ಸಾಣೂರು, ಕಾರ್ಕಳ (ಸೆ. 18): ಮಂಗಳೂರಿನ ದೇರಳಕಟ್ಟೆಯಲ್ಲಿ ನಡೆದ ‘ನಿಟ್ಟೆ ಕ್ಲೈಮೇಟ್ ಆಕ್ಷನ್ ಪ್ರೋಗ್ರಾಮ್’ (NCAP 2026) ರಾಜ್ಯಮಟ್ಟದ ವಿಜ್ಞಾನ ಮೇಳದಲ್ಲಿ ಸಾಣೂರಿನ ರಾಜೇಶ್ವರಿ ನ್ಯಾಷನಲ್ ಸ್ಕೂಲ್ ಹಾಗೂ ಪಿ.ಯು. ಕಾಲೇಜು ದ್ವಿತೀಯ ಸ್ಥಾನ ಪಡೆದು ಗಮನಾರ್ಹ ಸಾಧನೆ ಮಾಡಿದೆ.
ಸಂಸ್ಥೆಯ ವಿದ್ಯಾರ್ಥಿಗಳಾದ ಸಾವನ್ ಕುಮಾರ್ ಟಿ.ವಿ., ಅದಿತ್ ಶೆಟ್ಟಿ ಹಾಗೂ ಚಿರಾಗ್ ದೇವಾಡಿಗ ಅವರು ಸಿದ್ಧಪಡಿಸಿದ ‘ಪಾಚಿ ಜೈವಿಕ ರಿಯಾಕ್ಟರ್ (Algae Bioreactor)’ ಕಾರ್ಯಕಾರಿ ಮಾದರಿಗೆ ಈ ಪ್ರಶಸ್ತಿ ಲಭಿಸಿದೆ. ಇಂಗಾಲದ ಪ್ರಮಾಣವನ್ನು ತಗ್ಗಿಸುವಲ್ಲಿ ಹಾಗೂ ಹವಾಮಾನ ಬದಲಾವಣೆಯ ಸವಾಲಿಗೆ ಪಾಚಿ ತಂತ್ರಜ್ಞಾನವು ಹೇಗೆ ಸುಸ್ಥಿರ ಪರಿಹಾರವನ್ನು ಒದಗಿಸಬಲ್ಲದು ಎಂಬುದನ್ನು ವಿದ್ಯಾರ್ಥಿಗಳು ವೈಜ್ಞಾನಿಕವಾಗಿ ಪ್ರದರ್ಶಿಸಿದರು. ಅವರ ಪ್ರಸ್ತುತಿ ಹಾಗೂ ಮಾದರಿಯು ತೀರ್ಪುಗಾರರ ಮೆಚ್ಚುಗೆಗೆ ಪಾತ್ರವಾಯಿತು.
ವಿದ್ಯಾರ್ಥಿಗಳ ಸಂಶೋಧನಾ ಮನೋಭಾವ, ವೈಜ್ಞಾನಿಕ ಚಿಂತನೆ ಹಾಗೂ ನಾವೀನ್ಯತೆಗೆ ಸಂಸ್ಥೆಯ ಅಧ್ಯಕ್ಷರು, ಆಡಳಿತ ಮಂಡಳಿ, ಪ್ರಾಂಶುಪಾಲರು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಅಭಿನಂದನೆ ಸಲ್ಲಿಸಿದ್ದಾರೆ.

