ಮಂಗಳೂರು :ನಗರದ ವಿವಿಧೆಡೆ ದೇವಸ್ಥಾನ ದರ್ಗಾಗಳಲ್ಲಿ ಜಾತ್ರೆ ಮಹೋತ್ಸವ ಉರೂಸ್ ನಂತ ಉತ್ಸವಗಳು ನಡೆಯುತ್ತಿದ್ದು ಕೆಲವೆಡೆ ಮತೀಯ ಸಂಘಟನೆಗಳ ಹೆಸರಿನಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ನಿರ್ಬಂಧ ಹಾಕಿರುವ ಬ್ಯಾನರ್ ಗಳನ್ನು ಹಾಕಿ ಸಮಾಜದಲ್ಲಿ ಅಶಾಂತಿ ಸ್ರಷ್ಟಿಸಲು ಪ್ರಯತ್ನಿಸುತ್ತಿದೆ. ಸಂತೆ ವ್ಯಾಪಾರಿಗಳು ಎಲ್ಲಾ ಜಾತ್ರೆ,ಉರೂಸ್, ಮತ್ತಿತರ ಉತ್ಸವಗಳಲ್ಲಿ ವ್ಯಾಪಾರ ಮಾಡಿ ಜೀವನ ಸಾಗಿಸುವವರು ಈ ರೀತಿಯ ಕೋಮು ವಿಭಜಕ ನೀತಿಗಳು ಬಡ ಸಂತೆ ವ್ಯಾಪಾರಿಗಳು ಜೀವನ ನಿರ್ವಹಣೆಗೆ ತೊಂದರೆ ಆಗುತ್ತಿದೆ. ತಾ:24-1-2023 ರಿಂದ ತಾ: 29-1-2023 ರವರೆಗೆ ರಥಬೀದಿಯ ವೆಂಕಟರಮಣ ದೇವಸ್ಥಾನದಲ್ಲಿ ರಥೋತ್ಸವ ಪ್ರಯುಕ್ತ ನಡೆಯುವ ಕಾರ್ಯಕ್ರಮದ ಸಂದರ್ಭದಲ್ಲಿ ನಗರದ ಮುಸ್ಲಿಂ ಸಂತೆ ವ್ಯಾಪಾರಿಗಳು ವ್ಯಾಪಾರ ಮಾಡದಂತೆ ನಿಷೇಧಿಸುವ ಸುದ್ದಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.ಈ ರೀತಿಯ ಶಾಂತಿ ಕದಡುವ ಸುದ್ದಿ ಹಬ್ಬಿಸುವ ಬ್ಯಾನರ್ ಕಟ್ಟಿ ಅಶಾಂತಿ ಸ್ರಷ್ಟಿಸುವ ಶಕ್ತಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಂಡು ಸಂತೆ ವ್ಯಾಪಾರಿಗಳಿಗೆ ಸೂಕ್ತ ರಕ್ಷಣೆ ಒದಗಿಸಬೇಕೆಂದು ದಕ್ಷಿಣ ಕನ್ನಡ ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಶ್ರೇಯೋಭಿವೃದ್ಧಿ ಸಂಘ ಒತ್ತಾಯಿಸಿದೆ.
ಕಳೆದ ಅನೇಕ ವರ್ಷಗಳಿಂದ ಸಂತೆ ಮತ್ತು ಉತ್ಸವ ವ್ಯಾಪಾರಿಗಳು ಹಿಂದೂ ಮುಸ್ಲಿಂ ಕ್ರೈಸ್ತ ಎಂಬ ಭೇದಭಾವವಿಲ್ಲದೆ ಉರೂಸ್, ಜಾತ್ರೆ ಎಂಬ ವ್ಯತ್ಯಾಸಗಳಿಲ್ಲದೆ ಅನ್ಯೋನ್ಯತೆಯಿಂದ ವ್ಯಾಪಾರ ಮಾಡಿಕೊಂಡು ಬಂದಿರುವ ಪರಂಪರೆ ಇದೆ. ಸಂತೆ ವ್ಯಾಪಾರಿಗಳು ಸರ್ವಧರ್ಮದ ಜನರ ಸಕಲ ದೇವರ ಸನ್ನಿಧಿಯಲ್ಲಿ ವ್ಯಾಪಾರ ಮಾಡಿ ಬದುಕು ಸಾಗಿಸುವವರು ಈ ರೀತಿಯ ವ್ಯಾಪಾರದಲ್ಲಿ ಕೋಮು ಭಾವನೆ ಕೆರಳಿಸಿ ವಿಭಜಿಸಿ ರಾಜಕೀಯ ಮಾಡುವುದನ್ನು ಸಂಘವು ಖಂಡಿಸುತ್ತದೆ. ಸಂತೆ ಮತ್ತು ಉತ್ಸವ ವ್ಯಾಪಾರಿಗಳು ಬೀದಿಬದಿ ವ್ಯಾಪಾರಿಗಳ ಸಂರಕ್ಷಣೆ ಮತ್ತು ನಿಯಂತ್ರಣ ಕಾಯಿದೆ 2014 ಮತ್ತು ಕರ್ನಾಟಕ ಸರಕಾರದ ಅಧಿ ನಿಯಮಗಳ ಅಡಿಯಲ್ಲಿ ಕಾನೂನಿನ ಮಾನ್ಯತೆಯನ್ನು ಪಡೆದವರಾಗಿದ್ದು ಅವರ ಹಕ್ಕುಗಳ ರಕ್ಷಣೆಯನ್ನು ಜಿಲ್ಲಾಡಳಿತ ಮಾಡಬೇಕಿದೆ. ಆದುದರಿಂದ
ಬಡ ವ್ಯಾಪಾರಿಗಳ ಹೊಟ್ಟೆ ಹೊಡೆಯುವವರ ವಿರುದ್ಧ ಕಠಿಣ ಕಾನೂನು ಕ್ರಮ ಜರಗಿಸಿ ಸಂತೆ ವ್ಯಾಪಾರಿಗಳಿಗೆ ಅವರ ಹಕ್ಕುಗಳನ್ನು ರಕ್ಷಣೆ ಮಾಡಲು ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು ಸಂತೆ ಮತ್ತು ಉತ್ಸವ ವ್ಯಾಪಾರಿಗಳಿಗೆ ಧರ್ಮದ ಹೆಸರಿನಲ್ಲಿ ತೊಂದರೆ ಮತ್ತು ಕಿರುಕುಳ ಕೊಟ್ಟಲ್ಲಿ ಸಂಘದ ನೇತೃತ್ವದಲ್ಲಿ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಹರೀಶ್ ಪೂಜಾರಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ಸಂಘದ ಗೌರವಾಧ್ಯಕ್ಷರಾದ ಬಿ.ಕೆ.ಇಮ್ತಿಯಾಝ್ ಅವರ ನೇತೃತ್ವದ ನಿಯೋಗವು ಪೊಲೀಸ್ ಆಯುಕ್ತರು ಮತ್ತು ಜಿಲ್ಲಾಧಿಕಾರಿ ನಗರಪಾಲಿಕೆ ಆಯುಕ್ತರು, ತಹಶೀಲ್ದಾರ್ ಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು ನಿಯೋಗದಲ್ಲಿ ಸಂಘದ ಅಧ್ಯಕ್ಷರಾದ ಮುಹಮ್ಮದ್ ಮುಸ್ತಫಾ, ಪ್ರಧಾನ ಕಾರ್ಯದರ್ಶಿ ಹರೀಶ್ ಪೂಜಾರಿ, ಖಜಾಂಜಿ ಮಹಮ್ಮದ್ ಆಸೀಫ್. ಮುಖಂಡರಾದ ಆದಂ ಬಜಾಲ್, ಮುಜಾಫರ್, ನೌಶಾದ್ ಉಳ್ಳಾಲ, ಇಸ್ಮಾಯಿಲ್ ಉಳ್ಳಾಲ ಮುಂತಾದವರಿದ್ದರು.
