ಪಡುಬಿದ್ರಿ: ಕರಾವಳಿ ಭಾಗದ ಇತಿಹಾಸದಲ್ಲೇ 11 ತಿಂಗಳಿನಲ್ಲಿ ಜೀರ್ಣೋದ್ಧಾರ ಕಾರ್ಯ ನಡೆದು ಪುನರ್ ನಿರ್ಮಾಣಗೊಂಡ ದೇವಾಲಯ ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಪಡುಬಿದ್ರಿ ಗ್ರಾಮ ದೇವಳ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ಎಪ್ರಿಲ್ 23 ಗುರುವಾರದಿಂದ ಮೇ 14 ಗುರುವಾರದವರೆಗೆ ಶ್ರೀ ಮಹಾಲಿಂಗೇಶ್ವರ ಹಾಗೂ ಶ್ರೀ ಮಹಾಗಣಪತಿ ದೇವರ ಪುನಃಪ್ರತಿಷ್ಠೆ, ಅಷ್ಟಬಂಧ ಬ್ರಹ್ಮಕಲಶಾಭಿಷೇಕ ಹಾಗೂ ವಾರ್ಷಿಕ ಮಹಾರಥೋತ್ಸವವು ಶ್ರೀ ಕ್ಷೇತ್ರದ ತಂತ್ರಿಗಳಾದ ಉಡುಪಿ ಕೊಡವೂರಿನ ಕಂಬ್ಳೆಕಟ್ಟ ಶ್ರೀ ರಾಧಾಕೃಷ್ಣ ಉಪಾಧ್ಯಾಯರ ನೇತೃತ್ವದಲ್ಲಿ ಯಜ್ಞ ಪುರೋಹಿತರ ಸಮೂಹದ ಸಹಭಾಗಿತ್ವದಲ್ಲಿ ದೇಶ ವಿದೇಶಗಳಿಂದ ಆಗಮಿಸುವ ಭಕ್ತಾದಿಗಳ ಸಮ್ಮುಖ ಸಂಪನ್ನಗೊಳ್ಳಲಿದೆ ಎಂದು ಶ್ರೀ ಕ್ಷೇತ್ರದ ಜೀರ್ಣೋದ್ದಾರ ಮತ್ತು ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷರು ಹಾಗೂ ಬೆಂಗಳೂರು ಉದ್ಯಮಿಗಳಾದ ಡಾ.ಕೆ.ಪ್ರಕಾಶ್ ಶೆಟ್ಟಿ ಶ್ರೀ ದೇವಳದಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಎ.23 ಗುರುವಾರ ಬೆಳಿಗ್ಗೆ 10 ಗಂಟೆಗೆ ದಾನಿಗಳಿಂದ ಶ್ರೀದೇವರುಗಳಿಗೆ ಸಮರ್ಪಿಸಲ್ಪಡುವ ದಿವ್ಯಾಭರಣಗಳು ಹಾಗೂ ಇತರ ಪರಿಕರಗಳ ಶೋಭಾಯಾತ್ರೆಯು ಪಡುಬಿದ್ರಿ ಗುಂಡ್ಲಾಡಿಕಟ್ಟೆಯಿಂದ ಶ್ರೀದೇವಳಕ್ಕೆ ಆಗಮಿಸಲಿದೆ. ಸಂಜೆ ೫ ಗಂಟೆಗೆ ನಡೆಯುವ ಸಾಮೂಹಿಕ ದೇವತಾ ಪ್ರಾರ್ಥನೆಯೊಂದಿಗೆ ಬ್ರಹ್ಮಕಲಶೋತ್ಸವ ಸಂಭ್ರಮಕ್ಕೆ ವಿದ್ಯುಕ್ತ ಚಾಲನೆ ದೊರೆಯಲಿದೆ.
ಎ.29-30 ರಂದು ಶ್ರೀ ದೇವರ ಪ್ರತಿಷ್ಠೆ ಹಾಗೂ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಶ್ರೀ ಮಹಾಲಿಂಗೇಶ್ವರ ದೇವರ ಪ್ರತಿಷ್ಠೆ ಮತ್ತು ಶ್ರೀ ಗಣಪತಿ ದೇವರ ಬಿಂಬ ಪ್ರತಿಷ್ಠೆ ನಡೆಯಲಿದೆ. ಮೇ 2 ಶನಿವಾರದಂದು
ಶ್ರೀ ಮಹಾಲಿಂಗೇಶ್ವರ ದೇವರಿಗೆ ಬ್ರಹ್ಮಕುಂಭಾಭಿಷೇಕ, ಮೇ 3 ಭಾನುವಾರ ಬೆಳಿಗ್ಗೆ ಶ್ರೀ ಮಹಾಗಣಪತಿ ದೇವರಿಗೆ ಬ್ರಹ್ಮಕುಂಭಾಭಿಷೇಕವು ನಾನಾ ಧಾರ್ಮಿಕ ವಿಧಿಗಳೊಂದಿಗೆ ನಡೆಯಲಿದೆ ಎಂದರು.
ಈ ಸಂದರ್ಭದಲ್ಲಿ ಆನುವಂಶಿಕ ಮೊಕ್ತೇಸರ ರತ್ನಾಕರರಾಜ ಅರಸು ಕಿನ್ನಕ್ಕ ಬಲ್ಲಾಳ್,ಪೇಟೆಮನೆ ಭವಾನಿ ಶಂಕರ್ ಹೆಗ್ಡೆ, ರವಿಂದ್ರ ಜಿ ಹೆಗ್ಡೆ,
ಪ್ರಧಾನ ಕಾರ್ಯದರ್ಶಿ ಮುರಳೀನಾಥ್ ಶೆಟ್ಟಿ, ಸ್ವಾಗತ ಸಮಿತಿಯ ಸಂಚಾಲಕರಾದ ನವೀನ್ ಜೆ,ಶೆಟ್ಟಿ ಸಂತೋಷ್ ಕುಮಾರ್ ಶೆಟ್ಟಿ ಪಲ್ಲವಿ,ಜಯ ಶೆಟ್ಟಿ ಪದ್ರ ಮಾದವ ಸಿ ಶೆಟ್ಟಿ ಪಡುಬಿದ್ರಿ, ವೈ.ಸುಕುಮಾರ್, ವಿಶ್ವಾಸ ಅಮೀನ್, ಶಶಿಕಾಂತ್ ಪಡುಬಿದ್ರೆ, ಪ್ರಶಾಂತ ಶೆಣೈ, ಗುರುಪ್ರಸಾದ್ ರಾವ್, ಅಶೋಕ್ ಸಾಲ್ಯಾನ್ ಮುಂತಾದವರು ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಮುರಳೀನಾಥ್ ಶೆಟ್ಟಿ ಸ್ವಾಗತಿಸಿ ಧನ್ಯವಾದ ಸಮರ್ಪಣೆ ಮಾಡಿದರು.
