ಉಡುಪಿ: ಬನ್ನಂಜೆಯಲ್ಲಿರುವ ಉಡುಪಿ ಕೆಎಸ್ಆರ್ಟಿಸಿ ಬಸ್ ನಿಲ್ದಾಣಕ್ಕೆ ರಾಜ್ಯ ಸರಕಾರದ ಪಂಚ ಗ್ಯಾರಂಟಿ ಯೋಜನೆಗಳ ಉಡುಪಿ ಜಿಲ್ಲಾ ಅನುಷ್ಟಾನ ಸಮಿತಿ ಅಧಿಕಾರಿಗಳೊಂದಿಗೆ ಮಂಗಳವಾರ ಭೇಟಿ ನೀಡಿ ಪರಿಶೀಲಿಸಿತು. ಇಂದು ನಡೆದ ಸಮಿತಿಯ ಮೊದಲ ಸಭೆಯಲ್ಲಿ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿನ ಸಮಸ್ಯೆಗಳ ಕುರಿತು ಚರ್ಚೆಗಳು ನಡೆದಿದ್ದವು. ಈ ಹಿನ್ನೆಲೆಯಲ್ಲಿ ಜಿಲ್ಲಾಧ್ಯಕ್ಷ ಅಶೋಕ್ ಕೊಡವೂರು ನೇತೃತ್ವದಲ್ಲಿ ನಿಲ್ದಾಣಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಾಯಿತು.ಶೌಚಾಲಯಕ್ಕೆ ಭೇಟಿ ನೀಡಿದಾಗ ಶುಚಿತ್ವದ ಕೊರತೆಯಿಂದ ಗಬ್ಬು ವಾಸನೆ ಬೀರುತ್ತಿತ್ತು. ಪುರುಷರ ಶೌಚಾಲಯದಲ್ಲಿ ಬಿಯರ್ ಬಾಟಲಿ ಹಾಗೂ ಮಹಿಳೆ ಶೌಚಾಲಯದಲ್ಲಿ ಕಸದ ರಾಶಿ ಕಂಡುಬಂತು. ಅದೇ ರೀತಿ ವಿಕಲಚೇತನರ ಶೌಚಾಲಯದಲ್ಲಿ ಫ್ಲೇಶ್ ವ್ಯವಸ್ಥೆ ಇಲ್ಲದಿರುವುದು ಮತ್ತು ಗಾಲಿ ಕುರ್ಚಿಯನ್ನು ಬೇರೆಲ್ಲೋ ಇಟ್ಟಿರುವುದಕ್ಕೆ ಸಮಿತಿಯವರು ಅಸಮಾಧಾನ ವ್ಯಕ್ತಪಡಿಸಿದರು. ಪಾರ್ಕಿಂಗ್ ಪ್ರದೇಶದಲ್ಲಿ ಗಂಟೆ ಲೆಕ್ಕದಲ್ಲಿ ಹಣ ಪಡೆದರೂ ಶುಚಿತ್ವ ಕಾಪಾಡುತ್ತಿರಲಿಲ್ಲ. ಎಲ್ಲೆಂದರಲ್ಲಿ ಕಸದ ರಾಶಿಗಳು ಕಂಡುಬಂದವು. ಅದೇ ರೀತಿ ನೆಲ ಮಹಡಿಯಿಂದ ಮೊದಲ ಮಹಡಿಗೆ ಹೋಗಲು ಇರುವ ಎರಡೂ ಎಕ್ಸಲೇಟರ್ನ್ನು ಬಂದ್ ಮಾಡಿ ಇಡಲಾಗಿತ್ತು. ವೃದ್ಧರು ಮಹಡಿ ಹತ್ತಿ ಹೋಗಲು ಕಷ್ಟಪಡುತ್ತಿರುವುದು ಸಮಿತಿಯವರ ಗಮನಕ್ಕೆ ಬಂತು. ಈ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಮತ್ತು ನಿರ್ವಹಣೆಯನ್ನು ಸರಿಯಾಗಿ ಮಾಡುವಂತೆ ಸಮಿತಿಯವರು ಸಂಬಂಧಪಟ್ಟ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು ಈ ಸಂದರ್ಭದಲ್ಲಿ ಸಮಿತಿಯ ಉಡುಪಿ ಸಮಿತಿ ಅಧ್ಯಕ್ಷ ರಮೇಶ್ ಕಾಂಚನ್, ಉಪಾಧ್ಯಕ್ಷರಾದ ಪ್ರಶಾಂತ್ ಜತ್ತನ್ನ, ಗೀತಾ ವಾಗ್ಳೆ, ಸತೀಶ್ ಜಪ್ತಿ, ಬ್ರಹ್ಮಾವರ ಸಮಿತಿ ಅಧ್ಯಕ್ಷೆ ಡಾ.ಸುನೀತಾ ಶೆಟ್ಟಿ, ಕೆಎಸ್ಆರ್ಟಿಸಿ ಮಂಗಳೂರು ವಿಭಾಗದ ಸಹಾಯಕ ಸಂಚಾರ ವ್ಯವಸ್ಥಾಪಕಿ ನಿರ್ಮಲ, ಉಡುಪಿ ಡಿಪ್ಪೋ ಪ್ರಭಾರ ವ್ಯವಸ್ಥಾಪಕ ಅಶೋಕ್ ಹೆಗ್ಡೆ, ನಿಲ್ದಾಣದ ಸಂಚಾರ ನಿರೀಕ್ಷಕ ರವೀಂದ್ರ ಮೊದಲಾದವರು ಹಾಜರಿದ್ದರು.
ಉಡುಪಿ ಜಿಲ್ಲಾ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಸಮಿತಿಯಿಂದ ಕೆಎಸ್ಆರ್ಟಿಸಿ ಬಸ್ ನಿಲ್ದಾಣಕ್ಕೆ ಭೇಟಿ ಪರಿಶೀಲನೆ!

