Site icon ಉಡುಪಿ ನ್ಯೂಸ್ ಪ್ಲಸ್

ಕೇಂದ್ರದ ಮೋದಿ ಸರಕಾರದಿಂದ ಜನರಿಗೆ ಗ್ಯಾಸ್ ಸಿಲಿಂಡರ್‌ನ ಶಾಕ್ : ರಮೇಶ್ ಕಾಂಚನ್.

ಪಂಚ ರಾಜ್ಯಗಳ ಚುನಾವಣೆ ಮುಗಿಯುವ ತನಕ ಕಾದು ಏಕಾಏಕಿ ವಾಣಿಜ್ಯ ಗ್ಯಾಸ್ ಸಿಲಿಂಡರ್ ದರವನ್ನು ರೂ.993/- ಭಾರೀ ಏರಿಕೆ ಮಾಡುವ ಮೂಲಕ ಕೇಂದ್ರದ ಮೋದಿ ಸರಕಾರವು ದೇಶದ ಜನತೆಗೆ ಶಾಕ್ ನೀಡಿದ್ದು ಇದಕ್ಕೆ ಬಿಜೆಪಿ ನಾಯಕರು ಸ್ಪಷ್ಟನೆ ನೀಡಲಿ ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ರಮೇಶ್ ಕಾಂಚನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಯುದ್ದವನ್ನು ನೆಪವಾಗಿರಿಸಿಕೊಂಡ ಕೇಂದ್ರದ ಬಿಜೆಪಿ ಸರಕಾರವು ಗ್ಯಾಸ್ ಪೊರೈಕೆಯಲ್ಲಿ ಸಮಸ್ಯೆ ಮಾಡಿದ್ದಲ್ಲದೆ ಮಾರ್ಚ್ ತಿಂಗಳಲ್ಲಿ ರೂ.114ಕ್ಕೆ ಏರಿಸಿದರೆ ಏಪ್ರಿಲ್‌ನಲ್ಲಿ ಗ್ಯಾಸ್ ಸಿಲಿಂಡರ್ ಬೆಲೆಯನ್ನು ರೂ.195ಕ್ಕೆ ಏರಿಸಿ ಈಗ ಪುನಃ ಮೇ ತಿಂಗಳಿಗೆ ವಾಣಿಜ್ಯ ಸಿಲಿಂಡರ್ ಬೆಲೆಯನ್ನು ಮತ್ತೆ ರೂ.993ಕ್ಕೆ ಏರಿಸಿರುವುದರ ಮೂಲಕ ನರೇಂದ್ರ ಮೋದಿಯವರು ಬೆಲೆ ಏರಿಕೆಯಲ್ಲಿ ನೂತನ ವಿಶ್ವ ದಾಖಲೆಯನ್ನು ನಿರ್ಮಿಸಿದ್ದಾರೆ.

ವಾಣಿಜ್ಯ ಬಳಕೆಯ ಎಲ್.ಪಿ.ಜಿ ಸಿಲಿಂಡರ್ ಬೆಲೆಯಲ್ಲಿ ರೂ.993ಗಳಷ್ಟು ಭಾರಿ ಏರಿಕೆ ಕಂಡಿದ್ದು ಇದರಿಂದ ಹೋಟೆಲ್ ಮಾಲೀಕರಿಗೆ ಮತ್ತು ಜನಸಾಮಾನ್ಯರಿಗೆ ಮತ್ತೊಂದು ಆಘಾತ ನೀಡಿದೆ. ಈ ಬೆಲೆ ಏರಿಕೆಯು ಹೋಟೆಲ್ ಉದ್ಯಮದ ಮೇಲೆ ತೀವ್ರ ಪರಿಣಾಮ ಬೀರಲಿದ್ದು ಊಟ, ತಿಂಡಿ ಮತ್ತು ಪಾನೀಯಗಳ ಬೆಲೆಗಳು ಹೆಚ್ಚಾಗುವ ಅನಿವಾರ್ಯತೆ ಸೃಷ್ಟಿಯಾಗಿದೆ. ಇದರಿಂದ ಸಾಮಾನ್ಯ ಜನರು ಪರಿಸ್ಥಿತಿ ಇನ್ನಷ್ಟು ಕೆಟ್ಟ ಹಂತಕ್ಕೆ ತಲುಪಲಿದ್ದು ಬಿಜೆಪಿಗರ ನಾಟಕಕ್ಕೆ ಜನರು ಬೀದಿಗೆ ಬಂದು ಪ್ರತಿಭಟಿಸುವ ದಿನ ದೂರವಿಲ್ಲ.

ಹಿಂದೆಲ್ಲಾ ಕಾಂಗ್ರೆಸ್ ಸರಕಾರ ಬೆಲೆ ಏರಿಕೆ ಮಾಡಿದಾಗ ಶೋಭಾ ಕರಂದ್ಲಾಜೆ, ಸ್ಮೃತಿ ಇರಾನಿ ಸಹಿತ ಬಿಜೆಪಿ ಮಹಿಳಾ ಮಣಿಗಳು ರಸ್ತೆ ಮಧ್ಯ ಮಲಗಿ ಉರುಳು ಸೇವೆ ಮಾಡುತ್ತಿದ್ದವರು ಈಗ ಮೌನವಾಗಿದ್ದಾರೆ. ವಾಣಿಜ್ಯ ಸಿಲಿಂಡರ್ ಬೆಲೆ ಏರಿಸಿದಂತೆ ಗುಟ್ಟಲ್ಲಿ ಮನೆ ಬಳಕೆ ಸಿಲಿಂಡರ್ ಬೆಲೆಯನ್ನು ಕೂಡ ಸದ್ಯದಲ್ಲಿಯೇ ಏರಿಸಲಿದ್ದು ಜನರಿಗೆ ಇವರ ನಾಟಕಗಳು ಅರ್ಥವಾಗಿದ್ದು ಸೂಕ್ತ ಸಮಯದಲ್ಲಿ ಸೂಕ್ತ ಉತ್ತರ ನೀಡಲಿದ್ದಾರೆ. ಬಿಜೆಪಿಗರಿಗೆ ಮಾನ ಮರ್ಯದೆ ಎನ್ನುವುದು ಸ್ವಲ್ಪವಾದರೂ ಇದ್ದಲ್ಲಿ ಏರಿಸಿರುವ ಸಿಲಿಂಡರ್ ಬೆಲೆಯನ್ನು ಕೂಡಲೇ ಇಳಿಸಲಿ ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ರಮೇಶ್ ಕಾಂಚನ್ ಪತ್ರಿಕಾ ಪ್ರಕಟಣೆಯ ಮೂಲಕ ಆಗ್ರಹಿಸಿದ್ದಾರೆ.

Exit mobile version