Site icon ಉಡುಪಿ ನ್ಯೂಸ್ ಪ್ಲಸ್

ದೇಶದ ಆರ್ಥಿಕ ವ್ಯವಸ್ಥೆಯನ್ನು ಸಹಕಾರಿ ಕ್ಷೇತ್ರದಿಂದ ಪ್ರಗತಿ ಪಥದತ್ತ ಕೊಂಡೊಯ್ಯಲು ಸಾಧ್ಯವಿದೆ. -ಜಯಕರ ಶೆಟ್ಟಿ

ಉಡುಪಿ: ದೇಶದ ಆರ್ಥಿಕ ವ್ಯವಸ್ಥೆಯನ್ನು ಸಹಕಾರಿ ಕ್ಷೇತ್ರದಿಂದ ಪ್ರಗತಿ ಪಥದತ್ತ ಕೊಂಡೊಯ್ಯಲು ಸಾಧ್ಯವಿದೆ. ಇದನ್ನು ಮನಗಂಡಿರುವ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಸಹಕಾರಿ ಕ್ಷೇತ್ರದ ಅಭಿವೃದ್ಧಿಗೆ ಹಲವಾರು ನೀತಿಗಳನ್ನು ಜಾರಿಗೊಳಿಸುತ್ತಿದೆ. ಇದನ್ನು ಎಲ್ಲರಿಗೂ ತಲುಪಿಸುವ ಕೆಲಸ ಆಗಬೇಕಿದೆ ಎಂದು ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್​ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಹೇಳಿದರು.

ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್​ ಹಾಗೂ ಸಹಕಾರ ಇಲಾಖೆ ಆಶ್ರಯದಲ್ಲಿ ಮೈಸೂರು ವಿಭಾಗದ ಮೀನುಗಾರರ ಸಹಕಾರ ಸಂಘಗಳ ಪದಾಧಿಕಾರಿಗಳು ಹಾಗೂ ಸಿಇಒಗಳಿಗೆ ರಾಜ್ಯ ಮಟ್ಟದ ವಿಶೇಷ ತರಬೇತಿ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ಯಶಪಾಲ್​ ಸುವರ್ಣ ಅವರು, ಕೇರಳದಿಂದ ಗುಜರಾತ್​ವರೆಗಿನ ಪಶ್ಚಿಮ ಕರಾವಳಿಯಲ್ಲಿ ಮೀನುಗಾರಿಕೆಗೆ ಏಕರೂಪದ ಕಾನೂನು ಜಾರಿಗೊಳಿಸುವ ಅಗತ್ಯವಿದೆ. ಇದರಿಂದ ಮೀನುಗಾರಿಕೆಗೆ ಅನುಕೂಲವಾಗಲಿದೆ. ಅದೇ ರೀತಿ ಮೀನುಗಾರರಿಗೆ ಸಹಕಾರಿ ಸಂಘಗಳಲ್ಲಿ ಸಬ್ಸಿಡಿ ದರದಲ್ಲಿ ಸಾಲ ಸೌಲಭ್ಯ ನೀಡುವ ಅಗತ್ಯವಿದೆ ಎಂದು ಹೇಳಿದರು.

ಯೂನಿಯನ್​ ಉಪಾಧ್ಯಕ್ಷ ಅಶೋಕ್​ ಕುಮಾರ್​ ಬಲ್ಲಾಳ್​, ನಿರ್ದೇಶಕರಾದ ದೇವಿಪ್ರಸಾದ್​ ಶೆಟ್ಟಿ, ಸುಧೀರ್​ ವೈ., ಪ್ರಸಾದ್​ ಶೆಟ್ಟಿ,ಅರುಣ್​ ಕುಮಾರ್​ ಹೆಗ್ಡೆ, ಹರೀಶ್​ ಕಿಣಿ, ಶ್ರೀಧರ ಪಿ.ಎಸ್​., ಸುರೇಶ್​ ರಾವ್​, ಸಹಕಾರ ಇಲಾಖೆ ನಿವೃತ್ತ ಜಂಟಿ ನಿಬಂಧಕ ಎಸ್​. ಎನ್​. ಸಂತೋಷ್​ ಕುಮಾರ್​ ಉಪಸ್ಥಿತರಿದ್ದರು. ಸಹಕಾರ ಯೂನಿಯನ್​ ಸಿಇಒ ಅನುಷಾ ಕೋಟ್ಯಾನ್​ ಕಾರ್ಯಕ್ರಮ ನಿರೂಪಿಸಿದರು.

Exit mobile version