
ಕಾಪು : ಗ್ರಾಹಕರ ಸೋಗಿನಲ್ಲಿ ಜುವೆಲ್ಲರಿ ಶಾಪ್ಗೆ ತೆರಳಿ ಕಳ್ಳತನ ಮಾಡುತ್ತಿದ್ದ ನಾಲ್ವರು ಅಂತಾರಾಜ್ಯ ಕಳ್ಳರನ್ನು ಶಿರ್ವ ಪೊಲೀಸರು ಬಂಧಿಸಿದ್ದಾರೆ. ತಮಿಳುನಾಡಿನ ದಿಂಡಿಗಲ್ ಜಿಲ್ಲೆಯ ಶನಾಬೆಲ್ಲಾ ಬಿ.(45), ಮೊಹಮ್ಮದ್ ಆಲಿ (32), ಅಶುರ್ ಆಲಿ (32)ಮತ್ತು ಗಣೇಶ್ ಕುಮಾರ್ ಬಂಧಿತರು. ಬಂಧಿತರಿಂದ ರೂ. 1,49,000 ಮೌಲ್ಯದ 28.882 ಗ್ರಾಂ ತೂಕದ ಚಿನ್ನದ ಗಟ್ಟಿ, ರೂ. 1,17,000 ಮೌಲ್ಯದ 26 ಗ್ರಾಂ ಚಿನ್ನದ ಗಟ್ಟಿ ಮತ್ತು ಒಂದು ಮೋಟಾರ್ಬೈಕನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಮಲೆಯಾಳ ಮತ್ತು ತಮಿಳಿನಲ್ಲಿ ಮಾತನಾಡುತ್ತಿದ್ದ ಅಪರಿಚಿತರಿಬ್ಬರು ಗ್ರಾಹಕರ ಸೋಗಿನಲ್ಲಿ ಶಿರ್ವ ಪೇಟೆಯಲ್ಲಿನ ಜುವೆಲರ್ ಅಂಗಡಿಗೆ ಬಂದು ಜೂ. 6ರಂದು ಮಧ್ಯಾಹ್ನ 1.49 ಲ.ರೂ ಮೌಲ್ಯದ 28.79 ಗ್ರಾಂ. ಚಿನ್ನದ ನೆಕ್ಸೆಸ್ ಕಳವು ಮಾಡಿದ್ದರು. ಮಾಲಕರು ಅಂಗಡಿಯ ಸಿಸಿ ಕೆಮರಾ ಪರಿಶೀಲಿಸಿದಾಗ ಅಪರಿಚಿತ ಗ್ರಾಹಕರು ಚಿನ್ನದ ನೆಕ್ಲಸನ್ನು ಕಳ್ಳತನ ಮಾಡುವ ಕೃತ್ಯ ಸಿಸಿ ಕೆಮರಾದಲ್ಲಿ ಸೆರೆಯಾಗಿತ್ತು. ಅದರಂತೆ ಕೆ.ವಿವೇಕಾನಂದ ಆಚಾರ್ಯ ಜೂ. 9ರಂದು ಶಿರ್ವ ಠಾಣೆಯಲ್ಲಿ ದೂರು ದಾಖಲಾಗಿತ್ತು. ಪ್ರಕರಣದ ತನಿಖೆ ಪ್ರಾರಂಭಿಸಿದ ಶಿರ್ವ ಪೊಲೀಸರು ಆರೋಪಿಗಳ ಪತ್ತೆ ಕಾರ್ಯದಲ್ಲಿ ಯಶಸ್ವಿಯಾಗಿದ್ದರೆ.
