೆ, ಕಾನೂನು ದುರುಪಯೋಗದ ನೇರ ಪರಿಣಾಮವನ್ನು ಅನುಭವಿಸುತ್ತಿರುವುದು ಈ ದೇಶದ ಮಹಿಳಾ ವರ್ಗವಾಗಿದೆ ಎಂಬುದು ವಿಷಾದನೀಯ. ವಿಶ್ವದಲ್ಲೇ ಅತಿ ದೊಡ್ಡ ಸುಂದರವಾದ ಪ್ರಜಾಪ್ರಭುತ್ವ ವ್ಯವಸ್ಥೆ ಎಂಬ ಹೆಗ್ಗಳಿಕೆ ಇರುವಂತಹ ಭಾರತದಲ್ಲಿ ನಿಷ್ಪಕ್ಷಪಾತ, ನೇರ ಜನಪರವಾದಂತಹ ಆಡಳಿತ ವ್ಯವಸ್ಥೆ ಇದ್ದರೆ ಮಾತ್ರ ಈ ದೇಶದಲ್ಲಿ ದೌರ್ಜನ್ಯಕ್ಕೊಳಪಟ್ಟಂತಹ ಮಹಿಳಾ ವರ್ಗಕ್ಕೆ ನ್ಯಾಯ ದೊರಕಲು ಸಾಧ್ಯ ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಇದಕ್ಕಿರುವ ಪರಿಹಾರವೆಂದರೆ ಜಾತಿ ಮತ ಭೇದವನ್ನು ಬಿಟ್ಟು ಮಹಿಳೆಯರ ಸಾಮಾಜಿಕ, ರಾಜಕೀಯ, ಶೈಕ್ಷಣಿಕ ಸಬಲೀಕರಣಕ್ಕಾಗಿ ಶ್ರಮಿಸುವ ಜೊತೆಗೆ ರಕ್ಷಣೆಯ ಖಾತ್ರಿಗಾಗಿ ಹೆಗಲಿಗೆ ಹೆಗಲು ಕೊಟ್ಟು ಒಗ್ಗಟ್ಟಾಗಿ ಹೋರಾಟವನ್ನು ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ ವಿಮೆನ್ ಇಂಡಿಯಾ ಮೂವ್ಮೆಂಟ್ “ಅನ್ಯಾಯದ ವಿರುದ್ಧ ಒಂದಾಗಿ ಸೆಟೆದು ನಿಲ್ಲಿರಿ” ಎಂಬ ಘೋಷಣೆಯೊಂದಿಗೆ ದೇಶದಾದ್ಯಂತ ರಾಷ್ಟ್ರೀಯ ಅಭಿಯಾನವನ್ನು ಹಮ್ಮಿಕೊಂಡಿದ್ದೇವೆ ಎಂದು ಹೇಳಿದ್ದಾರೆ.
ಈ ಸಂದರ್ಭದಲ್ಲಿ ಉಡುಪಿ ವಿಮ್ ನ ಪ್ರಧಾನ ಕಾರ್ಯದರ್ಶಿಯಾದ ರಹೀಮ ಕಾಪು ಜೊತೆ ಕಾರ್ಯದರ್ಶಿಯಾದ ಹಾಜಿರ ಉಚ್ಚಿಲ ,ಸಮಿತಿ ಸದಸ್ಯರು , ಅಸೆಂಬ್ಲಿಯ ಪದಾಧಿಕಾರಿಗಳು ಉಪಸ್ಥಿತಿರಿದ್ದರು.

Exit mobile version